ಕೆಸರ್‌ಗದ್ದೆ ಬೆಳುವಾಯಿ ಯಲ್ಲಿ ಆಯೋಜಿಸಲಾಗಿದ್ದ “ಸ್ಫೂರ್ತಿ ಕಲಾ ಸಂಭ್ರಮ-2025” ಕಾರ್ಯಕ್ರಮವನ್ನು ಮುಂದೂಡಲಾಗಿದೆ

0
81

ಮೂಡುಬಿದಿರೆ: ಸ್ಫೂರ್ತಿ ಭಿನ್ನ ಸಾಮರ್ಥ್ಯದ ಮಕ್ಕಳ ಶಾಲೆ ಮತ್ತು ತರಬೇತಿ ಕೇಂದ್ರ, ಕೆಸರ್‌ಗದ್ದೆ ಬೆಳುವಾಯಿ ಇಲ್ಲಿ ಆಯೋಜಿಸಲಾಗಿದ್ದ “ಸ್ಫೂರ್ತಿ ಕಲಾ ಸಂಭ್ರಮ-2025” ಕಾರ್ಯಕ್ರಮವನ್ನು ಮುಂದೂಡಲಾಗಿದೆ. ಈ ಹಿಂದೆ ಡಿಸೆಂಬರ್ 20ರಂದು ನಿಗದಿಯಾಗಿದ್ದ ಸಂಭ್ರಮವನ್ನು, ಸಂಸ್ಥೆಯ ಕಾರ್ಯನಿರ್ವಹಿಸುತ್ತಿರುವ ಕಟ್ಟಡದ ರೂವಾರಿ, ಸ್ವಾಮಿ ಮುಕ್ತಾನಂದ ಪರಮಹಂಸ ಪ್ರೌಢಶಾಲೆಯ ಸ್ಥಾಪಕ ಜೆ. ಎಮ್ ಪಡುಬಿದ್ರಿ ಅವರ ನಿಧನದ ಹಿನ್ನೆಲೆಯಲ್ಲಿ, ಅವರ ಗೌರವಾರ್ಥವಾಗಿ ಜನವರಿ 3ಕ್ಕೆ ಮುಂದೂಡಲಾಗಿದೆ ಎಂದು ಸ್ಪೂರ್ತಿ ವಿಶೇಷ ಮಕ್ಕಳ ಶಾಲೆಯ ಸಂಸ್ಥಾಪಕ ಪ್ರಕಾಶ್ ಜೆ. ಶೆಟ್ಟಿಗಾರ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಜೆ. ಎಮ್. ಪಡುಬಿದ್ರಿ ಅವರು ವಿದ್ಯಾವರ್ಧಕ ಸಂಘ ಬೆಳುವಾಯಿ ಇದರ ಸ್ಥಾಪಕ ಕಾರ್ಯದರ್ಶಿಗಳಾಗಿಯೂ ಸೇವೆ ಸಲ್ಲಿಸಿದ್ದರು. ಅವರ ಉತ್ತರಕ್ರಿಯೆಯು ಡಿಸೆಂಬರ್ 20ರಂದು ನಡೆಯಲಿರುವುದರಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ. ಮುಂದೂಡಿದ ದಿನಾಂಕವಾದ ಜನವರಿ 3ರಂದು ಬೆಳುವಾಯಿ ಕೆಸರುಗದ್ದೆ ಸ್ವಾಮಿ ಮುಕ್ತಾನಂದ ಪರಮಹಂಸ ಪ್ರೌಢಶಾಲಾ ಆವರಣದಲ್ಲಿ ಕಾರ್ಯಕ್ರಮ ನಡೆಯಲಿದೆ. ಹಿಂದಿನ ದಿನಾಂಕದಂದು ನಿಗದಿ ಪಡಿಸಿದಂತೆ ಎಲ್ಲಾ ಕಾರ್ಯಕ್ರಮಗಳು ನಡೆಯಲಿವೆ ಎಂದರು.

