ಯುದ್ಧ ಸದೃಶ ಪರಿಸ್ಥಿತಿಯಲ್ಲಿ ಯುವಕರಿಂದ ವಿಜಯದ ಸಂಕಲ್ಪ: ಹನುಮ ಜಯಂತಿಯಂದು ಸಾಮೂಹಿಕ ‘ಗದಾಪೂಜೆ’!

0
6

ರಾಮರಾಜ್ಯದ ಸ್ಥಾಪನೆಗಾಗಿ ದೇಶಾದ್ಯಂತ 850 ಸ್ಥಳಗಳಲ್ಲಿ ಸಾಮೂಹಿಕ ‘ಗದಾಪೂಜೆ’ ಸಂಪನ್ನ

ಉಡುಪಿ : “ಇಂದು ಇಡೀ ವಿಶ್ವವು ಯುದ್ಧದ ಅಂಚಿನಲ್ಲಿ ಬಂದು ನಿಂತಿದೆ. ಇತಿಹಾಸವನ್ನು ಗಮನಿಸಿದರೆ, ಯಾವ ಯುದ್ಧಗಳಲ್ಲಿ ಹನುಮಂತನು ನೆಲೆಸಿದ್ದಾನೋ, ಅಲ್ಲಿ ವಿಜಯವು ನಿಶ್ಚಿತವಾಗಿದೆ ಎಂದು ತಿಳಿಯುತ್ತದೆ. ಪ್ರಭು ಶ್ರೀರಾಮನ ಸೇನೆಯಲ್ಲಿದ್ದು ರಾವಣನ ಲಂಕೆಯನ್ನು ದಹಿಸಿದ ಹನುಮಂತನಿರಲಿ ಅಥವಾ ಮಹಾಭಾರತದಲ್ಲಿ ಅರ್ಜುನನ ರಥದ ಧ್ವಜದ ಮೇಲೆ ವಿರಾಜಮಾನನಾಗಿ ಅಧರ್ಮದ ವಿರುದ್ಧ ಪಾಂಡವರಿಗೆ ಬಲ ನೀಡಿದ ಹನುಮಂತನಿರಲಿ; ಪ್ರತಿ ಸ್ಥಳದಲ್ಲೂ ವಿಜಯವು ಖಚಿತವಾಗಿದೆ. ಅಷ್ಟೇ ಅಲ್ಲದೆ, ಛತ್ರಪತಿ ಶಿವಾಜಿ ಮಹಾರಾಜರ ‘ಹಿಂದವಿ ಸ್ವರಾಜ್ಯ’ದ ಸ್ಥಾಪನೆಗಾಗಿ ಸಮರ್ಥ ರಾಮದಾಸ ಸ್ವಾಮಿಗಳು ಗ್ರಾಮ ಗ್ರಾಮಗಳಲ್ಲಿ ಮಾರುತಿ ಮಂದಿರಗಳನ್ನು ಸ್ಥಾಪಿಸಿ ಪ್ರಾರಂಭಿಸಿದ ಬಲೋಪಾಸನೆಯಿಂದಾಗಿ, ಸ್ವರಾಜ್ಯಕ್ಕೆ ಆಧ್ಯಾತ್ಮಿಕ ಹಾಗೂ ಸಾಮರ್ಥ್ಯದ ಬಲ ದೊರೆಯಿತು. ಇಂದು ಮತ್ತೆ ದೇಶ ಮತ್ತು ಧರ್ಮವು ಸಂಕಷ್ಟದಲ್ಲಿದೆ ಹಾಗೂ ಎಲ್ಲೆಡೆ ಭಯದ ವಾತಾವರಣ ನಿರ್ಮಾಣವಾಗುತ್ತಿದೆ.

