ಉಡುಪಿ: ದೊಡ್ಡಣಗುಡ್ಡೆ ಶ್ರೀ ಚಕ್ರಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರದಲ್ಲಿ ಧರ್ಮದರ್ಶಿ ಶ್ರೀ ರಮಾನಂದ ಗುರೂಜಿ ಮಾರ್ಗದರ್ಶನದಲ್ಲಿ ನೆರವೇರುತ್ತಿರುವ ನವರಾತ್ರಿ ಮಹೋತ್ಸವದ ಅಂಗವಾಗಿ ಈ ಬಾರಿ ನಿರೀಕ್ಷೆಗೂ ಮೀರಿದ ಭಕ್ತರು ಬೆಳಗ್ಗಿನಿಂದ ರಾತ್ರಿ ತನಕ ಉಪಹಾರ, ಅನ್ನಪ್ರಸಾದ ಸ್ವೀಕರಿಸಿದರು.
ಪಂಚಭಕ್ಷ್ಯ ಸಹಿತ ವಿಶೇಷ ಭೋಜನವನ್ನು ದೇವಿಯ ಪ್ರಸಾದ ರೂಪದಲ್ಲಿ ಉಣಬಡಿಸಲಾಯಿತು. ಅನ್ನಪೂರ್ಣ ಭೋಜನಾಲಯ, ಸರಸ್ವತಿ ಭವನ, ಆದಿಶಕ್ತಿ ಸಭಾಭವನ ಹಾಗೂ ಕ್ಷೇತ್ರದ ವಿವಿಧ ಸ್ಥಳಗಳಲ್ಲಿ ಭಕ್ತರು ಪ್ರಸಾದ ಸ್ವೀಕರಿಸಿದರು. ಅನ್ನಪೂರ್ಣೆಯ ಸಾಕ್ಷಾತ್ಕಾರವಾದ ಈ ಕ್ಷೇತ್ರದಲ್ಲಿ ಸಾಕಷ್ಟು ಭಕ್ತರಿಗೆ ಅನ್ನಪ್ರಸಾದ ವಿತರಿಸಲು ಸಾಧ್ಯವಾಗುತ್ತಿದೆ. ಅಲ್ಲದೆ ಕ್ಷೇತ್ರದಲ್ಲಿ ನಿತ್ಯವೂ ಲಭ್ಯವಿರುವ ಅತ್ತಿರಸ ಮಹಾಪ್ರಸಾದಕ್ಕೆ ಭಕ್ತರಿಂದ ಉತ್ತಮ ಸ್ಪಂದನೆ ದೊರಕುತ್ತಿದೆ ಎಂದು ಕ್ಷೇತ್ರದ ಉಸ್ತುವಾರಿ ಕುಸುಮಾ ನಾಗರಾಜ್ ತಿಳಿಸಿದ್ದಾರೆ.
ಬಡಿಸಿ ಉಣಿಸುವ ವ್ಯವಸ್ಥೆ
ಅನ್ನಸ್ಯ ಕ್ಷುದಿತಂ ಪಾತ್ರಂ…ಅನ್ನದಾನದಿಂದ ಮಾತ್ರ ಭಗವಂತ ಮತ್ತು ಭಗವದ್ಭಕ್ತರನ್ನು ಪ್ರಸನ್ನೀಕರಿಸಲು ಸಾಧ್ಯ. ಇಂತಹ ಪವಿತ್ರವೂ, ಮಹತ್ವಪೂರ್ಣವಾದ ಅನ್ನದಾನದ ಬಗ್ಗೆ ಕ್ಷೇತ್ರ ರಚನೆಯಾದ ದಿನದಿಂದಲೂ ಶ್ರದ್ಧೆ, ಭಕ್ತಿಯಿಂದ ಕ್ಷೇತ್ರಕ್ಕೆ ಬಂದ ಭಕ್ತರಿಗೆ ಅನ್ನಪ್ರಸಾದ ವಿತರಣೆಯಲ್ಲಿ ಸ್ವಲ್ಪವೂ ಚ್ಯುತಿ ಬಾರದಂತೆ ವ್ಯವಸ್ಥೆ ಮಾಡಲಾಗುತ್ತಿದೆ. ಕ್ಷೇತ್ರದಲ್ಲಿ ಬಫೆ ಪದ್ಧತಿಗೆ ಇಂದಿಗೂ ಅವಕಾಶ ನೀಡದೆ, ಬಡಿಸಿ ಉಣಿಸುವ ಅನ್ನಸಂತರ್ಪಣೆ ವ್ಯವಸ್ಥೆಯ ಬಗ್ಗೆ ಸ್ವತಃ ಮುತುವರ್ಜಿ ವಹಿಸಲಾಗುತ್ತಿದೆ ಎಂದು ಧರ್ಮದರ್ಶಿ ಶ್ರೀ ರಮಾನಂದ ಗುರೂಜಿ ತಿಳಿಸಿದ್ದಾರೆ.
Home Uncategorized ದೊಡ್ಡಣಗುಡ್ಡೆ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರದಲ್ಲಿ ನವರಾತ್ರಿ ಮಹೋತ್ಸವ ಸಾವಿರಾರು ಭಕ್ತರಿಂದ ಅನ್ನಪ್ರಸಾದ ಸ್ವೀಕಾರ