ಕಲ್ಸಂಕ ಜಂಕ್ಷನ್​ನಲ್ಲಿ ಇನ್ನೂ ಹುಟ್ಟದ ಸಿಗ್ನಲ್​ ಕೂಸು

0
40


ಉಡುಪಿ: ಕೃಷ್ಣಮಠ ಹಾಗೂ ಮಣಿಪಾಲಕ್ಕೆ ನಗರದಿಂದ ಸಂಪರ್ಕ ಕಲ್ಪಿಸುವ ಪ್ರಮುಖ ಜಂಕ್ಷನ್​ ಕಲ್ಸಂಕದಲ್ಲಿ ದಿನನಿತ್ಯ ಟ್ರಾಫಿಕ್​ ಜಾಮ್​ನಿಂದ ವಾಹನ ಸವಾರರು ಹೈರಾಣಾಗುತ್ತಿದ್ದು, ಫೆ . 5ರಂದು ಹಿಂದಿನ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ನಗರಸಭೆ ಪೌರಾಯುಕ್ತರಿಗೆ ಸಿಗ್ನಲ್​ ಅಳವಡಿಸುವಂತೆ ಪತ್ರ ಬರೆದು ಬರೋಬ್ಬರಿ 9 ತಿಂಗಳು ಕಳೆದರೂ ಸಿಗ್ನಲ್​ ಲೈಟ್​ ಕೂಸು ಇನ್ನೂ ಹುಟ್ಟಿಲ್ಲ.

ನಗರದಲ್ಲಿ ಸಂಚಾರ ದಟ್ಟಣೆ ನಿಯಂತ್ರಿಸುವ ನಿಟ್ಟಿನಲ್ಲಿ ಕಲ್ಸಂಕ ಜಂಕ್ಷನ್​ ಸೇರಿದಂತೆ 5 ಕಡೆಗಳಲ್ಲಿ ಸಿಗ್ನಲ್​ ಅಳವಡಿಸುವಂತೆ ನಗರಸಭೆಗೆ ಕೋರಿಕೆ ಸಲ್ಲಿಸಿದ್ದರು. ನಗರದ ಕಲ್ಸಂಕ, ಬನ್ನಂಜೆ, ಶಿರಿಬೀಡು, ಅಂಬಾಗಿಲು, ಜೋಡುಕಟ್ಟೆ ಜಂಕ್ಷನ್​ಗಳಲ್ಲಿ ಸಿಗ್ನಲ್​ ಲೈಟ್​ ಅಳವಡಿಸುವಂತೆ ಪತ್ರ ಬರೆದಿದ್ದರು. ಆದರೆ 6 ತಿಂಗಳು ಈ ಬಗ್ಗೆ ಯಾವುದೇ ತ್ವರಿತ ಕ್ರಮ ಕೈಗೊಳ್ಳಲಿಲ್ಲ. ಆಗಸ್ಟ್​ನಲ್ಲಿ ಕಲ್ಸಂಕ ಮತ್ತು ಮಣಿಪಾಲ ಟೈಗರ್​ ಸರ್ಕಲ್​ನಲ್ಲಿ ಸಿಗ್ನಲ್​ ಅಳವಡಿಗೆ ಟೆಂಡರ್​ ಪ್ರಕಟಣೆ ನೀಡಲಾಗಿತ್ತು. ಸೆಪ್ಟೆಂಬರ್​ 30ರಂದು ನಡೆದ ಸಾಮಾನ್ಯ ಸಭೆಯಲ್ಲಿ ಟೆಂಡರ್​ಗೆ ಅನುಮತಿ ಪಡೆದುಕೊಂಡಿದ್ದರೂ ಇನ್ನೂ ವರ್ಕ್​ ಆರ್ಡರ್​ ನೀಡಲಾಗಿಲ್ಲ. ನವೆಂಬರ್ ತಿಂಗಳಲ್ಲಿ ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ಅವಧಿ ಮುಗಿಯಲಿದ್ದು, ನಂತರ ಸಿಗ್ನೆಲ್ ಯೋಜನೆ ಭವಿಷ್ಯ ಏನು ಬೇಕಾದರೂ ಆಗಬಹುದು ಎಂಬುದು ಸಾರ್ವಜನಿಕರ ಆತಂಕ.

