ಎಸ್.ಡಿ.ಎಂ(ಸ್ವಾಯತ್ತ) ಕಾಲೇಜು ಉಜಿರೆ : ರಾಜ್ಯ ಮಟ್ಟದ ವಿಚಾರ ಸಂಕಿರಣಕ್ಕೆ ಚಾಲನೆ

0
13

ಉಜಿರೆ : ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸ್ವಾಯತ್ತ ಕಾಲೇಜಿನ SDM-Rotary Career Guidance & Placement Centre ಹಾಗೂ ಆಂತರಿಕ ಗುಣಮಟ್ಟ ಭರವಸೆ ಕೋಶ (IQAC) ಸಹಯೋಗದಲ್ಲಿ ‘ಗ್ರಾಮೀಣ ಯುವಕರ ಪ್ರತಿಭೆಗಳ ಅನಾವರಣ – ವಿಕಸಿತ ಭಾರತ 2047 ಗೆ ಮಾರ್ಗಸೂಚಿ’ ಎಂಬ ವಿಷಯದ ಕುರಿತು ಕಾಲೇಜಿನ ಸಮ್ಯಕ್ ದರ್ಶನ ಸಭಾಭವನದಲ್ಲಿ ಆಯೋಜಿಸಿದ್ದ ಒಂದು ದಿನದ  ರಾಜ್ಯಮಟ್ಟದ ಕಾರ್ಯಾಗಾರಕ್ಕೆ ಚಾಲನೆ ನೀಡಲಾಯಿತು.

ಕಾರ್ಯಾಗಾರವನ್ನು ಬೆಂಗಳೂರಿನ ಖ್ಯಾತ ಅರ್ಥಶಾಸ್ತ್ರಜ್ಞ ಎಸ್. ವಿಶ್ವನಾಥ ಭಟ್ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಬಳಿಕ ಮಾತನಾಡಿ, ಭಾರತ ತನ್ನ ಆರಂಭ ಕಾಲದಿಂದಲೂ ಸಾಂಸ್ಕೃತಿಕವಾಗಿ , ಸಾಮಾಜಿಕವಾಗಿ ಅತ್ಯಂತ ಪ್ರಬುದ್ಧತೆಯನ್ನು ಹೊಂದಿದ ದೇಶ. ಕಾಲ ಕ್ರಮೇಣ ಪರಕೀಯರ ನಿರಂತರ ದಾಳಿಗೆ ಒಳಗಾಗಿ ಅಭಿವೃದ್ದಿಯ ಒಡೆತನವನ್ನು ಎದುರಿಸಿತು. ಬದಲಾದ ಕಾಲ ಘಟ್ಟದಲ್ಲಿ ದೇಶದ ಸ್ವದೇಶಿ ಚಿಂತನೆ, ಶೈಕ್ಷಣಿಕ ಬೆಳವಣಿಗೆ, ಸಾಮಾಜಿಕ ಬಲವರ್ಧನೆ, ರಾಜತಾಂತ್ರಿಕತೆ ಇತ್ಯಾದಿ ಯೋಜನೆಗಳ ಮೂಲಕ ಭಾರತ ಅಂತರಾಷ್ಟ್ರಮಟ್ಟದಲ್ಲಿ ತೆರೆದುಕೊಂಡಿದೆ. ಭವಿಷ್ಯದ ಪೀಳಿಗೆಗೆ ಭಾರತವನ್ನು ಪರಿಚಯಿಸಲು ಮತ್ತಷ್ಟು ಅಭಿವೃದ್ಧಿಯ ಅವಶ್ಯಕತೆ ಇದೆ. ದೇಶದ ಸ್ವಾತಂತ್ರ್ಯಕ್ಕೆ 2047ರಂದು  ನೂರು ವರ್ಷ ತುಂಬುವುರಿಂದ ಗ್ರಾಮೀಣ ಭಾರತವನ್ನು ರಾಷ್ಟ್ರ ಮಟ್ಟದಲ್ಲಿ ಅಭಿವೃದ್ಧಿ ಪಡಿಸಲು ಹಲವಾರು ಯೋಜನೆಗಳನ್ನು ರೂಪಿಸಿಕೊಂಡಿದೆ. ಶಸಕ್ತ ಮತ್ತು ಸಂಘಟಿತ ಸಮಾಜವೇ ವಿಕಸಿತ ಭಾರತ. ಯುವ ಸಮುದಾಯ ಈ ನೆಲದ ಸಂಸ್ಕೃತಿ, ಆಚರಣೆ, ಕಲೆ, ಸಾಂಪ್ರದಾಯ ಇತ್ಯಾದಿ ಮೂಲ ಜ್ಞಾನ ಮತ್ತು ಪರಂಪರೆಯನ್ನು ಪೋಷಿಸುವ ಮೂಲಕ  ಸಂಘಟಿತರಾಗಬೇಕು. ಸಂಘಟನೆಯ ಮೂಲಕ ಸದೃಢ ಮತ್ತು ನೆಮ್ಮದಿಯ ಭಾರತವನ್ನು ನಿರ್ಮಿಸಬೇಕು ಎಂದರು.

