ನಾರಾಯಣಗುರುಗಳ ಸಂದೇಶ ಮಾನವೀಯತೆಯ ಪ್ರಾಭಲ್ಯವನ್ನು ಪಡೆಯುತ್ತದೆ : ಗಣೇಶ್ ಪೂಂಜರೆಕೋಡಿ
ಬಂಟ್ವಾಳ: ನಾರಾಯಣಗುರುಗಳ ತತ್ವಗಳು ಯುವ ಮನಸ್ಸುಗಳಲ್ಲಿ ನೆಲೆಯೂರಿದರೆ, ಅಲ್ಲಿ ಬಾಹ್ಯ ವೈಷಮ್ಯಗಳಿಗಿಂತ ಒಳಗಿನ ಮಾನವೀಯತೆ ಪ್ರಾಬಲ್ಯ ಪಡೆಯುತ್ತದೆ. ಸಮಾನತೆ, ಸೌಹಾರ್ದ, ಮತ್ತು ನೈತಿಕತೆ ಬೆಳೆಯುವ ಸಮಾಜವೇ ನಿಜವಾದ ನಾರಾಯಣಗುರುಗಳ ಕನಸಿನ ಭಾರತ.ಆದ್ದರಿಂದ ಅವರ ಸಂದೇಶವನ್ನು ಯುವ ಪೀಳಿಗೆಗೆ ದಾಟಿಸುವ ಕಾರ್ಯ ಕೇವಲ ಅಗತ್ಯವಲ್ಲ, ಅದು ಭವಿಷ್ಯದ ಶಾಂತಿ ಮತ್ತು ಸಮಾನತೆಯ ಮೂಲಾಧಾರ ಎಂದು ಯುವವಾಹಿನಿ ಕೇಂದ್ರ ಸಮಿತಿಯ ನಿರ್ದೇಶಕ ಗಣೇಶ್ ಪೂಂಜರೆಕೋಡಿ ತಿಳಿಸಿದರು.

ಅವರು ಅ. 23 ಗುರುವಾರ ನರಿಕೊಂಬು ಗ್ರಾಮ ಪಂಚಾಯತ್ ಅಧ್ಯಕ್ಷ ಸಂತೋಷ್ ಕುಮಾರ್ ಇವರ ಶಂಬೂರು ಅಡ್ಡದಪಾದೆಯ ಮನೆಯಲ್ಲಿ ಯುವವಾಹಿನಿ ಬಂಟ್ವಾಳ ಘಟಕದ ಆಶ್ರಯದಲ್ಲಿ ನಡೆದ ಗುರುತತ್ವವಾಹಿನಿ ಭಜನಾ ಸಂಕೀರ್ತನೆ ಮಾಲಿಕೆ 57 ರಲ್ಲಿ ಗುರುಸಂದೇಶ ನೀಡಿದರು.

ನಾರಾಯಣಗುರುಗಳ ಹಾದಿಯಲ್ಲಿ ನನ್ನ ಹೆಜ್ಜೆ : ಸಂತೋಷ್ ಕುಮಾರ್ ನಾರಾಯಣಗುರುಗಳು ತೋರಿದ ದಾರಿಯೇ ತನ್ನ ಬದುಕಿನ ದಾರಿ. ಗುರು ನಡೆದ ಹಾದಿಯ ಬೆಳಕಿನಲ್ಲಿ ನಾನು ನಡೆಯುತ್ತಿದ್ದೇನೆ.
ಯಾರು ನನ್ನನ್ನು ದ್ವೇಷಿಸಿದರೋ, ಅವರತ್ತ ನಾನು ಪ್ರೀತಿಯ ಕಣ್ಣಿನಿಂದ ನೋಡುತ್ತಿದ್ದೇನೆ.
