ಝಾನ್ಸಿ: ಉತ್ತರ ಪ್ರದೇಶದ ಝಾನ್ಸಿಯಲ್ಲಿ ನಡೆದ ಮಹಿಳೆ ಹತ್ಯೆ ಹಾಗೂ ಚಿನ್ನಾಭರಣ ಕಳ್ಳತನ ಪ್ರಕರಣವನ್ನು ಪೊಲೀಸರು ಭೇದಿಸಿದ್ದಾರೆ. ಝಾನ್ಸಿಯಲ್ಲಿ 54 ವರ್ಷದ ಮಹಿಳೆಯ ಕೊಲೆ ನಡೆದಿತ್ತು. ಜತೆಗೆ ಮನೆಯಲ್ಲಿದ್ದ ಚಿನ್ನಾಭರಣವೆಲ್ಲಾ ಕಳ್ಳತನವಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತ ಮಹಿಳೆಯ ಸೊಸೆಯನ್ನು ಪೊಲೀಸರು ಬಂಧಿಸಿದ್ದಾರೆ.
ಸುಶೀಲಾ ದೇವಿಯನ್ನು ಕೊಂದ ಆರೋಪಿ ಪೂಜಾ ಮತ್ತು ಆಕೆಯ ಸಹೋದರಿ ಕಮಲಾ ನ್ಯಾಯಾಂಗ ಬಂಧನದಲ್ಲಿದ್ದಾರೆ, ಕೊಲೆಯ ನಂತರ ಪರಾರಿಯಾಗಿದ್ದ ಕಮಲಾಳ ಪ್ರಿಯಕರ ಅನಿಲ್ ವರ್ಮಾನನ್ನು ಪೊಲೀಸರು ಗುಂಡು ಹಾರಿಸಿ ಬಂಧಿಸಿದ್ದಾರೆ. ಈ ಮೂವರು ಸುಶೀಲಾದೇವಿಯ ಕೊಲೆಗೆ ಸಂಚು ರೂಪಿಸಿದ್ದರು. ಝಾನ್ಸಿಯಲ್ಲಿರುವ ಮನೆಯಿಂದ 8 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಲೂಟಿ ಮಾಡಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಪೂಜಾ ತನ್ನ ಪತಿ ಮೃತಪಟ್ಟ ಬಳಿಕ ಅವರ ಇಬ್ಬರು ಸಹೋದರರ ಜತೆ ಅಕ್ರಮ ಸಂಬಂಧದಲ್ಲಿದ್ದಳು. ಜತೆಗೆ ಆಸ್ತಿಯನ್ನು ಕಬಳಿಸಲು ಸಂಚು ರೂಪಿಸಿದ್ದಳು. ಆಕೆಯ ಜತೆ ಆಕೆಯ ಸಹೋದರಿಯ ಪ್ರಿಯಕರ ಅನಿಲ್ ವರ್ಮಾ ಕೂಡ ಇದ್ದರು. ಕದ್ದ ಆಭರಣಗಳನ್ನು ಸಂಬಂಧಿಕರೊಬ್ಬರಿಗೆ ಮಾರಾಟ ಮಾಡಲು ಅನಿಲ್ ವರ್ಮಾ ತೆರಳುತ್ತಿದ್ದಾಗ ಪೊಲೀಸರು ಅಲ್ಲಿಗೆ ಹೋಗಿದ್ದಾರೆ. ವರ್ಮಾ ಪೊಲೀಸರ ಮೇಲೆ ಗುಂಡು ಹಾರಿಸಿದ್ದ, ಹೀಗಾಗಿ ಪೊಲೀಸರು ಕೂಡ ಅತನ ಮೇಲೆ ಗುಂಡು ಹಾರಿಸಿ ಬಂಧಿಸಿದ್ದಾರೆ.