ಕಾರ್ಯಕ್ರಮದ ಮುಖ್ಯ ಅತಿಥಿಯಾಗಿದ್ದ ತುಮಕೂರು ವಿಶ್ವವಿದ್ಯಾಲಯದ ನಿವೃತ್ತ ಕುಲಪತಿಗಳಾದ ಪ್ರೊ. ಜಯಶೀಲಾ ಮಾತನಾಡಿ, ದೇಶದ ಭವಿಷ್ಯ ಯುವ ಸಮುದಾಯ ಬೆಳವಣಿಗೆಯ ಮೇಲೆ ನಿಂತಿದೆ. ಗ್ರಾಮೀಣ ಭಾಗಗಳ ವಿಕಸನ ಸಾಧ್ಯವಾಗಬೇಕೆಂದರೆ ಯುವಕರು ಶೈಕ್ಷಣಿಕ ಬೆಳವಣಿಗೆಯ ಜೊತೆಗೆ ಕೌಶಲ್ಯಾದರಿತ ಉದ್ಯಮಶೀಲ ರಾಗಬೇಕು. ತಂತ್ರಜ್ಞಾನದ ಬಳಕೆಯ ಜೊತೆಗೆ ಸಾಮಾಜಿಕ ಕಾಳಜಿ ಮತ್ತು ಜವಾಬ್ದಾರಿಯಿಂದ ದೇಶ ಕಟ್ಟಲು ಶ್ರವಿಸಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಪ್ರೊ. ವಿಶ್ವನಾಥ್ ಪಿ ಮಾತನಾಡಿ, ಗ್ರಾಮೀಣ ಭಾರತವನ್ನು ಬಲಗೊಳಿಸಲು  ಶ್ರೀ ಕ್ಷೇತ್ರ ಧರ್ಮಸ್ಥಳ ಸಂಸ್ಥೆಯು ಈಗಾಗಲೇ ಎಸ್.ಕೆ.ಡಿ.ಆರ್.ಡಿ.ಪಿ, ಸಿರಿ, ರುಡ್ ಸೆಟಿಯಂತಹ ಮಹತ್ತರ ಯೋಜನೆಗಳನ್ನು ಅನುಷ್ಠಾನಗೊಳಿಸಿ ಯಶಸ್ವಿಯಾಗಿದೆ. ಇದರ ಜೊತೆಗೆ ಉಜಿರೆಯ ಎಸ್.ಡಿ.ಎಂ ಪದವಿ ಕಾಲೇಜಿನಲ್ಲಿ ಗ್ರಾಮೀಣ ಅಭಿವೃದ್ಧಿ ಎಂಬ ವಿಶೇಷ ಪಠ್ಯ ತರಗತಿಯನ್ನೇ ಜಾರಿ ತಂದಿದೆ. ಗ್ರಾಮೀಣ ಗುಂಪುಗಳು ಬೆಳೆದಾಗ ಗ್ರಾಮ ಬೆಳೆಯುತ್ತದೆ. ಗ್ರಾಮಗಳು ಬೆಳೆದಾಗ ದೇಶ ವಿಕಸಿತವಾಗುತ್ತದೆ. ಗ್ರಾಮೀಣ ಜನರು ಮುಖ್ಯ ವಾಹಿನಿಗೆ ತೆರೆದುಕೊಳ್ಳಲು ಅವಕಾಶಗಳ ಕೊರತೆ ಇದೆ. ಈ ದಿಸೆಯಲ್ಲಿ ಕಾಲೇಜಿನಲ್ಲಿ ಆಯೋಜಿಸಿರುವ ವಿಕಸಿತ್  ಭಾರತ್ -2047 ಕುರಿತಾದ ವಿಚಾರ ಸಂಕಿರಣ ಹಲವಾರು ಬದಲಾವಣೆಗಳಿಗೆ ವೇದಿಕೆಯಾಗಲಿದೆ ಮತ್ತು ಅವಕಾಶಗಳನ್ನು ಕಲ್ಪಿಸಿಕೊಡಲಿದೆ ಎಂದು ಕಾರ್ಯಕ್ರಮದ ಆಯೋಜಕರಾದ ಕಾಲೇಜಿನ SDM-Rotary Career Guidance & Placement Centre ಹಾಗೂ ಆಂತರಿಕ ಗುಣಮಟ್ಟ ಭರವಸೆ ಕೋಶ (IQAC) ಗೆ ವಿಶೇಷ ಅಭಿನಂದನೆ ವ್ಯಕ್ತ ಪಡಿಸಿದರು.

