ಉಡುಪಿ: ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟ ( ರಿ ) ಕರ್ನಾಟಕ – ಕೇರಳದ ನಿಯೋಗವು ಕಂದಾಯ ಸಚಿವರಾದ ಕೃಷ್ಣ ಬೈರೇಗೌಡ ರವರಿಗೆ ಉಡುಪಿ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ನಡೆದ ಕಂದಾಯ ಇಲಾಖೆಯ ಯೋಜನೆಗಳ ಕುರಿತ ಪ್ರಗತಿ ಪರಿಶೀಲನಾ ಸಭೆಯಲ್ಲಿ ಕೊರಗ ಸಮುದಾಯದ ಬೇಡಿಕೆಗಳ ಮನವಿಯನ್ನು ಸಲ್ಲಿಸಲಾಯಿತು.
ಸಮುದಾಯದ ಪ್ರಮುಖ ಬೇಡಿಕೆಗಳಾದ ಸಮುದಾಯದ 800 ದರ್ಕಾಸು ಅರ್ಜಿ ಸಲ್ಲಿಸಿದ್ದು ಕೂಡಲೇ ಭೂಮಿ ಗುರುತಿಸಿ ಭೂಮಿ ಹಕ್ಕುಪತ್ರ ನೀಡುವುದು, ಹಿರಿಯರ ಹೆಸರಿನಲ್ಲಿರುವ ಜಮೀನಿನ ಖಾತೆ ಬದಲಾವಣೆ ವಿಶೇಷ ಆಂದೋಲನ ನಡೆಸಿ ಖಾತೆ ಬದಲಾವಣೆಗೆ ಅಧಿಕಾರಿಗಳಿಗೆ ಸೂಚಿಸಬೇಕು, ಜಮೀನು ಹೊಂದಿದ ಹಕ್ಕುದಾರರ ಗಡಿಗುರುತು ನಕ್ಷೆ ಇನ್ನಿತರ ಸಮಸ್ಯೆಗಳನ್ನು ಬಗೆಹರಿಸಲು ತಾಲೂಕಿಗೆ ವಿಶೇಷ ಸರ್ವೇಯವರು ನೇಮಕ ಮಾಡಬೇಕು.
ಕೊರಗರ ಭೂಮಿ ಸಮಸ್ಯೆಗಳನ್ನು ಬಗೆಹರಿಸಲು ವಿಶೇಷ ಅಧಿಕಾರಿಗಳನ್ನು ಜಿಲ್ಲಾಧಿಕಾರಿಗಳಿಗೆ ನೇಮಕ ಮಾಡಬೇಕು. ಗೇರು ಕೃಷಿ ಅಭಿವೃದ್ಧಿ ನಿಗಮ ಹಾಗೂ ಅರಣ್ಯ ಇಲಾಖೆ ವಾಸದಲ್ಲಿರುವ ಡಿಸಿ ಮನ್ನಾ ಭೂಮಿಯಲ್ಲಿ ಕೊರಗರಿಗೆ ಹಂಚಲು ಕ್ರಮ ವಹಿಸಬೇಕು. ಡಾ. ಮಹಮ್ಮದ್ ಪೀರ್ ವರದಿಯಂತೆ ಕೊರಗ ಸಮುದಾಯದ ಪ್ರತಿಯೊಂದು ಕುಟುಂಬಕ್ಕೂ ಕನಿಷ್ಠ 1 ಎಕ್ರೆ ಕೃಷಿ ಭೂಮಿ ಒದಗಿಸಬೇಕು. ಕೊರಗ ಸಮುದಾಯದ ಅಧ್ಯಯನ ಕೇಂದ್ರ ಸ್ಥಾಪನೆಗೆ 100 ಎಕ್ರೆ ಭೂಮಿ ಕಾದಿರಿಸಬೇಕು. ಮತ್ತು ಈಗಾಗಲೇ ಕೊರಗರಿಗೆ ಹಕ್ಕುಪತ್ರ ನೀಡಲು ಬಾಕಿ ಇರುವ ಎಲ್ಲಾ ಅರ್ಜಿಗಳನ್ನು ಪರಿಗಣಿಸಿ ಹಕ್ಕುಪತ್ರ ನೀಡಬೇಕು ಎಂಬ ಬೇಡಿಕೆಯನ್ನು ಸಲ್ಲಿಸಲಾಯಿತು.
ನಿಯೋಗದಲ್ಲಿ ಒಕ್ಕೂಟದ ಅಧ್ಯಕ್ಷರಾದ ಸುಶೀಲ ನಾಡ, ಸಂಯೋಜಕರಾದ ಪುತ್ರನ್ ಹೆಬ್ರಿ, ಕೊಕ್ಕರ್ಣೆ ಸಂಘದ ಸದಸ್ಯರಾದ ಶೇಖರ ಕೆಂಜೂರು, ಸುಪ್ರಿಯಾ ಎಸ್ ಕಿನ್ನಿಗೋಳಿ, ನರಸಿಂಹ ಪೆರ್ಡೂರು, ಶುಭ, ಶೋಭಾ, ವಸಂತ, ಮುದ್ದು, ಸುನಂದಾ ಮತ್ತು ಚಂದ್ರವತಿ ಉಪಸ್ಥಿತರಿದ್ದರು.