ದ್ವೇಷವನ್ನು ನಾಶಮಾಡುವುದು ಕೋಪದಿಂದಲ್ಲ, ಪ್ರೀತಿಯಿಂದ ಮಾತ್ರ ಸಾಧ್ಯ, ಪ್ರೀತಿಯಲ್ಲಿ ಶಕ್ತಿ ಇದೆ, ಅದು ಹೃದಯಗಳನ್ನು ಗೆಲ್ಲುತ್ತದೆ, ಮನಸ್ಸುಗಳನ್ನು ಬದಲಿಸುತ್ತದೆ, ಸಮಾಜವನ್ನು ಬೆಳಗಿಸುತ್ತದೆ. ನಾವೆಲ್ಲರೂ ಗುರುಗಳು ತೋರಿಸಿದ ಆ ಹಾದಿಯಲ್ಲಿ ನಡೆಯೋಣ,ಪ್ರೀತಿಯ, ಸಮಾನತೆಯ, ಮತ್ತು ಮಾನವೀಯತೆಯ ಹಾದಿಯಲ್ಲಿ ನಿಜವಾದ ಶಾಂತಿ ಮತ್ತು ಬಾಂಧವ್ಯ ಬೆಳೆಯುತ್ತದೆ. ಎಂದು ಗುರುತತ್ವವಾಹಿನಿ ಅತಿಥ್ಯ ನೀಡಿದ ನರಿಕೊಂಬು ಗ್ರಾಮ ಪಂಚಾಯತ್ ಅಧ್ಯಕ್ಷ ಸಂತೋಷ್ ಕುಮಾರ್ ತಿಳಿಸಿದರು.
ಯುವವಾಹಿನಿ ಬಂಟ್ವಾಳ ಘಟಕದ ಕೋಶಾಧಿಕಾರಿ ನವೀನ್ ಪೂಜಾರಿ, ನಿರ್ದೇಶಕರಾದ ಮಹೇಶ್ ಬೊಳ್ಳಾಯಿ , ಚಿನ್ನಾ ಕಲ್ಲಡ್ಕ, ಸಂಘಟನಾ ಕಾರ್ಯದರ್ಶಿ ಯಶೋಧರ ಕಡಂಬಳಿಕೆ, ಸದಸ್ಯರಾದ ನಾಗೇಶ್ ಪೂಜಾರಿ ಏಲಾಬೆ, ಸುನೀಲ್ ಮರ್ದೋಳಿ ಪ್ರಶಾಂತ್ ಅಮೀನ್ ಏರಮಲೆ, ಯತೀಶ್ ಬೊಳ್ಳಾಯಿ ಮಾಜಿ ಅಧ್ಯಕ್ಷರಾದ ಅರುಣ್ ಕುಮಾರ್, ನಾಗೇಶ್ ಪೊನ್ನೋಡಿ, ಶಿವಾನಂದ ಎಂ, ಹರೀಶ್ ಕೋಟ್ಯಾನ್ ಕುದನೆ, ಮತ್ತಿತರರು ಉಪಸ್ಥಿತರಿದ್ದರು.
ಸಾತ್ವಿಕ್ ದೇರಾಜೆ ರಾಜೇಶ್ ಅಮ್ಟೂರು, ವಿನಯ ಆಚಾರ್ಯ ಸಂಗೀತದಲ್ಲಿ ಸಹಕರಿಸಿದರು. ಯುವವಾಹಿನಿ ಬಂಟ್ವಾಳ ಘಟಕದ ಸಮಾಜ ಸೇವಾ ನಿರ್ದೇಶಕ ಪ್ರಜಿತ್ ಅಮೀನ್ ಏರಮಲೆ ಸ್ವಾಗತಿಸಿ, ನಾರಾಯಣಗುರು ತತ್ವ ಪ್ರಚಾರ ಅನುಷ್ಠಾನ ನಿರ್ದೇಶಕ ಹರೀಶ್ ಸಾಲ್ಯಾನ್ ಅಜೆಕಲ ವಂದಿಸಿದರು.