ದೀಪಾವಳಿ, ಕ್ರಿಸ್​ಮಸ್​ ಸಹಿತ ಸಾಲು ಸಾಲು ರಜೆ ಹಿನ್ನೆಲೆಯಲ್ಲಿ ಪ್ರವಾಸಿಗರ ದಂಡೇ ಉಡುಪಿಗೆ ಆಗಮಿಸುವ ಸಾಧ್ಯತೆಗಳಿದ್ದು, ಕರಾವಳಿ ಜಂಕ್ಷನ್​ನಿಂದ ಕಲ್ಸಂಕದವರೆಗೆ ವಾಹನ ದಟ್ಟಣೆ ಹೆಚ್ಚಾಗಲಿದೆ. ಇದಕ್ಕೂ ಮುನ್ನ ಟ್ರಾಫಿಕ್​ ಸಿಗ್ನಲ್​ ಅಳವಡಿಕೆ ಮಾಡಿದರೆ ಸಂಚಾರ ದಟ್ಟಣೆ ನಿಯಂತ್ರಣ ಸಾಧ್ಯವಾಗಲಿದೆ.

ಪೊಲೀಸರಿಂದ ಅಸಾಧ್ಯ
ಕಲ್ಸಂಕದಲ್ಲಿ ಬೆಳಗ್ಗೆ ಮತ್ತು ಸಾಯಂಕಾಲ ಹೆಚ್ಚು ಟ್ರಾಫಿಕ್​ ಇರುತ್ತದೆ. ಬೆಳಗ್ಗೆ ಕೆಲವೊಮ್ಮೆ ಓರ್ವ ಪೊಲೀಸ್​ ಮಾತ್ರ ಕರ್ತವ್ಯದಲ್ಲಿರುತ್ತಾರೆ. ಇವರಿಗೆ 4 ದಿಕ್ಕಿನಲ್ಲಿ ವಾಹನ ಸಂಚಾರ ನಿಯಂತ್ರಣ ಕಷ್ಟ ಸಾಧ್ಯವಾಗಿದ್ದು, ಇದರಿಂದ ವಾಹನ ಸವಾರರು ಬೇಕಾಬಿಟ್ಟಿಯಾಗಿ ತೆರಳುತ್ತಾ ಟ್ರಾಫಿಕ್​ ಜಾಮ್​ ಉಂಟಾಗಲು ಕಾರಣರಾಗುತ್ತಿದ್ದಾರೆ. ಇದಕ್ಕೆ ಮೊದಲ ಕಡಿವಾಣ ಹಾಕಬೇಕಿದೆ. ರಾಜಾಂಗಣ ಪಾರ್ಕಿಂಗ್​ ಪ್ರದೇಶದಿಂದ ಬರುವ ವಾಹನಗಳಿಗೆ ಬ್ರೇಕ್​ ಇರುವುದೇ ಇಲ್ಲ. ನೇರವಾಗಿ ಸರ್ಕಲ್​ನಲ್ಲಿ ಬಂದು ನಿಲ್ಲುತ್ತವೆ. ಪೊಲೀಸರು ಕೈ ಅಡ್ಡ ಹಾಕಿದರೆ ಮಾತ್ರ ವಾಹನ ನಿಲ್ಲಿಸುವ ಚಾಲಕರ ಸ್ವಭಾವದಿಂದಾಗಿ ಟ್ರಾಫಿಕ್​ ಸಿಗ್ನಲ್​ ಅಳವಡಿಕೆ ಪರಿಹಾರವಾಗಿದೆ. ವಾಹನಗಳೆಲ್ಲಾ ಬಂದು ಸರ್ಕಲ್​ನಲ್ಲಿ ನಿಲ್ಲುವುದು ಕಲ್ಸಂಕ ಜಂಕ್ಷನ್​ನಲ್ಲಿ ಟ್ರಾಫಿಕ್​ ಜಾಮ್​ ಉಂಟಾಗಲು ಮುಖ್ಯ ಕಾರಣ. ಹೀಗಾಗಿ ಒಂದೊಂದೇ ಮಾರ್ಗದಲ್ಲಿ ವಾಹನಗಳು ಮುಂದುವರಿಯಲು ಅನುಮತಿ ನೀಡುವುದರಿಂದ ಮಾತ್ರ ಸಂಚಾರ ನಿಯಂತ್ರಿಸಬಹುದು.

LEAVE A REPLY

Please enter your comment!
Please enter your name here