ಕಾರ್ಯಕ್ರಮದಲ್ಲಿ ವೇದಿಕೆಯಲ್ಲಿ NABARD ಸಂಸ್ಥೆಯ ನಿವೃತ್ತ ಸಹಾಯಕ ಮಹಾಪ್ರಬಂಧಕರಾದ ವೈ.ವಿ. ಗುಂಡುರಾವ್, ಸಂಸ್ಥೆಯ ಶೈಕ್ಷಣಿಕ ಸಂಯೋಜಕ ಎನ್ ಶಶಿಶೇಖರ್ ಕಾಕತ್ಕಾರ್ SDM-Rotary Career Guidance & Placement Centre ನ ನಾಗರಾಜ್ ಪೂಜಾರಿ, IQAC ಸಂಯೋಜಕರಾದ ಜಿ.ಆರ್. ಭಟ್ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಕಾಲೇಜಿನ ಉಪ ಪ್ರಾಂಶುಪಾಲರಾದ ನಂದ ಕುಮಾರಿ, ಸ್ನಾತಕೋತ್ತರ ಕೇಂದ್ರದ ಡೀನ್ ಸೌಮ್ಯ ಕುಮಾರಿ, ಆಡಳಿತ ಕುಲಸಚಿವ ಡಾ. ಶ್ರೀಧರ್ ಭಟ್, ಪರೀಕ್ಷಾಂಗ ಕುಲಸಚಿವ ಗಣೇಶ್ ನಾಯಕ್, ಸೇರಿದಂತೆ ಕಾಲೇಜಿನ ಉಪನ್ಯಾಸಕರು, ವಿದ್ಯಾರ್ಥಿಗಳು ಮತ್ತು ವಿವಿಧ ವಿಶ್ವವಿದ್ಯಾಲಯಗಳ ಪ್ರತಿನಿಧಿಗಳು ಭಾಗಿಯಾಗಿದ್ದರು. ಕಾರ್ಯಕ್ರಮವನ್ನು ಕಾಲೇಜಿನ ಸಸ್ಯಶಾಸ್ತ್ರ ವಿಭಾಗದ ಉಪನ್ಯಾಸಕ ದೀಕ್ಷಿತ್ ರೈ ನಿರೂಪಿಸಿದರು. SDM-Rotary Career Guidance & Placement Centre ನ ನಾಗರಾಜ್ ಪೂಜಾರಿ ಕಾರ್ಯಕ್ರಮವನ್ನು ಸಂಯೋಜಿಸಿ ವಂದಿಸಿದರು.

ಗ್ರಾಮೀಣ ಯುವಕರ ಪ್ರತಿಭೆಗಳ ಅನಾವರಣ – ವಿಕಸಿತ ಭಾರತ 2047 ಪುಸ್ತಕ ಬಿಡುಗಡೆ :

ಗ್ರಾಮೀಣ ಯುವಕರ ಪ್ರತಿಭೆಗಳ ಅನಾವರಣ – ವಿಕಸಿತ ಭಾರತ 2047 ಗೆ ಮಾರ್ಗಸೂಚಿ ವಿಷಯದ ಕುರಿತಾಗಿ ದೇಶದ ಪ್ರಮುಖ ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕ ತಜ್ಞರ ಲೇಖನಗಳನ್ನು ಹೊಂದಿರುವ ಸುಮಾರು 466 ಪುಟಗಳ ಪುಸ್ತಕವನ್ನು ವೇದಿಕೆಯಲ್ಲಿ ತುಮಕೂರು ವಿಶ್ವವಿದ್ಯಾಲಯದ ನಿವೃತ್ತ ಕುಲಪತಿಗಳಾದ ಪ್ರೊ. ಜಯಶೀಲಾ  ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ಅತಿಥಿಗಳಾದ ಬೆಂಗಳೂರಿನ ಖ್ಯಾತ ಅರ್ಥಶಾಸ್ತ್ರಜ್ಞ ಎಸ್. ವಿಶ್ವನಾಥ ಭಟ್, NABARD ಸಂಸ್ಥೆಯ ನಿವೃತ್ತ ಸಹಾಯಕ ಮಹಾಪ್ರಬಂಧಕರಾದ ವೈ.ವಿ. ಗುಂಡುರಾವ್, ಕಾಲೇಜಿನ ಪ್ರಾಂಶುಪಾಲ ಪ್ರೊ ವಿಶ್ವನಾಥ್ ಪಿ, SDM-Rotary Career Guidance & Placement Centre ನ ನಾಗರಾಜ್ ಪೂಜಾರಿ, IQAC ಸಂಯೋಜಕರಾದ ಜಿ.ಆರ್. ಭಟ್ ಮತ್ತಿತರರು ಉಪಸ್ಥಿತರಿದ್ದರು.

