ಮೂಡುಬಿದಿರೆ: ದೀಪಾವಳಿ ಹಬ್ಬದ ಪ್ರಯುಕ್ತ ಸಮಾಜ ಮಂದಿರ ಸಭಾ ಮತ್ತು ಯುವವಾಹಿನಿ ಮೂಡುಬಿದಿರೆ ಘಟಕ ಜಂಟಿಯಾಗಿ ಸಾರ್ವಜನಿಕರಿಗಾಗಿ 4ನೇ ವರ್ಷದ ಗೂಡುದೀಪ ಮತ್ತು ರಂಗೋಲಿ ಸ್ಪರ್ಧೆಯನ್ನು ಶನಿವಾರ ಆಯೋಜಿಸಲಾಯಿತು.
ಮಾಜಿ ಸಚಿವ, ಸಮಾಜಮಂದಿರ ಸಭಾದ ಅಧ್ಯಕ್ಷ ಕೆ.ಅಭಯಚಂದ್ರ ಜೈನ್ ಸ್ಪರ್ಧೆಯನ್ನು ಉದ್ಘಾಟಿಸಿ, ಪ್ರತಿಭೆಯನ್ನು ಪ್ರದರ್ಶಿಸುವಂತ ವೇದಿಕೆಯಾಗಿದೆ. ಇದಕ್ಕೆ ಡಾ.ಎಂ ಮೋಹನ ಆಳ್ವ ಅವರು ತಮ್ಮ ವಿಶಿಷ್ಟ ಕಾರ್ಯಕ್ರಮಗಳ ಮೂಲಕ ಬುನಾದಿ ಹಾಕಿಕೊಟ್ಟಿದ್ದಾರೆ ಎಂದರು.
ಯುವವಾಹಿನಿ ಮೂಡುಬಿದಿರೆ ಘಟಕದ ಅಧ್ಯಕ್ಷ ಮುರಳೀಧರ ಕೋಟ್ಯಾನ್ ಅಧ್ಯಕ್ಷತೆವಹಿಸಿದರು.
ಪಶುವೈದ್ಯಕೀಯ ಇಲಾಖೆಯ ಸಿಬ್ಬಂದಿ, ಯುವವಾಹಿನಿಯ ಸಲಹೆಗಾರ್ತಿ ವಿನುತಾ ಆನಂದ್ ಗಾಂಧಿನಗರ ಹಾಗೂ 25 ಬಾರಿ ರಕ್ತದಾನ ಮಾಡಿದ ಯುವವಾಹಿನಿಯ ಉಪಾಧ್ಯಕ್ಷ ಗಿರೀಶ್ ಕೋಟ್ಯಾನ್ ಅವರನ್ನು ಸನ್ಮಾನಿಸಲಾಯಿತು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ವಿವೇಕ್ ಆಳ್ವ ಮುಖ್ಯ ಅತಿಥಿಯಾಗಿ ಮಾತನಾಡಿ, ಸ್ಪರ್ಧೆಗೆ ಭಾಗವಹಿಸಿದ ಪ್ರತಿಯೊಬ್ಬರು ತಮ್ಮ ಪ್ರತಿಭೆಯ ಮೂಲಕ ಇಲ್ಲಿ ಗೂಡುದೀಪ, ರಂಗೋಲಿಯನ್ನು ಅರಲಿಸಿದ್ದಾರೆ. ಎಲ್ಲರು ಬಹುಮಾನವನ್ನು ಗೆಲ್ಲಲು ಸಾಧ್ಯವಿಲ್ಲದಿದ್ದರೂ ತಮ್ಮ ಪ್ರತಿಭೆ ಮೂಲಕ ಮನಸ್ಸನ್ನು ಗೆದ್ದಿದ್ದಾರೆ. ಇಂತಹ ಪ್ರಯತ್ನಗಳು ಯುವವಾಹಿನಿ ಘಟಕದ ಮುಖಾಂತರ ಸದಾ ನಡೆಯುತ್ತಿರಲಿ ಎಂದು ಶುಭ ಹಾರೈಸಿದರು.
ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತ ಸಮಿತಿಯ ಸದಸ್ಯವಾಗ್ಮಿ ಅಜಿತ್ ಕುಮಾರ್ ಪಾಲೇರಿ ದೀಪಾವಳಿಯ ಸಂದೇಶ ನೀಡಿದರು.
ಉದ್ಯಮಿಗಳಾದ ಅಬುಅಲಾ ಪುತ್ತಿಗೆ, ಜಾವೇದ್ ಶೇಖ್, ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷ ಲೋಕೇಶ್ ಕೋಟ್ಯಾನ್ ಕೂಳೂರು, ಯುವವಾಹಿನಿ ಸಲಹೆಗಾರ ಕುಮಾರ್ ಪೂಜಾರಿ ಇರುವೈಲು, ಪುರಸಭೆ ಸದಸ್ಯರಾದ ಸುರೇಶ್ ಪ್ರಭು, ಸುರೇಶ್ ಕೋಟ್ಯಾನ್. ಯುವವಾಹಿನಿ ಕಾರ್ಯದರ್ಶಿ ವಿನೀತ್ ಮತ್ತಿತರರಿದ್ದರು.
ಜಗದೀಶ್ಚಂದ್ರ ಡಿ.ಕೆ ಪ್ರಾಸ್ತವನೆಗೈದು, ಸ್ವಾಗತಿಸಿದರು. ಶಂಕರ್ ಕೋಟ್ಯಾನ್ ಹಾಗೂ ಸುಧಾಕರ್ ಅಳಿಯೂರ್ ನಿರೂಪಿಸಿದರು.ನವಾನಂದ ಬಹುಮಾನ ವಿಜೇತರ ವಿವರ ನೀಡಿದರು. ಜತೆ ಕಾರ್ಯದರ್ಶಿ ಮೇಘನಾ ವಂದಿಸಿದರು.
ವರದಿ:ಜಗದೀಶ ಪೂಜಾರಿ

