ಉಡುಪಿ: ಜಿಲ್ಲೆಯಲ್ಲಿ ಪ್ರವಾಸಕ್ಕೆ ಆಗಮಿಸಿದ್ದ ಯುವಕರ ತಂಡವು ವಿವಿಧ ಸ್ಥಳಗಳನ್ನು ವೀಕ್ಷಿಸಿ, ಮರವಂತೆ ಗ್ರಾಮದ ವರಾಹಸ್ವಾಮಿ ದೇವಸ್ಥಾನದ ಮುಂಭಾಗ ಹರಿಯುವ ಕೊಲ್ಲೂರು ನದಿಯಲ್ಲಿ ದೋಣಿ ವಿಹಾರಕ್ಕೆ ಹೋದ ಸಂದರ್ಭದಲ್ಲಿ ಭಾರೀ ಗಾಳಿಗೆ ಬೋಟ್ ಮಗುಚಿ ನೀರು ಪಾಲಾದ ಇಬ್ಬರನ್ನು ಎನ್.ಡಿ.ಆರ್.ಎಫ್ ತಂಡವು ರಕ್ಷಣೆ ಮಾಡಿ ಪ್ರಾಣಾಪಾಯದಿಂದ ಪಾರು ಮಾಡಿದೆ.
ಸ್ವಲ್ಪ ತಡೀರಿ.. ಇದು ನೈಜ ಅವಡವಲ್ಲ. ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಹಾಗೂ ಎನ್.ಡಿ.ಆರ್.ಎಫ್ ವತಿಯಿಂದ ವಿವಿಧ ಇಲಾಖೆಗಳ ಸಹಯೋಗದೊಂದಿಗೆ ಪ್ರವಾಹ ಕುರಿತು ಆಯೋಜಿಸಿದ ಅಣುಕು ಪ್ರದರ್ಶನ.

ಈ ಸಂದರ್ಭದಲ್ಲಿ ಸಹಾಯಕ ಕಮಿಷನರ್ ರಶ್ಮಿ ಎಸ್.ಆರ್. ಮಾತನಾಡಿ, ಅಣುಕು ಪ್ರದರ್ಶನವು ನೈಜವಾಗಿ ನಡೆದಿದೆ ಎಂಬ ರೀತಿಯಲ್ಲಿ ಕಂಡುಬಂದಿದೆ. ಇಂತಹ ಅಭ್ಯಾಸಗಳು ಭವಿಷ್ಯದ ವಿಕೋಪ ಸಂದರ್ಭದಲ್ಲಿ ರಕ್ಷಣಾ ಕಾರ್ಯಗಳನ್ನು ಕೈಗೊಳ್ಳಲು ಸಹಾಯವಾಗುತ್ತದೆ. ಕೆಲವೊಮ್ಮೆ ಪರಿಣಿತಿ ಇಲ್ಲದೇ ರಕ್ಷಣಾ ಕಾರ್ಯಾಚರಣೆ ಮಾಡಿದಂತಹ ಸಂದರ್ಭದಲ್ಲಿ ಪ್ರಾಣಾಪಾಯಗಳಾಗುವ ಸಾಧ್ಯತೆ ಇರುತ್ತವೆ. ಅನುಭವ ಹಾಗೂ ಕುಶಲತೆಯಿಂದ ರಕ್ಷಣಾ ಕಾರ್ಯಗಳನ್ನು ಮಾಡಿದಾಗ ಎಲ್ಲರನ್ನೂ ಉಳಿಸಲು ಸಾಧ್ಯ. ಸಾರ್ವಜನಿಕರು ಪ್ರಾಕೃತಿಕ ವಿಕೋಪ ಸಂದರ್ಭಗಳಲ್ಲಿ ಜಿಲ್ಲಾ ಹಾಗೂ ತಾಲೂಕು ಆಡಳಿತ ನೀಡುವಂತಹ ಎಚ್ಚರಿಕೆಯ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದರು.
ಮೀನುಗಾರಿಕಾ ಇಲಾಖೆಯ ಜಂಟಿ ನಿರ್ದೇಶಕ ವಿವೇಕ್, ಜಿಲ್ಲಾ ಅಗ್ನಿಶಾಮಕ ಅಧಿಕಾರಿ ವಿನಾಯಕ ಯು. ಕಲ್ಲುಟಕರ್, ಜಿಲ್ಲಾ ವಿಪತ್ತು ನಿರ್ವಹಣಾಧಿಕಾರಿ ರವಿ, ಬೈಂದೂರು ತಹಶೀಲ್ದಾರ್ ರಾಮಚಂದ್ರಪ್ಪ, ಇ.ಓ. ರಾಜ್ಕುಮಾರ್, ಬಿ.ಓ ನಾಗೇಶ್ ನಾಯ್ಕ್, ಬೈಂದೂರು ಎನ್.ಡಿ.ಆರ್.ಎಫ್ 10ನೇ ಬೆಟಾಲಿಯನ್ ಇನ್ಸ್ಪೆಕ್ಟರ್ ಪ್ರದಿಪ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.