ಉಡುಪಿ/ಮಂಗಳೂರು: ನಾಳೆ (ಸೆ. 7) ಖಗ್ರಾಸ ಚಂದ್ರಗ್ರಹಣ ಹಿನ್ನೆಲೆ ಭಾರತದಲ್ಲೂ ಚಂದ್ರಗ್ರಹಣ ಗೋಚರವಾಗಲಿದೆ. ಹಿಂದೂ ಧರ್ಮದಲ್ಲಿ ಚಂದ್ರ ಗ್ರಹಣವನ್ನು ಬಹಳ ಮುಖ್ಯವೆಂದು ಪರಿಗಣಿಸಲಾಗುತ್ತದೆ. ಭಾದ್ರಪದ ಪೂರ್ಣಿಮೆ ಸೆಪ್ಟೆಂಬರ್ 7ರಂದು ವರ್ಷದ ಎರಡನೇ ಮತ್ತು ಕೊನೆಯ ಚಂದ್ರಗ್ರಹಣವಾಗಲಿದೆ. ಚಂದ್ರಗ್ರಹಣ ಸೆಪ್ಟೆಂಬರ್ 7 ರಂದು ರಾತ್ರಿ 09:57 ರಿಂದ ಸೆಪ್ಟೆಂಬರ್ 8 ರಂದು ಬೆಳಿಗ್ಗೆ 01:26 ರವರೆಗೆ ಇರುತ್ತದೆ. ಚಂದ್ರಗ್ರಹಣದ ಒಟ್ಟು ಅವಧಿ 03 ಗಂಟೆ 29 ನಿಮಿಷಗಳು. ಚಂದ್ರಗ್ರಹಣ ಹಿನ್ನೆಲೆ ರಾಜ್ಯದ ಬಹುತೇಕ ದೇಗುಲಗಳು ಬಂದ್ ಆಗಿದೆ.
ಕೃಷ್ಣ ಮಠದಲ್ಲಿ ಮಂತ್ರ ಪಠಣ
ಇತ್ತ ಉಡುಪಿಯಲ್ಲಿ ಭಾನುವಾರ ಖಗ್ರಾಸ ಚಂದ್ರ ಗ್ರಹಣ ಹಿನ್ನೆಲೆ ಕೃಷ್ಣ ಮಠದಲ್ಲಿ ಸಾವಿರಾರು ಭಕ್ತರಿಂದ ಮಂತ್ರ ಪಠಣ ನಡೆಯಲಿದೆ. ಗ್ರಹಣದ ಪ್ರಯುಕ್ತ ಬೆಳಿಗ್ಗೆ 10 ರಿಂದ 11 ಗಂಟೆಯವರೆಗೆ ಕೃಷ್ಣಾಯ ನಮಃ ಎಂದು ಭಕ್ತರು ಮಂತ್ರ ಜಪಿಸಲಿದ್ದಾರೆ.
1008 ಕೃಷ್ಣ ಭಕ್ತರಿಂದ ಮಂತ್ರ ಪಠಣ
1008 ಕೃಷ್ಣ ಭಕ್ತರಿಂದ ಸ್ವಾಮಿ ಶ್ರೀ ಕೃಷ್ಣಾಯ ನಮಃ ಮಂತ್ರ ಜಪ ಪಠಣನೆ ನಡೆಯಲಿದೆ. ಪರ್ಯಾಯ ಶ್ರೀ ಪುತ್ತಿಗೆ ಮಠಾಧೀಶರ ಮಾರ್ಗದರ್ಶನದಲ್ಲಿ ಲೋಕಕಲ್ಯಾಣಾರ್ಥ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಗ್ರಹಣ ದೋಷಗಳ ಪರಿಹಾರಕ್ಕಾಗಿ ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ ಧಾರ್ಮಿಕ ಕಾರ್ಯಕ್ರಮ ನಡೆಯಲಿದೆ.
ಏನು ಮಾಡಬಾರದು?
ಚಂದ್ರ ಧಾರ್ಮಿಕ ನಂಬಿಕೆಗಳ ಪ್ರಕಾರ, ಚಂದ್ರಗ್ರಹಣದ ಸಮಯದಲ್ಲಿ ಆಹಾರವನ್ನು ಬೇಯಿಸಬಾರದು ಅಥವಾ ತಿನ್ನಬಾರದು. ಈ ಸಮಯದಲ್ಲಿ, ಸೂಜಿ, ಕತ್ತರಿ ಮತ್ತು ಚಾಕು ಮುಂತಾದ ಯಾವುದೇ ಚೂಪಾದ ವಸ್ತುಗಳನ್ನು ಬಳಸಬಾರದು. ಗ್ರಹಣದ ಸಮಯದಲ್ಲಿ ಪೂಜೆಯನ್ನು ನಿಷೇಧಿಸಲಾಗಿದೆ.