
ಉಡುಪಿ: ಉಡುಪಿ ತಾಲೂಕು ತುಳುವ ಮಹಾಸಭೆಯ ಸಂಚಾಲಕರ ಸಭೆ ಉಡುಪಿಯ ಹಿಂದಿ ಭವನದಲ್ಲಿ ನಡೆಯಿತು. ಸಭೆಯನ್ನು ತುಳುವರ್ಲ್ಡ್ ಫೌಂಡೇಶನ್ ಕಟೀಲ್, ಕಾರ್ಯದರ್ಶಿ ಹಾಗೂ ಹಿಂದೂಸ್ತಾನ್ ಪೆಟ್ರೋಲಿಯಂ ಲಿಮಿಟೆಡ್ನ ನಿವೃತ್ತ ಮುಖ್ಯ ಪರಿಚರಣ ಪ್ರಬಂಧಕರಾದ ವಸಂತ ರೈ ಕುತ್ತೆತ್ತೂರು ಉದ್ಘಾಟಿಸಿದರು.

ಅಧ್ಯಕ್ಷತೆ ವಹಿಸಿದ ತುಳುವರ್ಲ್ಡ್ ಫೌಂಡೇಶನ್ ಇದರ ಉಪಾಧ್ಯಕ್ಷೆ ಮತ್ತು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಮಾಜಿ ಸದಸ್ಯೆ ಶ್ರೀಮತಿ ತಾರಾ ಆಚಾರ್ಯ ಮಾತನಾಡಿ, “ತುಳುವ ಮಹಾಸಭೆಯನ್ನು ಪ್ರತಿಯೊಬ್ಬ ತುಳುವನೂ ಆಲಂಗಿಸಿಕೊಳ್ಳಬೇಕು. ನಮ್ಮ ಹಿರಿಯರು ಕಟ್ಟಿದ ತುಳುನಾಡಿನ ಕನಸು ನನಸಾಗಲು ಇದು ಅಗತ್ಯ. ಸರಕಾರಗಳಲ್ಲಿ ನಾವು ನಾಡು-ಬೀಡು ಕೇಳಿಲ್ಲ, ನಮ್ಮ ಭಾಷೆಗೆ ಗೌರವ ಕೇಳಿದ್ದೇವೆ. ಅದು ಇನ್ನೂ ದೊರಕದಿದ್ದರೂ, ನಮ್ಮ ಸಂಸ್ಕೃತಿ-ಭಾಷೆಯನ್ನು ಉಳಿಸಿ ಬೆಳೆಸುವುದು ನಮ್ಮ ಕರ್ತವ್ಯ” ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ತುಳುವರ್ಲ್ಡ್ ಫೌಂಡೇಶನ್ ನಿರ್ದೇಶಕರು ಡಾ. ರಾಜೇಶ್ ಆಳ್ವ ಬದಿಯಡ್ಕ, ಪ್ರಧಾನ ಸಂಚಾಲಕರು ಹಾಗೂ ಸಂಗೀತ ನಿರ್ದೇಶಕರು ಪ್ರಮೋದ್ ಸಪ್ರೆ, ಆಧ್ಯಾತ್ಮ ಸಾಧಕರು ಮತ್ತು ತುಳುವ ಮಹಾಸಭೆ ಮಂಗಳೂರು ತಾಲೂಕು ಸಂಚಾಲಕರು ಅರವಿಂದ ಬೆಳ್ಚಾಡ, ಕಾರ್ಯನಿರ್ವಾಹಕ ಸಂಚಾಲಕರಾದ ರಾಘವೇಂದ್ರ ಶೆಟ್ಟಿ ಅತ್ರಾಡಿ ಮತ್ತು ಹರಿಪ್ರಸಾದ್ ರೈ ಜಿಕೆ ಉಪಸ್ಥಿತರಿದ್ದರು.
