ಸೊಸೆ ಕಾಟಕ್ಕೆ ಬೇಸತ್ತು ಅತ್ತೆಯೇ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಗುಬ್ಬಿ ತಾಲೂಕಿನ ಕಾರೇಕುರ್ಟಿ ಗ್ರಾಮದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಭ್ರಮರಾಂಬಿಕೆ (60) ಶವ ಪತ್ತೆಯಾಗಿದೆ.
ಸೊಸೆ ಕಾವ್ಯಶ್ರೀ ಪ್ರತ್ಯೇಕವಾಗಿ ಉಳಿಯಲು ಬಯಸಿದ್ದಳು. ಇದೇ ಕಾರಣಕ್ಕೆ ಅಡುಗೆ ಸೇರಿ ಎಲ್ಲವನ್ನೂ ಪ್ರತ್ಯೇಕವಾಗಿ ಮಾಡಿಕೊಳ್ಳುತ್ತಿದ್ದಳು. ಅಲ್ಲದೆ ಈ ನಡುವೆ ಗಂಡನನ್ನು ಬೆಂಗಳೂರಿಗೆ ಕರೆದೊಯ್ಯುವ ಬಗ್ಗೆಯೂ ಮಾತನಾಡುತ್ತಿದ್ದಳು. ಹೀಗಾಗಿ ಎಲ್ಲಿ ಮಗನನ್ನು ಸೊಸೆ ತನ್ನಿಂದ ದೂರ ಮಾಡ್ತಾಳೋ ಎನ್ನುವ ಭಯಕ್ಕೆ ಅತ್ತೆ ಭ್ರಮರಾಂಬಿಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ.
ಅನುಮಾನಾಸ್ಪದ ಸ್ಥಿತಿಯಲ್ಲಿ ಭ್ರಮರಾಂಬಿಕೆ ಶವ ಫಾರ್ಮ್ ಹೌಸ್ನಿಂದ 200 ಮೀಟರ್ ದೂರವಿರುವ ಪಂಪ್ ಹೌಸ್ ನಲ್ಲಿ ಪತ್ತೆಯಾಗಿದೆ. ತಾಯಿ ನೇಣುಬಿಗಿದ ಸ್ಥಿಯಲ್ಲಿರೋದನ್ನು ಕಂಡ ಮಗ ಮನುಕುಮಾರ್ ಶವ ಕೆಳಗಿಳಿಸಿದ್ದ. ಬಳಿಕ ಬೇಳೂರು ಪೊಲೀಸರಿಗೆ ಮಾಹಿತಿ ನೀಡಿದ್ದ ಎನ್ನಲಾಗಿದೆ.ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಭೇಟಿ ನೀಡಿದ್ದ ಪೊಲೀಸರು ಘಟನೆ ಬಗ್ಗೆ ಆರಂಭದಲ್ಲಿ ಅನುಮಾನ ಪಟ್ಟಿದ್ದರು.
ಮೃತ ಮಹಿಳೆಯ ಒಂದು ಕಣ್ಣಿನ ಗುಡ್ಡೆ ನಾಪತ್ತೆಯಾಗಿದ್ದ ಕಾರಣ, ಇದು ಕೊಲೆಯಾಗಿರಬಹುದೆಂಬ ಲೆಕ್ಕಾಚಾರ ಹಾಕಿದ್ದರು. ಆದರೆ ಈ ಬಗ್ಗೆ ಪರಿಶೀಲನೆ ನಡೆಸಿದಾಗ ಮಧ್ಯರಾತ್ರಿ 1.45ರ ಸುಮಾರಿಗೆ ಫಾರ್ಮ್ಹೌಸ್ನಿಂದ 200 ಮೀಟರ್ ದೂರದ ಪಂಸ್ ಹೌಸ್ ಭ್ರಮರಾಂಬಿಕೆ ತಾವೇ ನಡೆದುಕೊಂಡುಬಂದು ಆತ್ಮಹತ್ಯೆಗೆ ಶರಣಾಗಿರೋದು ದೃಢಪಟ್ಟಿದೆ.
ನೇಣು ಬಿಗಿದ ಸ್ಥಿತಿಯಲ್ಲಿದ್ದ ಶವ ಕೆಳಗಿಳಿಸುವಾಗ ಕಣ್ಣಿಗೆ ಗಾಯವಾದ ಸಂಗತಿ ಗೊತ್ತಾಗಿದೆ. ಆತ್ಮಹತ್ಯೆಗೆ ಪ್ರೇರಣೆ ನೀಡಿರುವ ಆರೋಪದಡಿ ಸೊಸೆ ಕಾವ್ಯಶ್ರೀ ವಿರುದ್ಧ ಚೇಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