100 ಕ್ಕೂ ಅಧಿಕ ಪ್ರತಿನಿಧಿಗಳಿಂದ ವಿಚಾರ ಮಂಡನೆ :

ಒಂದು ದಿನದ ರಾಜ್ಯಮಟ್ಟದ ‘ಗ್ರಾಮೀಣ ಯುವಕರ ಪ್ರತಿಭೆಗಳ ಅನಾವರಣ – ವಿಕಸಿತ ಭಾರತ 2047 ಗೆ ಮಾರ್ಗಸೂಚಿ’ ವಿಚಾರ ಸಂಕಿರಣದಲ್ಲಿ ರಾಜ್ಯದ ವ ಬೆಂಗಳೂರು, ಮಂಗಳೂರು, ಹಾಸನ, ತುಮಕೂರು ಸೇರಿದಂತೆ ವಿವಿಧ ಭಾಗದ ವಿಶ್ವವಿದ್ಯಾಲಯಗಳಿಂದ 100 ಕ್ಕೂ ಅಧಿಕ ಪ್ರತಿನಿಧಿಗಳು ಸಮ್ಮೇಳನದಲ್ಲಿ ಸಕ್ರೀಯವಾಗಿ ಭಾಗವಹಿಸಿ , ವಿಚಾರ ಮಂಡನೆ ಮಾಡಿದರು.

ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾದ ಡಾ.ಡಿ ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ಸಾಗುತ್ತಿರುವ ಎಸ್.ಡಿ.ಎಂ ಶಿಕ್ಷಣ ಸಂಸ್ಥೆಯು ಮೌಲ್ಯಯುತ ಶಿಕ್ಷಣ ನೀಡುವುದರ ಜೊತೆಗೆ ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿಗಾಗಿ ನಾನ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬಂದಿದೆ. ವಿಶೇಷವಾಗಿ ವಿದ್ಯಾರ್ಥಿಗಳಲ್ಲಿ ದೇಶದ ಪ್ರಗತಿಯ ವೈಚಾರಿಕ ಪ್ರಬುದ್ಧತೆಯನ್ನು ಹೆಚ್ಚಿಸಲು ವಿಚಾರ ಮಂಥನ ಕಾರ್ಯಕ್ರಮಗಳನ್ನು ನಿರಂತರವಾಗಿ ನಡೆಸಲಾಗುತ್ತಿದೆ. ಇದರ ಭಾಗವಾಗಿ ಇಂದು ಕಾಲೇಜಿನಲ್ಲಿ ರಾಜ್ಯ ಮಟ್ಟದ ವಿಚಾರ ಸಂಕಿರಣ ನಡೆಯುತ್ತಿದೆ. ಇದು ವಿದ್ಯಾರ್ಥಿಗಳಲ್ಲಿ ಗ್ರಾಮೀಣ ಅಭಿವೃದ್ಧಿ, ಪ್ರತಿಭಾ ಅನಾವರಣ, ಉದ್ಯೋಗ ಶೀಲತೆ, ಉದ್ಯಮ ಇತ್ಯಾದಿ ವಿಚಾರಗಳ ಕುರಿತು ಜಾಗತಿಕ ಮಟ್ಟದಲ್ಲಿ ತೆರೆದುಕೊಳ್ಳಲು ಅರಿವು ಮತ್ತು ಜಾಗೃತಿಯನ್ನು ಮೂಡಿಸುತ್ತದೆ. – ಡಾ. ಸತೀಶ್ಚಂದ್ರ ಎಸ್ ಕಾರ್ಯದರ್ಶಿಗಳು, ಎಸ್.ಡಿ.ಎಂ ಶಿಕ್ಷಣ ಸಂಸ್ಥೆ ಉಜಿರೆ.
                         
   

LEAVE A REPLY

Please enter your comment!
Please enter your name here