ಸೂರ್ಯ ಘರ್ ಯೋಜನೆಯಿಂದ ವಿದ್ಯುತ್ ಶಕ್ತಿಯ ಹೊರೆ ಗಮನಾರ್ಹ ಇಳಿಕೆ: ಸಂಸದ ಕೋಟ ಶ್ರೀನಿವಾಸ ಪೂಜಾರಿ

0
1


ಉಡುಪಿ: ಪ್ರಧಾನಮಂತ್ರಿ ಸೂರ್ಯ ಘರ್ ಯೋಜನೆಯು ಸಬ್ಸಿಡಿ ದರದಲ್ಲಿ ಮೇಲ್ಛಾವಣಿಗೆ ಸೌರ ಫಲಕಗಳನ್ನು ಅಳವಡಿಸುವ ಮೂಲಕ ಉಚಿತ ವಿದ್ಯುತ್ ಒದಗಿಸುವುದರ ಜೊತೆಗೆ ವಿದ್ಯುತ್ ಶಕ್ತಿಯ ವೆಚ್ಚವನ್ನು ಗಮನಾರ್ಹವಾಗಿ ಕಡಿಮೆ ಮಾಡಿದೆ ಎಂದು ಉಡುಪಿ-ಚಿಕ್ಕಮಗಳೂರು ಲೋಕಸಭಾ ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಅವರು ಇಂದು ನಗರದ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಪ್ರಧಾನಮಂತ್ರಿ ಸೂರ್ಯ ಘರ್ ಯೋಜನೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
ಈ ಯೋಜನೆಯಡಿ ಸೌರ ಶಕ್ತಿಗೆ ಪರಿವರ್ತನೆಯ ಇಂಧನ ಉಳಿಸುವಿಕೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದ ಅವರು, ಮನೆಗಳ ತಮ್ಮ ವಿದ್ಯುತ್ ಬಿಲ್‌ಗಳಲ್ಲಿ ಗಮನಾರ್ಹ ಉಳಿತಾಯದಿಂದ ಪ್ರಯೋಜನ ಪಡೆಯುತ್ತವೆ. ಹೆಚ್ಚುವರಿಯಾಗಿ ಅವರು ತಮ್ಮ ಮೇಲ್ಛಾವಣಿ ಸೌರ ಶಕ್ತಿ ವ್ಯವಸ್ಥೆಗಳಿಂದ ಉತ್ಪಾದಿಸುವ ಹೆಚ್ಚುವರಿ ಶಕ್ತಿಯನ್ನು ಮೆಸ್ಕಾಂಗಳಿಗೆ ಮಾರಾಟ ಮಾಡುವ ಮೂಲಕ ಆದಾಯ ಗಳಿಸುವ ಅವಕಾಶ ಹೊಂದಿರುತ್ತದೆ. ತಿಂಗಳಿಗೆ 3 ಕಿಲೋ ವ್ಯಾಟ್ ಸರಾಸರಿ 300 ಯೂನಿಟ್ ಗಳಿಗಿಂತ ಹೆಚ್ಚು ವಿದ್ಯುತ್ ಉತ್ಪಾದಿಸಬಹುದು. ಇದು ವಿಶ್ವಾಸಾರ್ಹ ಶಕ್ತಿ ಹಾಗೂ ಸಂಭಾವ್ಯ ಆದಾಯದ ಮೂಲವಾಗಿರುತ್ತದೆ ಎಂದರು.
ಜಿಲ್ಲೆಯಲ್ಲಿ ಪ್ರಧಾನ ಮಂತ್ರಿ ಸೂರ್ಯ ಘರ್ ಯೋಜನೆಯಡಿ 4435 ಜನರು ಅರ್ಜಿ ಸಲ್ಲಿಸಿದ್ದು, ಅವರಲ್ಲಿ 4413 ಜನರಿಗೆ ಆರ್ಥಿಕವಾಗಿ ಅನುಮೋದನೆ ದೊರೆತಿದ್ದು, 1592 ಜನ ವೆಂಡರ್‌ಗಳನ್ನು ಆಯ್ಕೆ ಮಾಡಿಕೊಂಡಿದ್ದಾರೆ. 1222 ಜನರಿಗೆ ಅನುಷ್ಠಾನಗೊಳಿಸಿದ್ದು, 1135 ಜನರಿಗೆ ಈಗಾಗಲೇ ಸಬ್ಸಿಡಿ ಹಣ ನೀಡಲಾಗಿದೆ ಎಂದರು.