ಬೆಳಗ್ಗೆ 11 ಗಂಟೆಗೆ ಶಾಸಕರಾದ ಉಮಾನಾಥ ಎ. ಕೋಟ್ಯಾನ್ ಕಾರ್ಯಕ್ರಮ ಉದ್ಘಾಟಿಸುವರು. ಗ್ರಾಮ ಪಂಚಾಯತ್ ಬೆಳುವಾಯಿ ಅಧ್ಯಕ್ಷರಾದ ಸುರೇಶ್ ಪೂಜಾರಿ ಗೋಳಾರ ಅಧ್ಯಕ್ಷತೆ ವಹಿಸಲಿದ್ದಾರೆ. ಹಿರಿಯ ಪತ್ರಕರ್ತ ಧನಂಜಯ ಮೂಡುಬಿದಿರೆ ಅವರಿಗೆ ‘ಸ್ಫೂರ್ತಿ ರತ್ನ’ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಮಾಜಿ ಸಚಿವ ಕೆ.ಅಭಯಚಂದ್ರ ಜೈನ್ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಸೇವ್‌ ಲೈಫ್ ಚಾರಿಟೇಬಲ್ ಟ್ರಸ್ಟ್ ಮಂಗಳೂರು ಅಧ್ಯಕ್ಷ ಅರ್ಜುನ್ ಭಂಡಾರ್ಕರ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ರೈ, ದಂತ ವೈದ್ಯೆ ಡಾ. ಅಮರಶ್ರೀ ಶೆಟ್ಟಿ, ಪದ್ಮಶಾಲಿ ಸಮಾಜ ಸೇವಾ ಸಂಘ ಮುಂಬೈ ಅಧ್ಯಕ್ಷ ಕೃಷ್ಣಾನಂದ ಎಂ. ಶೆಟ್ಟಿಗಾರ್, ಬಿಗ್‌ಬಾಸ್ ಖ್ಯಾತಿಯ ಯೂಟ್ಯೂಬರ್ ಧನರಾಜ್ ಆಚಾರ್, ಸಿನಿಮಾ ನಟ ಅನೀಶ್ ಪೂಜಾರಿ ವೇಣೂರು ಮುಖ್ಯ ಅತಿಥಿಗಳಾಗಿದ್ದರು.

ಕಲಾ ಸಂಭ್ರಮದ ಆಕರ್ಷಣೆಗಳು: ಸಾಂಸ್ಕೃತಿಕ ಸಂಭ್ರಮ: ಸ್ವಪ್ತಸ್ವರ ಮೆಲೋಡಿಸ್ (ಉಮೇಶ್ ಕೋಟ್ಯಾನ್ ಬಳಗ ವಾಮದಪದವು) ಅವರಿಂದ ಉದಯಗಾನ ಸಂಭ್ರಮ, ಪದ್ಮಶಾಲಿ ನೇಕಾರರ ಪ್ರತಿಷ್ಠಾನ, ಉಡುಪಿ ಸದಸ್ಯರಿಂದ ಕೈಮಗ್ಗ ಸೀರೆಯೊಂದಿಗೆ ಸೌಂದರ್ಯ ಸಂಭ್ರಮ.

* ನೃತ್ಯ ಸಂಭ್ರಮ: ವಾಯ್ಸ್ ಆಫ್ ಆರಾದನ ತಂಡದ ಮಕ್ಕಳು, ಸ್ಫೂರ್ತಿ ಶಾಲಾ ವಿಶೇಷ ಚೇತನ ವಿದ್ಯಾರ್ಥಿಗಳು, ಎಂ.ಜೆ ಸ್ಟೆಪ್ ಆಫ್ ಡ್ಯಾನ್ಸ್ ಸ್ಟುಡಿಯೋ ಮತ್ತು ಸೃಷ್ಟಿ ಕ್ರಿಯೇಷನ್ಸ್ ಮೂಡುಬಿದಿರೆ ತಂಡಗಳಿಂದ ವೈವಿಧ್ಯಮಯ ನೃತ್ಯಗಳು.

* ನಾಟಕ: ಸಂಜೆ 6ರಿಂದ ಸಿಂಧೂರ ಕಲಾವಿದೆರ್ ಕಾರ್ಲ ಇವರಿಂದ ತುಳು ಹಾಸ್ಯಮಯ ನಾಟಕ “ಪನೊಡಿತ್ತೆಂಡ್ ಸ್ವಾರಿ” ಪ್ರದರ್ಶನ.

* ವಿಶೇಷ ಆಕರ್ಷಣೆ: ಹಳ್ಳಿ ಸೊಗಡು ಸಂಭ್ರಮ, ವೈವಿಧ್ಯ ಆಹಾರ ಮೇಳ, ವಿಶೇಷ ಚೇತನ ಮಕ್ಕಳು ತಯಾರಿಸಿದ ಕರಕುಶಲ ವಸ್ತುಗಳ ಪ್ರದರ್ಶನ ಮತ್ತು ಮಾರಾಟ ಹಾಗೂ ನೇಕಾರರಿಂದ ಕೈಮಗ್ಗ ಸೀರೆಗಳ ನೇರ ಮಾರಾಟ ಇರಲಿದೆ.

ಸ್ಫೂರ್ತಿ ಭಿನ್ನ ಸಾಮರ್ಥ್ಯದ ಮಕ್ಕಳ ಶಾಲೆ, ರಿಜ್ಯುವನೇಟ್ ಚೈಲ್ಡ್ ಫೌಂಡೇಶನ್ ಮತ್ತು ವಿದ್ಯಾವರ್ಧಕ ಸಂಘ ಬೆಳುವಾಯಿ ಈ ಸಂಭ್ರಮವನ್ನು ಪ್ರಾಯೋಜಿಸಿವೆ ಎಂದು‌ ಪ್ರಕಾಶ್ ಶೆಟ್ಟಿ ಮಾಹಿತಿ ನೀಡಿದರು.

LEAVE A REPLY

Please enter your comment!
Please enter your name here