ಸಭೆಯಲ್ಲಿ ಉಡುಪಿ ತಾಲೂಕು ಸಂಚಾಲಕರು ಸುನಿಲ್ ಸಾಲಿಯಾನ್ (ಗವರ್ನರ್ – ಅಲಯನ್ಸ್ ಇಂಟರ್ನ್ಯಾಷನಲ್), ವೈದ್ಯರತ್ನ ಭಾಸ್ಕರ ಪೂಜಾರಿ, ಅಶೋಕ್ ಶೆಟ್ಟಿ ಉಡುಪಿ, ರಕ್ಷಿತ್ ಆಚಾರ್ಯ (ಅಮೃತ ಭಾರತಿ ವಿದ್ಯಾಲಯ, ಹೆಬ್ರಿ), ಮಾಲತಿ ಆಚಾರ್ಯ (ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ, ಬೊಮ್ಮರಬೆಟ್ಟು), ಆದಿತ್ಯ ಭಾಸ್ಕರ್ (ಸಿವಿಲ್ ಇಂಜಿನಿಯರ್, ಉಡುಪಿ), ಶಿವಪ್ರಸಾದ್ ಆಚಾರ್ಯ ಪೆರ್ಡೂರು (ಕಾಷ್ಠಶಿಲ್ಪಿ), ಉಲ್ಲಾಸ್ ಮೂರೂರು, ರಂಜಿತ್ ಕಾರ್ಕಳ, ಪ್ರಶಾಂತ್ ಹಿರಿಯಡ್ಕ ಮೊದಲಾದವರು ಕಾರ್ಯ ವೈಖರಿ ಕುರಿತು ಸಲಹೆ-ಸೂಚನೆಗಳನ್ನು ನೀಡಿದರು.
ತುಳುವ ಮಹಾಸಭೆಯ ಉಡುಪಿ ತಾಲೂಕು ಪ್ರಧಾನ ಸಂಚಾಲಕರು ಮತ್ತು ಆಧ್ಯಾತ್ಮ ಚಿಂತಕರು, ಪಾರಂಪರಿಕ ನಾಟಿ ವೈದ್ಯರಾದ ವಿಶ್ವನಾಥ ಆಚಾರ್ಯ ಸ್ವಾಗತಿಸಿ, ಈ ತುಳುವ ಮಹಾಸಭಾವು ಎಸ್.ಯು. ಪಣಿಯಾಡಿಯವರ ಕನಸಿನಂತೆ ಪ್ರತಿ ಮನೆ-ಮನಗಳನ್ನು ಮುಟ್ಟಬೇಕು ಎಂದು ಹೇಳುತ್ತಾ ಉಡುಪಿ ತಾಲೂಕಿನ ತಮ್ಮ ಪರಿಕಲ್ಪನೆಯ ತುಳುವ ಮಹಾಸಭೆಗೆ 2028 ರಲ್ಲಿ 100 ವರ್ಷ ಸಂದಲಿದೆ. ಈ ನಿಟ್ಟಿನಲ್ಲಿ ತೊಡಗಿಸಿಕೊಳ್ಳುವ ಬಗ್ಗೆ ವಿವರಿಸಿದರು. ಸೌಮ್ಯರಾಣಿ ವಿ. ಆಚಾರ್ಯ ಪೆರ್ಡೂರು , ಆರ್.ಹೆಚ್.ಪಿ ಆಯುರ್ವೇದ ಕೈರು ಇವರು ಕಾರ್ಯಕ್ರಮ ನಿರ್ವಹಿಸಿದರು. ಸಭೆಯಲ್ಲಿ ಅಕ್ಟೋಬರ್ 6ರಿಂದ 11ರವರೆಗೆ ತುಳುವೇಶ್ವರ ದೇವಸ್ಥಾನದಲ್ಲಿ ನಡೆಯುವ ಅಷ್ಟಮಂಗಳ ಪ್ರಶ್ನೆ ಚಿಂತನೆಯ ಬಗ್ಗೆ ಪ್ರತಿಯೊಬ್ಬರು ಪಾಲ್ಗೊಳ್ಳುವಂತೆ ಕಾರ್ಯ ಪ್ರವೃತ್ತರಾಗಲು ನಿರ್ಧರಿಸಲಾಯಿತು.