ಉಡುಪಿ ಜಿಲ್ಲೆಯಲ್ಲಿ 492 ಗಣೇಶ್​ ಮೂರ್ತಿ ಪ್ರತಿಷ್ಠಾಪನೆ

0
3

ಉಡುಪಿ: ಜಿಲ್ಲೆಯಾದ್ಯಂತ ಈ ವರ್ಷ 492 ಸಾರ್ವಜನಿಕ ಗಣೇಶೋತ್ಸವ ನಡೆಯಲಿದ್ದು, ಬಂದೋಬಸ್ತ್​ಗೆ 996 ಪೊಲೀಸರನ್ನು ನಿಯೋಜಿಸಲಾಗಿದೆ.
415 ಸಾಮಾನ್ಯ, 74 ಸೂಕ್ಷ್ಮ ಹಾಗೂ 3 ಅತಿ ಸೂಕ್ಷ್ಮ ಸ್ಥಳಗಳನ್ನು ಗುರುತಿಸಲಾಗಿದ್ದು, ಸೂಕ್ಷ್ಮ ಹಾಗೂ ಅತಿಸೂಕ್ಷ್ಮ ಪ್ರದೇಶಗಳಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ತಡೆಯಲು ವಿಶೇಷ ನಿಗಾ ವಹಿಸಲಾಗಿದೆ.

ಮೆರವಣಿಗೆ ಹಾಗೂ ವಿಸರ್ಜನೆ ಸಂದರ್ಭದಲ್ಲಿ ಕಾನೂನು ಸುವ್ಯವಸ್ಥೆ ಮತ್ತು ಸಂಚಾರ ನಿಯಂತ್ರಣಕ್ಕಾಗಿ ಒಟ್ಟು 996 ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ಭದ್ರತಾ ಕರ್ತವ್ಯಕ್ಕೆ ನಿಯೋಜಿಸಲಾಗಿದೆ. ಇದರಲ್ಲಿ 3 ಎಎಸ್ಪಿ ಮತ್ತು ಡಿಎಸ್ಪಿ, 7 ಸಿಪಿಐ, 37 ಪಿಎಸ್​ಐ, 83 ಎಎಸ್​ಐ, 680 ಹೆಡ್​ ಕಾನ್​ಸ್ಟೇಬಲ್​ಗಳು, ಕಾನ್​ಸ್ಟೇಬಲ್​, 20 ಡಿಎಆರ್​ ತುಕಡಿ, 3 ಕೆಎಸ್​ಆರ್​ಪಿ ತುಕಡಿ ಹಾಗೂ 163 ಗೃಹರಕ್ಷಕ ಸಿಬ್ಬಂದಿ ಒಳಗೊಂಡಿದ್ದಾರೆ. ಕಣ್ಗಾವಲಿಗಾಗಿ 12 ಪಿಎ ಸಿಸ್ಟಮ್​ ಹಾಗೂ 3 ಡ್ರೋನ್​ ಕ್ಯಾಮೆರಾಗಳನ್ನು ಬಳಸಲಾಗುತ್ತಿದೆ.

ಚೌತಿಯಂದು 211 ವಿಗ್ರಹ ವಿಸರ್ಜನೆ
ಜಿಲ್ಲೆಯಾದ್ಯಂತ ಸೆ. 14ರಿಂದ 29ರವರೆಗೆ ವಿವಿಧ ದಿನಗಳಲ್ಲಿ ಗಣೇಶ ಮೂರ್ತಿಗಳ ವಿಸರ್ಜನೆ ನಡೆಯಲಿದೆ. ಚೌತಿಯಂದು ಅತ್ಯಂತ ಹೆಚ್ಚು 211 ಮೂರ್ತಿಗಳನ್ನು ವಿಸರ್ಜಿಸಲಾಗುತ್ತದೆ. ಸೆ. 15ರಂದು 108, ಸೆ.16ರಂದು 114, ಸೆ.17ರಂದು 13, ಸೆ.18ರಂದು 29, ಸೆ. 19ರಂದು 4, ಸೆ. 20ರಂದು 5, ಸೆ.22, 23, 24 ಹಾಗೂ 26ರಂದು ತಲಾ 1, ಸೆ. 25 ಹಾಗೂ 29ರಂದು ತಲಾ 2 ಗಣೇಶಮೂರ್ತಿಗಳ ವಿಸರ್ಜನೆ ನಡೆಯಲಿದೆ.