ಉಡುಪಿ : ಶಿಲೀಂಧ್ರ ರೋಗದ ಹೊಡೆತ, ಕಲ್ಲಂಗಡಿ ಬೆಳೆಗಾರರಲ್ಲಿ ಆತಂಕ

0
59

ಉಡುಪಿ ಜಿಲ್ಲೆಯಲ್ಲಿ ಬತ್ತದ ಎರಡನೇ ಬೆಳೆಗೆ ಬದಲಾಗಿ ತರಕಾರಿ ಮತ್ತು ಕಲ್ಲಂಗಡಿ ಹಣ್ಣು ಬೆಳೆಯುವವರ ಸಂಖ್ಯೆ ಅಧಿಕವಿದ್ದು, ಇದೀಗ ಕಲ್ಲಂಗಡಿ ಬೆಳೆಗೆ ಶಿಲೀಂಧ್ರ ರೋಗ ತೀವ್ರವಾಗಿ ಕಾಡುತ್ತಿರುವುದರಿಂದ ರೈತರು ಆತಂಕಕ್ಕೊಳಗಾಗಿದ್ದಾರೆ.

ಬೈಂದೂರು ಭಾಗದಲ್ಲಿ ಹೆಚ್ಚಾಗಿ ಕಲ್ಲಂಗಡಿ ಬೆಳೆಗೆ ಶಿಲೀಂಧ್ರ ರೋಗ ಬಾಧೆ ಉಂಟಾಗಿದ್ದು, ಈಗಾಗಲೇ ಕಟಾವಿಗೆ ಬಂದಿರುವ ಕಲ್ಲಂಗಡಿ ಬೆಳೆಗೆ ಕಂಟಕ ತರುತ್ತಿದೆ. ಶಿಲೀಂಧ್ರ ಸೋಂಕಿನಿಂದಾಗಿ ಬಳ್ಳಿಗಳು ಒಣಗಿ ಹೋಗುತ್ತಿವೆ. ಅದರಿಂದ ಇಳುವರಿ ಕುಸಿತವಾಗುವುದರ ಜೊತೆಗೆ ಬಳ್ಳಿಯೇ ಸತ್ತು ಹೋಗುತ್ತಿದೆ ಎಂದಿದ್ದಾರೆ ರೈತರು.

ಈ ಬಾರಿ ತರಕಾರಿ ಬೆಳೆಯಲ್ಲೂ ರೋಗ ಕಾಣಿಸಿಕೊಂಡಿದ್ದರೂ ಕಲ್ಲಂಗಡಿ ಬೆಳೆಗೆ ಅತೀ ಹೆಚ್ಚು ಬಾಧಿಸಿದೆ. ಇನ್ನೇನು ಕಟಾವಿಗೆ ಸಿದ್ಧವಾಗುತ್ತಿರುವ ಸಂದರ್ಭದಲ್ಲಿ ಹೊಲಗಳಲ್ಲಿ ಕಲ್ಲಂಗಡಿ ಬಳ್ಳಿಗಳೇ ಸತ್ತು ಹೋಗುತ್ತಿರುವುದರಿಂದ ನಷ್ಟ ಉಂಟಾಗಿದೆ , ಕೆಲವೇ ದಿನಗಳಲ್ಲಿ ಕಟಾವು ಆರಂಭವಾಗಲಿರುವುದರಿಂದ ಬಳ್ಳಿಗಳಿಗೆ ಔಷಧಿ ಸಿಂಪಡಿಸಿಲ್ಲ. ಈ ಬಾರಿ ಅತಿಯಾದ ಚಳಿಯ ವಾತಾವರಣವಿತ್ತು ಅದರಿಂದಲೂ ರೋಗ ಬಾಧೆ ಹೆಚ್ಚಾಗಿರುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ ಕೃಷಿಕರು. ಒಂದೊಂದು ಬಳ್ಳಿಗಳಲ್ಲಿ ಕಾಣಿಸಿಕೊಳ್ಳುವ ರೋಗವು ಶೀಘ್ರವಾಗಿ ಹೊಲವಿಡೀ ಹರಡುತ್ತಿದೆ. ಈ ರೋಗ ಬಾಧಿಸಿರುವುದರಿಂದ ಕಲ್ಲಂಗಡಿ ಹಣ್ಣುಗಳ ಬೆಳವಣಿಗೆಯೂ ಕುಂಠಿತವಾಗಿತ್ತಿದೆ ಎಂದು ತಿಳಿಸಿದ್ದಾರೆ.

‘ಈಗಾಗಲೇ ಕೆಲವೆಡೆ ಕಲ್ಲಂಗಡಿ ಕಟಾವು ಆರಂಭವಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಇಳುವರಿ ಭಾರೀ ಕುಸಿತವಾಗಿದೆ. ಬೈಂದೂರು ಭಾಗದಲ್ಲಿ ಹೆಚ್ಚಿನ ರೈತರಿಗೆ ನಷ್ಟ ಉಂಟಾಗಿದೆ. ಹೂಮಿಡಿ ಕಾಣಿಸಿಕೊಳ್ಳುವ ಸಂದರ್ಭದಲ್ಲಿ ರೋಗ ತಗುಲಿರುವ ಕಾರಣ ಕಲ್ಲಂಗಡಿ ಹಣ್ಣು ಬೆಳವಣಿಗೆಯಾಗಿಲ್ಲ’ ಎನ್ನುತ್ತಾರೆ ನಾಗೂರಿನ ರೈತ ಸುಧಾ ಬಳೆಗಾರ್.

ಈ ಬಾರಿ ಕಲ್ಲಂಗಡಿ ಹಣ್ಣಿಗೆ ಬೇಡಿಕೆಯೂ ಇದೆ, ಉತ್ತಮ ದರವೂ ಇದೆ. ಆದರೆ, ರೋಗದಿಂದಾಗಿ ಇಳುವರಿ ಕುಸಿತವಾಗಿ ರೈತರಿಗೆ ನಷ್ಟ ಉಂಟಾಗಿದೆ. ಬಳ್ಳಿಯಿಂದ ಕಾಯಿಗಳು ಉದುರಿ ಹೋಗಿವೆ. ಈ ಬಾರಿ ಕಪ್ಪು ಕಲ್ಲಂಗಡಿ ಕೆ.ಜಿಗೆ ₹16ರಿಂದ ₹17 ಇದೆ. ನಾಮಧಾರಿ ತಳಿಯ ಕಲ್ಲಂಗಡಿಗೆ ಕೆ.ಜಿಗೆ ₹14 ರಿಂದ ₹15 ಇದೆ’ ಎನ್ನುತ್ತಾರೆ ಅವರು. ‘ಕಲ್ಲಂಗಡಿ ಹಣ್ಣು ಕಟಾವಿಗೆ ಬರಲು 70 ದಿವಸ ಬೇಕು. ಆದರೆ, ಈ ಬಾರಿ ತಡವಾಗಿ ಹೂಮಿಡಿಯಾಗಿದ್ದರಿಂದ ಇನ್ನೂ ಹಲವೆಡೆ ಕಟಾವು ಆರಂಭವಾಗಿಲ್ಲ’ ಎಂದೂ ಅವರು ವಿವರಿಸಿದರು.

LEAVE A REPLY

Please enter your comment!
Please enter your name here