ಉಡುಪಿ ಜಿಲ್ಲೆ ಶೈಕ್ಷಣಿಕ ಮಾತ್ರವಲ್ಲ ಕ್ರೀಡಾ ಕ್ಷೇತ್ರ ದಲ್ಲೂ ಮುಂದುವರೆದಿದೆ. ಆತ್ಮ ರಕ್ಷಣೆ ಯ ಕಲೆ ಬರೀ ಕ್ರೀಡೆಗೆ ಸೀಮಿತವಲ್ಲ. ಬದಲಾಗಿ ಅದು ನಮ್ಮ ಜೀವನದ ಅಡಿ ಪಾಯವಾಗಿದೆ ಎಂದು ಉಡುಪಿ ಶಾಸಕ ಯಶಪಾಲ್ ಸುವರ್ಣ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇತ್ತೀಚಿಗೆ ಅಜ್ಜರಕಾಡು ಮಹಾತ್ಮ ಗಾಂಧಿ ಕ್ರೀಡಾ ಮೈದಾನದಲ್ಲಿ ಕರ್ನಾಟಕ ಟೆಕ್ವಾoಡೋ ಆಯೋಜತ್ವದಲ್ಲಿ , ಯಕ್ಷಿತ್ ಯುವ ಫೌಂಡೇಶನ್ನ ಕೃಪಾಪೋಷಣೆ ಅಡಿಯಲ್ಲಿ ಉಡುಪಿ ಜಿಲ್ಲಾ ಟೆಕ್ವಾoಡೋ ಸಂಸ್ಥೆ ನಡೆಸಿದ ರಾಜ್ಯಮಟ್ಟದ ಸಬ್ ಜೂನಿಯರ್, ಕ್ಯಾಡೆಟ್, ಜೂನಿಯರ್ ಮತ್ತು ಸೀನಿಯರ್ ವಿಭಾಗದ, ಎರಡನೇ ಆವೃತ್ತಿಯ ಕರಾವಳಿ ಟೆಕ್ವಾoಡೋ ಚಾಂಪಿಯನ್ ಶಿಪ್ 2026 ಉದ್ಘಾಟಿಸಿ ಮಾತನಾಡಿದರು.
ವಿವಿಧ ಕ್ರೀಡೆಗಳನ್ನು ಅತಿ ಹೆಚ್ಚು ಆಯೋಜಿಸುವ ಜಿಲ್ಲೆ ಇದ್ದರೆ ಅದು ಉಡುಪಿ ಜಿಲ್ಲೆ. ಹೊಸ ಪರಿಚಯ ಎಂಬಂತೆ ಟೆಕ್ವಾoಡೋ ಕ್ರೀಡೆ ಉಡುಪಿಯಲ್ಲಿ ಆಯೋಜನೆಯಾಗಿದೆ. ಈ ಕ್ರೀಡೆ ಇನ್ನಷ್ಟು ಜನಪ್ರಿಯವಾಗಲಿ ಎಂದು ಶುಭ ಹಾರೈಸಿದರು. ಉಡುಪಿ ಜಿಲ್ಲಾ ಟೆಕ್ವಾoಡೋ ಸಂಸ್ಥೆಯ ಗೌರವಾಧ್ಯಕ್ಷ ವಾದಿರಾಜರಾವ್ ಈ ಸಂದರ್ಭದಲ್ಲಿ ಮಾತನಾಡಿ ಕ್ರೀಡಾಕೂಟಕ್ಕೆ ಶುಭ ಹಾರೈಸಿದರು.
ಸಮಾರಂಭದಲ್ಲಿ ಘನ ಉಪಸ್ಥಿತಿ ವಹಿಸಿದ್ದ ಯಕ್ಷಿತ್ ಯುವ ಫೌಂಡೇಶನ್ ಅಧ್ಯಕ್ಷರಾದ ಇಂಟರ್ನ್ಯಾಷನಲ್ ಐಕಾನ್ ಅವಾರ್ಡ್ 2025ರ ಪುರಸ್ಕೃತ, ಶ್ರೀಪಾದ ರವಿ ರಾವ್ ಪ್ರಸ್ತಾವಿಕವಾಗಿ ಮಾತನಾಡಿ, ತಮ್ಮ ಸಂಸ್ಥೆಯ ಯುವಜನರನ್ನು ದೇಶದ ಪ್ರಜ್ಞಾವಂತ ಪ್ರಜೆಯಾಗಿ ಮಾಡಲು ಹಲವಾರು ಉಪಕ್ರಮಗಳಲ್ಲಿ, ಕ್ರೀಡಾಪಟುಗಳಿಗೆ ಎಲ್ಲ ರೀತಿಯ ಬೆಂಬಲ ನೀಡಿ ಮುಂದೂಡುವ ಈ ಉಪಕ್ರಮ ಅತ್ಯಂತ ಮಹತ್ವವಾದದ್ದು ಎಂದು ಅಭಿಪ್ರಾಯ ಪಟ್ಟರು. ಸಮಾರಂಭದ ಅಧ್ಯಕ್ಷತೆಯನ್ನ ಉಡುಪಿ ಜಿಲ್ಲಾ ಟೆಕ್ವಾoಡೋ ಸಂಸ್ಥೆಯ ಅಧ್ಯಕ್ಷೆ ರಮ್ಯಾ ವಿ ವಹಿಸಿದ್ದರು.
ವೇದಿಕೆಯಲ್ಲಿ ಬೆಳಗಾವಿ ಕಿತ್ತೂರು ರಾಣಿ ಚೆನ್ನಮ್ಮ ವಿಶ್ವವಿದ್ಯಾನಿಲಯದ ಶಾರೀರಿಕ ಶಿಕ್ಷಣ ಮತ್ತು ಕ್ರೀಡಾ ಇಲಾಖೆಯ ನಿರ್ದೇಶಕ ಜಗದೀಶ್ ಗಸ್ತಿ, ಓಪುಲಾ ಸಾಫ್ಟ್ವೇರ್ ಇದರ ಸಿಇಒ ಸುಭಾಷ್ ಸಾಲ್ಯಾನ್,317c ಇದರ ಮಾಜಿ ಜಿಲ್ಲಾ ಗವರ್ನರ್ ಸುರೇಶ್ ಪ್ರಭು, ಯಕ್ಷಿತ್ ಯುವ ಫೌಂಡೇಶನ್ ಟ್ರಸ್ಟಿ ಸ್ವಪ್ನಿಲ್ ಪಾಟೀಲ್, ಕ್ರೀಡಾಕೂಟದ ಆಯೋಜಕ ಕಾರ್ಯದರ್ಶಿ ರಾಜಶೇಖರ್ ಕೆ ಪಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ರಾಜ್ಯದ ವಿವಿಧ ಜಿಲ್ಲೆಗಳಿಂದ 350 ಕ್ಕಿಂತಲೂ ಹೆಚ್ಚಿನ ಕ್ರೀಡಾಪಟುಗಳು ಈ ಪಂದ್ಯಾಟದಲ್ಲಿ ಭಾಗವಹಿಸಿದ್ದರು. ಗೆದ್ದ ವಿಜೇತರಿಗೆ ಪದಕ ಮತ್ತು ಪ್ರಮಾಣ ಪತ್ರ ವಿತರಿಸಿ ಗೌರವಿಸಲಾಯಿತು. ಸಮಾರೋಪ ಸಮಾರಂಭದಲ್ಲಿ ಚಾಂಪಿಯನ್ ತಂಡಗಳಿಗೆ ಟ್ರೋಫಿ ವಿತರಿಸಲಾಯಿತು.

