ದುಬೈಯಲ್ಲಿ “ಸುವರ್ಣ ಸೌರಭ” : ಕೃತಿ ಲೋಕಾರ್ಪಣೆ

0
136

ದುಬೈ : ಅಂತರಾಷ್ಟ್ರೀಯ ಸಾಂಸ್ಕೃತಿಕ ಸೌರಭ ಪರಿಷತ್ ಇಂಡಿಯಾ ಇದರ 50ನೇ ಅಂತರಾಷ್ಟ್ರೀಯ ಸಾಂಸ್ಕೃತಿಕ ಸೌರಭ ಮತ್ತು ಸಾಂಸ್ಕೃತಿಕ ವಿನಿಮಯದ ಅಂಗವಾಗಿ ಸುವರ್ಣ ಸೌರಭ ಕಾರ್ಯಕ್ರಮವನ್ನು ಬರ್ ದುಬೈಯ ಪಾರ್ಕ್ ರಿಜಿಸ್ ಸಭಾಂಗಣದಲ್ಲಿ ಜೂನ್ 29ರಂದು ಆಯೋಜಿಸಲಾಗಿತ್ತು. ಯುಎಇ ಯ ಜನಿಸಿಸ್ ಅಲ್ಟಿಮಾ ಮತ್ತು ದುಬೈಯ ಸೇಂಟ್ ಸಾಂಸ್ಕೃತಿಕ ಸಂಘಟನೆಯ ಸಹಕಾರದಲ್ಲಿ ನಡೆಯಿತು.

ಸುವರ್ಣ ಸೌರಭದ ಅಂಗವಾಗಿ, ಪುಸ್ತಕ ಬಿಡುಗಡೆ, ಕೊಡಲು ವಾದನ, ಭರತನಾಟ್ಯ ಮತ್ತು ಕವಿ ಗೋಷ್ಠಿ ಮುಂತಾದ ಕಾರ್ಯಕ್ರಮಗಳು ಜರುಗಿದವು. ಅಬುದಾಬಿ ಕನ್ನಡ ಸಂಘದ ಅಧ್ಯಕ್ಷರಾದ ಸರ್ವೋತ್ತಮಶೆಟ್ಟಿಯವರು ಕೆ ಎಂ. ಇಕ್ಬಾಲ್ ಬಾಳಿಲ ಅವರು ಬರೆದ “ಮಾದಕತೆ ಮಾರಣಾಂತಿಕ ” ಎಂಬ ಕೃತಿಯನ್ನು ಲೋಕಾರ್ಪಣೆಗೊಳಿಸಿದರು. ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದ ಅವರು ಸಾಮಾಜಿಕ ಪಿಡುಗನ್ನು ತೊಡೆದು ಹಾಕಲು ಈ ಕೃತಿ ಜಾಗೃತಿ ಮೂಡಿಸುವಲ್ಲಿ ಯಶಸ್ವಿಯಾಗಲಿ. ಸಾಹಿತ್ಯಕ ಮತ್ತು ಸಾಂಸ್ಕೃತಿಕ ಚಟುವಟಿಕೆಗಳನ್ನು ಅಬುದಾಬಿ ಕನ್ನಡ ಸಂಘ ಮೂರು ದಶಕಗಳಿಂದ ಪ್ರೋತ್ಸಾಹಿಸುತ್ತಾ ಬಂದಿದೆ. ಅದು ನಿರಂತರವಾಗಿ ಸಾಗಲಿದೆ ಎಂದರು

ಪ್ರಾಸ್ತಾವಿಕ ಭಾಷಣ ಮಾಡಿದ ಐಸಿಎಫ್‌ಸಿ (ಐ) ಸ್ಥಾಪಕ ಅಧ್ಯಕ್ಷ ಇಂ. ಕೆ. ಪಿ ಮಂಜುನಾಥ್ ಸಾಗರ್ ” ಅಂತರಾಷ್ಟ್ರೀಯ ಸಾಂಸ್ಕೃತಿಕ ಸೌರಭ ಪರಿಷತ್ (ಇಂಡಿಯಾ) 2004 ರಿಂದ ಈವರೆಗೆ 40ಕ್ಕೂ ಹೆಚ್ಚು ದೇಶಗಳಲ್ಲಿ 50 ಸಾಂಸ್ಕೃತಿಕ ಸೌರಭ ಕಾರ್ಯಕ್ರಮ ಆಯೋಜಿಸುವ ಮೂಲಕ ಇಂದು ದುಬೈಯಲ್ಲಿ ಸುವರ್ಣ ಸೌರಭ ಸಮಾರಂಭವನ್ನು ಆಯೋಜಿಸುತ್ತಿದೆ. ಇದು ಸಂಸ್ಥೆಯ ಸಾಧನೆಯಾ ಮೈಲುಗಲ್ಲು ಎಂದು ತಿಳಿಸಲು ಹೆಮ್ಮೆ ಎನಿಸುತ್ತದೆ. ನಾವು ವಿಶ್ವ ಸೌಹಾರ್ದ ಪ್ರಿಯರು ಎನ್ನುವ ಧ್ಯೇಯ ವಾಕ್ಯದಡಿಯಲ್ಲಿ ವಿಶ್ವ ಪರ್ಯಟನೆ ಮಾಡಲು ಸಾಧ್ಯವಾಯಿತು ” ಎಂದರು.

ವೇದಿಕೆಯಲ್ಲಿ ಗಣ್ಯರಾದ ದುಬೈ ಉದ್ಯಮಿ ಉದಯಕುಮಾರ್ ದುಬೈಯ ಸಾಂಸ್ಕೃತಿಕ ಸಂಘಟನೆ ಸೆಂಟ್ ಅಧ್ಯಕ್ಷ ಹೋದನ್ ಪ್ರಸಾದ್ ಅಕ್ಥಾವರ , ದುಬೈ ಬಿಲ್ಲವ ಫ್ಯಾಮಿಲಿ ಅಧ್ಯಕ್ಷ ದೀಪಕ್ ಎಸ್. ಪಿ. ಮತ್ತು ಮುಂತಾದವರು ಉಪಸ್ಥಿತರಿದ್ದರು.

ಸುವರ್ಣ ಸೌರಭ ಕಾರ್ಯಕ್ರಮಕ್ಕೆ ಗಲ್ಫ್ ನ ವಿವಿಧ ರಾಷ್ಟ್ರಗಳಿಂದ ಸಾಧಕರು ಮತ್ತು ಗಣ್ಯರು ಆಗಮಿಸಿದ್ದರು. ಆರತಿ ಸುರೇಶ್ ಅತಿಥಿಗಳನ್ನು ಸ್ವಾಗತಿಸಿದರು ಮತ್ತು ಗಾಯತ್ರಿ ಮಹೇಶ್ ಭಟ್ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here