ಜಿಲ್ಲೆಯ 5 ವಿಧಾನಸಭಾ ಕ್ಷೇತ್ರ ವ್ಯಾಪ್ತಿಗಳಲ್ಲಿ ಮಾದರಿ ಸೋಲಾರ್ ಗ್ರಾಮಕ್ಕೆ ಬೈಂದೂರು ತಾಲೂಕಿನ ಕಿರಿಮಂಜೇಶ್ವರ, ಬ್ರಹ್ಮಾವರ ತಾಲೂಕಿನ ಕೋಟತಟ್ಟು, ಉಡುಪಿ ತಾಲೂಕಿನ ಉಪ್ಪೂರು, ಕಾಪು ತಾಲೂಕಿನ ಮಜೂರು ಹಾಗೂ ಕಾರ್ಕಳ ತಾಲೂಕಿನ ನಿಟ್ಟೆ ಗ್ರಾಮಗಳನ್ನು ಆಯ್ಕೆ ಮಾಡಲಾಗಿದ್ದು, ಸೌರ ಶಕ್ತಿ ಘಟಕ ಅಳವಡಿಸಲು ಚಾಲೆಂಜ್ ಅವಧಿಯನ್ನು ಡಿಸೆಂಬರ್ 31 ರ ವರೆಗೆ ನಿಗಧಿಪಡಿಸಿದ್ದು, ಕಿರಿಮಂಜೇಶ್ವರ ಗ್ರಾಮದವರು 26 ಕಿಲೋ ವ್ಯಾಟ್, ಕೋಟತಟ್ಟು ಗ್ರಾಮದವರು 1777 ಕಿಲೋ ವ್ಯಾಟ್, ಉಪ್ಪೂರು ಗ್ರಾಮದವರು 163 ಕಿಲೋ ವ್ಯಾಟ್, ಮಜೂರು 13.88 ಕಿ.ವ್ಯಾಟ್ ಹಾಗೂ ನಿಟ್ಟೆ ಗ್ರಾಮದವರು 1577.31 ಕಿ.ವ್ಯಾ. ಸೋಲಾರ್ ಅನ್ನು ಅಳವಡಿಸಿದ್ದು, ಇವುಗಳಲ್ಲಿ ಯಾವ ಗ್ರಾಮಗಳಲ್ಲಿ ಹೆಚ್ಚು ಸೌರ ಶಕ್ತಿ ಘಟಕಗಳನ್ನು ಪರಿಣಾತ್ಮಕವಾಗಿ ಅನುಷ್ಠಾನ ಮಾಡಿರುವ ಕುರಿತು ಮೈಸೂರು ರೀಜನಲ್ ಕಮೀಷನ್ ಅವರು ಪರಾಮರ್ಶಿಸಿ, ಒಂದು ಗ್ರಾಮವನ್ನು ಆಯ್ಕೆ ಮಾಡಲಿದ್ದಾರೆ. ಆಯ್ಕೆಯಾದ ಒಂದು ಗ್ರಾಮಕ್ಕೆ 1 ಕೋಟಿ ರೂ. ಬಹುಮಾನವನ್ನು ಅನುದಾನದ ರೂಪದಲ್ಲಿ ಸರಕಾರದ ವತಿಯಿಂದ ನೀಡಲಿದ್ದು, ಅದರಲ್ಲಿ ಸೋಲಾರ್ ಪಾರ್ಕ್ ಅಳವಡಿಸಲು ಅವಕಾಶ ಕಲ್ಪಿಸಲಾಗುವುದಾಗಿ ತಿಳಿಸಿದರು.
ಹರ್ ಘರ್ ಸೂರ್ಯ ಯೋಜನೆಯು ಕೇಂದ್ರ ಸರಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿದ್ದು, ಇದರ ಮೂಲಕ ದೇಶದಾದ್ಯಂತ 1 ಕೋಟಿ ಮನೆಗಳಿಗೆ ಸೌರ ಶಕ್ತಿ ಮೂಲಕ ಉಚಿತ ವಿದ್ಯುತ್ ಅಳವಡಿಸುವ ಗುರಿ ಹೊಂದಲಾಗಿದ್ದು, 75,012 ಕೋಟಿ ಹಣ ವಿನಿಯೋಗಿಸಿದೆ ಎಂದರು.
ಹರ್ ಘರ್ ಸೂರ್ಯ ಯೋಜನೆಯ ಅನುಷ್ಠಾನದಲ್ಲಾಗುವ ತಾಂತ್ರಿಕ ಸಮಸ್ಯೆಗಳನ್ನು ಕೂಡಲೇ ಬಗೆಹರಿಸಬೇಕು. ಈ ಯೋಜನೆಯ ಫಲಾನುಭವಿಗಳನ್ನು ಸತಾಯಿಸಬಾರದು. ಮೀಟರ್ ಸೇರಿದಂತೆ ಮತ್ತಿತರ ಪರಿಕರಗಳು ಸರಳವಾಗಿ ಲಭ್ಯವಾಗುವಂತೆ ನೋಡಿಕೊಳ್ಳಬೇಕು ಎಂದರು.
ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ ಮಾತನಾಡಿ, ಸೂರ್ಯ ಘರ್ ಯೋಜನೆಯಡಿ ಮನೆಯ ಮೇಲ್ಛಾವಣಿಯ ಮೇಲೆ ಸೌರ ವಿದ್ಯುತ್ ಘಟಕಗಳನ್ನು ಅಳವಡಿಸುವುದರಿಂದ ಸಾಂಪ್ರದಾಯಿಕ ಇಂಧನದ ಮೇಲಿನ ಅವಲಂಭನೆ ಕಡಿಮೆಯಾಗಲಿದೆ. ಇದರಿಂದ ಪರಿಸರ ಮಾಲಿನ್ಯವು ಹತೋಟಿಯಲ್ಲಿರಲಿದೆ ಎಂದ ಅವರು, ಪ್ರಧಾನಮಂತ್ರಿ ಸೂರ್ಯ ಘರ್ ಯೋಜನೆಯಡಿ ದೊರಕುವ ಸಹಾಯಧನ ಸೌಲಭ್ಯದ ಕುರಿತು ಹೆಚ್ಚು ಪ್ರಚಾರ ನೀಡಬೇಕು ಎಂದರು.
ಸಭೆಯಲ್ಲಿ ಮೆಸ್ಕಾಂ ಅಧೀಕ್ಷಕ ಇಂಜಿನಿಯರ್ ನರಸಿಂಹ, ಕಿರಿಮಂಜೇಶ್ವರ, ಕೋಟತಟ್ಟು, ಉಪ್ಪೂರು, ಮಜೂರು ಹಾಗೂ ನಿಟ್ಟೆ ಗ್ರಾಮ ಪಂಚಾಯತ್‌ಗಳ ಅಧ್ಯಕ್ಷಕರುಗಳು, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ಕಮಿಟಿಯ ನಾಮನಿರ್ದೇಶಿತ ಸದಸ್ಯರುಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here