ಬೆಳ್ತಂಗಡಿ : ದಿನಾಂಕ 10-02-2026 ರ ರಾತ್ರಿ ವೇಳೆ, ಜಿತೇಶ್ ಎಂಬ ಯುವಕನು ತನ್ನ ದ್ವಿಚಕ್ರ ವಾಹನದಲ್ಲಿ ಸಂಚರಿಸುತ್ತಿದ್ದಾಗ ದುರದೃಷ್ಟಕರ ರಸ್ತೆ ಅಪಘಾತ ಸಂಭವಿಸಿದೆ. ಆ ಸಂದರ್ಭದಲ್ಲಿ ಅದೇ ಮಾರ್ಗದಲ್ಲಿ ಪ್ರಯಾಣಿಸುತ್ತಿದ್ದ ನಮ್ಮ ಬೆಳ್ತಂಗಡಿ ತಾಲೂಕಿನ ಶಾಸಕರಾದ ಹರೀಶ್ ಪೂಂಜಾ ಅವರು ತಕ್ಷಣವೇ ತಮ್ಮ ವಾಹನವನ್ನು ನಿಲ್ಲಿಸಿ, ಗಾಯಗೊಂಡ ಜಿತೇಶ್ನ ಸ್ಥಿತಿಯನ್ನು ಪರಿಶೀಲಿಸಿ, ಯಾವುದೇ ವಿಳಂಬವಿಲ್ಲದೆ ಆಸ್ಪತ್ರೆಗೆ ದಾಖಲಿಸಿ ಪ್ರಥಮ ಚಿಕಿತ್ಸೆ ಒದಗಿಸುವ ಮೂಲಕ ತುರ್ತು ಸ್ಪಂದನೆಯನ್ನು ತೋರಿಸಿದ್ದಾರೆ.
ಜಿತೇಶ್ ಅಪಘಾತ ಆದ ಸುದ್ದಿ ಕೇಳಿ ಕರಾವಳಿಯ ಉದ್ಯಮಿ, ಧಾರ್ಮಿಕ ಮುಖಂಡ ಕಿರಣ್ ಚಂದ್ರ ಡಿ.ಪುಷ್ಪಗಿರಿಯವರು ಜಿತೇಶ್ನ ಮನೆಗೆ ಸ್ವತಃ ಭೇಟಿ ನೀಡಿ, ಕುಟುಂಬಸ್ಥರಿಗೆ ಧೈರ್ಯ ತುಂಬಿ, ಜಿತೇಶ್ನ ಆರೋಗ್ಯ ವಿಚಾರಿಸಿದ್ದಾರೆ. ಅಲ್ಲದೆ ಆತನ ಸಂಪೂರ್ಣ ಚಿಕಿತ್ಸಾ ವೆಚ್ಚವನ್ನು ತಾವೇ ಭರಿಸಿ, ಕುಟುಂಬಕ್ಕೆ ನಿಜವಾದ ಸಾಂತ್ವನ ಹೇಳಿದ್ದಾರೆ.
ಚಿಕಿತ್ಸೆ ನಡೆಯುತ್ತಿರುವ ಅವಧಿಯಲ್ಲೇ ಕುಟುಂಬದ ಜೊತೆ ಖುದ್ದಾಗಿ ನಿಂತು ಆಸ್ಪತ್ರೆಯ ಎಲ್ಲಾ ವ್ಯವಸ್ಥೆಗಳನ್ನು ಮಾಡಿದ್ದಾರೆ ಕಿರಣ್ ಚಂದ್ರ ಪುಷ್ಪಗಿರಿಯವರು. ತಮ್ಮ ಬಿಡುವಿಲ್ಲದ ಕಾರ್ಯಕ್ರಮಗಳ ಮಧ್ಯೆಯೂ ಆಸ್ಪತ್ರೆಯಲ್ಲಿ ಹೆಚ್ಚು ಸಮಯ ಸಾಮಾನ್ಯ ಕುಟುಂಬ ಒಂದರ ಸಂಕಷ್ಟಕ್ಕೆ ಆಸರೆಯಾಗಿರುವುದು ಇದೀಗ ವ್ಯಾಪಕ ಶ್ಲಾಘನೆಗೆ ಕಾರಣವಾಗಿದೆ.

