ಸುಳ್ಯ/ಸುಬ್ರಹ್ಮಣ್ಯ,: ಸುಳ್ಯದ ಡಾ| ರೇಣುಕಾಪ್ರಸಾದ್ ಕೆ.ವಿ. ಮತ್ತು ಮನೆಯವರು ಸೇವಾ ರೂಪದಲ್ಲಿ ಕುಕ್ಕೆ ಸುಬ್ರಹ್ಮಣ್ಯ ದೇವರಿಗೆ ಸಮರ್ಪಣೆ ಮಾಡುವ ಬೆಳ್ಳಿ ರಥದ ರಥಯಾತ್ರೆ ಬುಧವಾರ ಬೆಳಗ್ಗೆ ಸುಳ್ಯದಿಂದ ಹೊರಟು ಸಂಜೆ ಸುಬ್ರಹ್ಮಣ್ಯ ತಲುಪಿತು. ರಥ ಸಮರ್ಪಣೆ ಕಾರ್ಯಕ್ರಮ ನ. 10ರಂದು ನಡೆಯಲಿದೆ. ಮಂಗಳವಾರ ಬೆಳಗ್ಗೆ ಕೋಟೇಶ್ವರದಿಂದ ಹೊರಟಿದ್ದ ರಥ ಮೆರವಣಿಗೆ ರಾತ್ರಿ ಸುಳ್ಯಕ್ಕೆ ಆಗಮಿಸಿತ್ತು. ಪೈಚಾರಿನಿಂದ ಚೆನ್ನಕೇಶವ ದೇವಸ್ಥಾನದ ವರೆಗೂ ಮೆರವಣಿಗೆಯಲ್ಲಿ ಸಾಗಿ ಬಂದ ರಥಕ್ಕೆ ಅರ್ಚಕರು ಪೂಜೆ ಸಲ್ಲಿಸಿದರು. ಬಳಿಕ ರಥ ಯಾತ್ರೆ ಕಾಂತಮಂಗಲ ಅಮರಶ್ರೀ ಮೂಲಕ ಹಾದು ‘ಗುತ್ಯಮ್ಮ ಕ್ಷೇತ್ರ ಸನ್ನಿಧಿಯಲ್ಲಿ ತಂಗಿತು. ಬುಧವಾರ ಬೆಳಗ್ಗೆ ಶ್ರೀ ಗುತ್ಯಮ್ಮ ಕ್ಷೇತ್ರದಿಂದ ವಿವಿಧ ವೈದಿಕ, ಸಾಂಸ್ಕೃತಿಕ ಮೆರವಣಿಗೆಯೊಂದಿಗೆ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಯಾತ್ರೆ ಆರಂಭಗೊಂಡಿತು. ಸುಳ್ಯದ ಕೆವಿಜಿ ಜಂಕ್ಷನ್ನಲ್ಲಿ ಶಾಸಕಿ ಭಾಗೀರಥಿ ಮುರುಳ್ಯ ಅವರು ಕುಕ್ಕೆ ಸುಬ್ರಹ್ಮಣ್ಯ ಕಡೆಗೆ ಹೋಗುವ ರಥಯಾತ್ರೆಗೆ ಚಾಲನೆ ನೀಡಿದರು. ಮಾಜಿ ಸಂಸದ ನಳಿನ್ ಕುಮಾರ್ ಕಟೀಲು, ಎಪಿಎಲ್ ಇ ಕಮಿಟಿ ಬಿ ಅಧ್ಯಕ್ಷ ಡಾ| ರೇಣುಕಾಪ್ರಸಾದ್ ಕೆ.ವಿ.. ಡಾ| ಜ್ಯೋತಿ ಆರ್. ಪ್ರಸಾದ್, ಮೌರ್ಯ ಆರ್. ಪ್ರಸಾದ್ ಕುರುಂಜಿ, ಡಾ| ಅಭಿಜ್ಞಾ ಗೋಕುಲ್, ಗೋಕುಲ್ ಅರೆಭಾಷೆ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ ಗ್ಯಾರಂಟಿ ಅನುಷ್ಠಾನ ಸಮಿತಿ ಜಿಲ್ಲಾ ಅಧ್ಯಕ್ಷ ಭರತ್ ಮುಂಡೋಡಿ, ಎಒಎಲ್ಇ ಉಪಾಧ್ಯಕ್ಷೆ ಶೋಭಾ ಚಿದಾನಂದ ಪ್ರಧಾನ ಕಾರ್ಯದರ್ಶಿ ಅಕ್ಷಯ್ ಕೆ.ಸಿ, ಪ್ರಮುಖರಾದ ಚಂದ್ರಾ ಕೋಲ್ಕಾರ್, ಹರೀಶ್ ಕಂಜಿಪಿಲಿ, ವೆಂಕಟ್ ದಂಬೆಕೋಡಿ, ಮೋಹನ್ ರಾಂ ಸುಳ್ಯ, ಎಸ್.ಎನ್. ಮನ್ಮಥ, ಮತ್ತಿತರರು ಉಪಸ್ಥಿತರಿದ್ದರು.
ಸುಬ್ರಹ್ಮಣ್ಯದಲ್ಲಿ ಮೆರವಣಿಗೆ
ಸುಬ್ರಹ್ಮಣ್ಯ ಕಾಶಿಕಟ್ಟೆ ಬಳಿ ದೇವಸ್ಥಾನದ ವತಿಯಿಂದ ಬೆಳ್ಳಿ ರಥ ಯಾತ್ರೆಗೆ ಪೂರ್ಣಕುಂಭದ ಸ್ವಾಗತ ನೀಡಲಾಯಿತು. ಅರ್ಚಕರು ಪೂಜೆ ಸಲ್ಲಿಸಿದ ಬಳಿಕ ದೇವಸ್ಥಾನದವರೆಗೆ ನಡೆದ ಮೆರವಣಿಗೆಯಲ್ಲಿ ದೇವಸ್ಥಾನದ ಆನೆ ಯಶಸ್ವಿ ಸಾಥ್ ನೀಡಿತು. ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್ ಇಂಜಾಡಿ, ಸಮಿತಿ ಸದಸ್ಯರು, ಮಾಸ್ಟರ್ ಪ್ಲಾನ್, ಸದಸ್ಯರು, ದೇವಸ್ಥಾನದ ಇಒ ಅರವಿಂದ ಅಯ್ಯಪ್ಪ ಸುತಗುಂಡಿ ಎಂಬ ಯೇಸುರಾಜ್, ಮತ್ತಿತರರು ಉಪಸ್ಥಿತರಿದ್ದರು.

