ವಿಟ್ಲ : ವಿಟ್ಲ ಹಳೆ ಬಸ್ ನಿಲ್ದಾಣದಲ್ಲಿ ತಂಗಲು ಹಿಂದಕ್ಕೆ ಬರುತ್ತಿದ್ದ ಬಸ್ಸೊಂದು ಮಹಿಳೆಯೊಬ್ಬರಿಗೆ ಢಿಕ್ಕಿ ಹೊಡೆದು ಗಂಭೀರವಾಗಿ ಗಾಯಗೊಂಡಿದ್ದಾರೆ. ವಿಟ್ಲ – ಮುಡಿಪು – ಸ್ಟೇಟ್ಬ್ಯಾಂಕ್ ಸಂಚರಿಸುವ ಖಾಸಗಿ ಬಸ್ ವಿಟ್ಲ ಹಳೆ ಬಸ್ ನಿಲ್ದಾಣದಲ್ಲಿ ಹಿಂದಕ್ಕೆ ಬರುತ್ತಿತ್ತು.
ಇನ್ನೊಂದು ಬಸ್ಸಿಂದ ಇಳಿದು ಹೋಗುತ್ತಿದ್ದ ಮಹಿಳೆ ಕೇಪು ಗ್ರಾಮದ ಕುದ್ದುಪದವು ಚೆಲ್ಲಡ್ಕ ನಿವಾಸಿ ಈಶ್ವರ ನಾಯ್ಕ ಅವರ ಪತ್ನಿ ಸುಶೀಲ (50) ಬಸ್ಸಿನ ಅಡಿಗೆ ಬೀಳುತ್ತಿರುವುದನ್ನು ನೋಡಿದ ಸ್ಥಳೀಯರು ಮತ್ತು ಆಟೋ ಚಾಲಕರು ಬಸ್ಸು ನಿಲ್ಲಿಸುವಂತೆ ತಡೆಯಲು ಪ್ರಯತ್ನಿಸಿದ್ದಾರೆ.
ಎಚ್ಚೆತ್ತ ಚಾಲಕ ಬಸ್ಸನ್ನು ನಿಲ್ಲಿಸಿದ್ದರಿಂದ ಮಹಿಳೆಯ ಪ್ರಾಣ ಉಳಿದಿದೆ. ಗಂಭೀರವಾಗಿ ಗಾಯಗೊಂಡ ಮಹಿಳೆಯನ್ನು ಚಿಕಿತ್ಸೆಗಾಗಿ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲಾಗಿದ್ದಾರೆ ಎನ್ನಲಾಗಿದೆ.