ಇಂತಹ ಸಮಯದಲ್ಲಿ ಪ್ರತಿಯೊಬ್ಬ ಹಿಂದೂವಿನಲ್ಲಿ ಮಾರುತಿಯಂತಹ ಶೌರ್ಯ, ಶಕ್ತಿ ಮತ್ತು ಭಕ್ತಿಯ ಜಾಗೃತಿಯಾಗಲಿ ಹಾಗೂ ಮುಂಬರುವ ಕಠಿಣ ಸಮಯದಲ್ಲಿ ಹನುಮ ದೇವರ ಆಶೀರ್ವಾದದಿಂದ ಹಿಂದೂಗಳ ವಿಜಯವು ಖಚಿತವಾಗಲಿ ಎನ್ನುವ ಸಂಕಲ್ಪದೊಂದಿಗೆ, ಶ್ರೀ ಹನುಮ ಜಯಂತಿಯ ನಿಮಿತ್ತ ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಉಡುಪಿ ಜಿಲ್ಲೆಯ ಅಂಬಾಗಿಲಿನ ಶ್ರೀ ರಾಮಾಂಜನೇಯ ದೇವಸ್ಥಾನ, ಉಪ್ಪೂರಿನ ಶ್ರೀ ಆಂಜನೇಯ ದೇವಸ್ಥಾನ, ಆತ್ರಾಡಿಯ ಆಂಜನೇಯ ದೇವಸ್ಥಾನ, ಕಾರ್ಕಳದ ಶ್ರೀ ಕೋಟೆ ಆಂಜನೇಯ ದೇವಸ್ಥಾನ ಹಾಗೂ ಇನ್ನೂ ಕೆಲವು ದೇವಸ್ಥಾನಗಳಲ್ಲಿ ಸಾಮೂಹಿಕ ‘ಗದಾಪೂಜೆ’ ನಡೆಸಲಾಯಿತು.

‘ಗದಾಪೂಜೆ’ ವಿಧಿ, ಶ್ರೀ ಹನುಮಂತನ ಆರತಿ, ಮಾರುತಿ ಸ್ತೋತ್ರ ಪಠಣ, ಶಂಖನಾದ ಮತ್ತು ಸಾಮೂಹಿಕ ಪ್ರಾರ್ಥನೆಯ ನಂತರ ‘ಶ್ರೀ ಹನುಮತೇ ನಮಃ’ ಎಂಬ ಸಾಮೂಹಿಕ ನಾಮಜಪವನ್ನು ಮಾಡಲಾಯಿತು. ಈ ಸಂದರ್ಭದಲ್ಲಿ ‘ರಾಮರಾಜ್ಯದ ಸ್ಥಾಪನೆಗಾಗಿ ಮಾರುತಿಯ ಗುಣಗಳನ್ನು ಹೇಗೆ ಅಳವಡಿಸಿಕೊಳ್ಳಬೇಕು’ ಎಂಬ ವಿಷಯದ ಕುರಿತು ಮಾರ್ಗದರ್ಶನ ನೀಡಲಾಯಿತು. ಕಾರ್ಯಕ್ರಮದ ಕೊನೆಯಲ್ಲಿ ‘ರಾಮರಾಜ್ಯದ ಸ್ಥಾಪನೆಗಾಗಿ ಸಾಮೂಹಿಕ ಪ್ರತಿಜ್ಞೆ’ ಸ್ವೀಕರಿಸಲಾಯಿತು. ಹಿಂದೂ ಜನಜಾಗೃತಿ ಸಮಿತಿಯು ಕಳೆದ 4 ವರ್ಷಗಳಿಂದ ದೇಶಾದ್ಯಂತ ಸಾಮೂಹಿಕ ‘ಗದಾಪೂಜೆ’ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಆಯೋಜಿಸುತ್ತಾ ಬಂದಿದ್ದು, ಈ ವರ್ಷವೂ ಹಿಂದುತ್ವನಿಷ್ಠರು ಮತ್ತು ಶ್ರದ್ಧಾಳುಗಳ ಉತ್ಸಾಹಭರಿತ ಸಹಭಾಗಿತ್ವ ಕಂಡುಬಂದಿತು. ಈ ಸಂದರ್ಭದಲ್ಲಿ ವಿವಿಧ ಸಂಘಟನೆಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು. ಈ ಕಾರ್ಯಕ್ರಮವನ್ನು ಹಿಂದೂ ಜನಜಾಗೃತಿ ಸಮಿತಿಯಿಂದ ದೇಶಾದ್ಯಂತ 850 ಕ್ಕೂ ಹೆಚ್ಚು ಸ್ಥಳಗಳಲ್ಲಿ ಹಮ್ಮಿಕೊಳ್ಳಲಾಗಿತ್ತು.

LEAVE A REPLY

Please enter your comment!
Please enter your name here