ಉಡುಪಿ: ಸೌಜನ್ಯಾ ಪ್ರಕರಣಕ್ಕೆ ನ್ಯಾಯ ದೊರೆಯಬೇಕು. ಅತ್ಯಾಚಾರ ಮತ್ತು ಕೊಲೆ ಮಾಡಿದ ಆರೋಪಿಗಳಿಗೆ ಶಿಕ್ಷೆಯಾಗಬೇಕೆಂದು ಪ್ರಾರ್ಥಿಸಿ ಆ.24ರಂದು ರಾಜ್ಯದ ಸುಮಾರು 25 ಸಾವಿರಕ್ಕೂ ಅಧಿಕ ದೈವ, ದೇವಸ್ಥಾನಗಳಲ್ಲಿ ಏಕಕಾಲದಲ್ಲಿ ವಿಶೇಷ ಪೂಜೆ ನಡೆಸಲಾಗುವುದು ಎಂದು ಸೌಜನ್ಯಾ ಹೋರಾಟ ಸಮಿತಿ ಮುಖಂಡ ಕೆ.ದಿನೇಶ್ ಗಾಣಿಗ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
1976ರಲ್ಲಿ ಶಿಕ್ಷಕಿ ವೇದವಲ್ಲಿ , 1986ರಲ್ಲಿ ಎಸ್ಡಿಎಂ ಕಾಲೇಜಿನ ವಿದ್ಯಾರ್ಥಿನಿ ಪದ್ಮಲತಾ, 2012ರಲ್ಲಿ ಆನೆ ಮಾವುತ ನಾರಾಯಣ ಮತ್ತು ಯಮುನಾ ಕೊಲೆ, ದರೋಡೆ ಪ್ರಕರಣ, 2012ರಲ್ಲಿ ಸೌಜನ್ಯಾ ಅತ್ಯಾಚಾರ ಹಾಗೂ ಕೊಲೆ ಪ್ರಕರಣಗಳಲ್ಲಿ ಈವರೆಗೆ ಆರೋಪಿಗಳಿಗೆ ಶಿಕ್ಷೆಯಾಗಿಲ್ಲ. ಧರ್ಮಸ್ಥಳ ಮತ್ತು ಉಜಿರೆಯಲ್ಲಿ 2002ರಿಂದ 2012ರವರೆಗೆ 452 ಅಸಹಜ ಸಾವು ಪ್ರಕರಣ ದಾಖಲಾಗಿದೆ. 2010ರಲ್ಲಿ ಶರಾವತಿ ವಸತಿ ಗೃಹದಲ್ಲಿ ನಡೆದ ಕೊಲೆ ಪ್ರಕರಣವನ್ನು ತನಿಖೆ ನಡೆಸದೆ ಅದೇ ದಿನ ಶವ ಸುಡಲಾಗಿದೆ. ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ 2015ರಿಂದ 2025ರವರೆಗೆ 260ಕ್ಕೂ ಅಧಿಕ ಅಸಹಜ ಸಾವು ಪ್ರಕರಣ ದಾಖಲಾಗಿವೆ. ಈ ಬಗ್ಗೆ ಸಮಗ್ರ ತನಿಖೆ ನಡೆಯಬೇಕು ಎಂದು ಆಗ್ರಹಿಸಿದರು.
1983ರಲ್ಲಿ ಧರ್ಮಸ್ಥಳದಲ್ಲಿ ನಡೆದ ಅಸಹಜ ಸಾವುಗಳ ಬಗ್ಗೆ ವಿಧಾನ ಸಭೆಯ ಅಧಿವೇಶನದಲ್ಲಿಯೂ ಚರ್ಚೆ ನಡೆದಿತ್ತು. 1983ರಿಂದ ಹಲವು ಬಾರಿ ಬಿಜೆಪಿ ಶಾಸಕರು ಸದನದಲ್ಲಿ ಧರ್ಮಸ್ಥಳದಲ್ಲಿ ಆಗುತ್ತಿರುವಂತಹ ಕೊಲೆ, ಅತ್ಯಾಚಾರದ ಬಗ್ಗೆ ಚರ್ಚೆ ನಡೆಸಿದ್ದರು. ಆ ವೇಳೆ ಕ್ಷೇತ್ರಕ್ಕೆ ಅಪಪ್ರಚಾರ ಆಗಲಿಲ್ಲವೇ? ಸೌಜನ್ಯಾ ಪರ ಹೋರಾಟಗಾರರು ನ್ಯಾಯದ ಪರವಾಗಿ ಹೋರಾಟ ಮಾಡಿದರೆ ಧರ್ಮ ಹಾಳಾಗುತ್ತದೆಯೇ ಎಂದು ಪ್ರಶ್ನಿಸಿದರು.
ಸಂಟನೆ ಪ್ರಮುಖರಾದ ತಮ್ಮಣ್ಣ ಶೆಟ್ಟಿ, ಸಚಿನ್ ಶ್ರೀಯಾನ್, ಅಂಬಿಕಾ ಪ್ರಭು ಉಪಸ್ಥಿತರಿದ್ದರು.