ದಾವಣಗೆರೆಯ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯ ಕೇರಳದ ಗಡಿನಾಡಿನ ಶಾಖೆಯ 4ನೇ ವರ್ಷದ ವಾರ್ಷಿಕೋತ್ಸವ ಸಮಾರಂಭವನ್ನು ಜನವರಿ 4 ರಂದು ಭಾನುವಾರ ಬೆಳಿಗ್ಗೆ9-30 ರಿಂದ ಕಾಸರಗೋಡು ಜಿಲ್ಲೆಯ ಕುಂಜತ್ತೂರು ತೂಮಿನಾಡಿನ ಶ್ರೀಮಾತಾ ಕಲಾಲಯ ಸಭಾಂಗಣದಲ್ಲಿ ವಿವಿಧ ಸಾಂಸ್ಕೃತಿಕ ಚಟುವಟಿಕೆಗಳು, ಯಕ್ಷಗಾನ ಭಾಗವತಿಕೆ ಮುಂತಾದ ಮನರಂಜನಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಕಲಾಕುಂಚದ ಸಂಸ್ಥಾಪಕರಾದ ಸಾಲಿಗ್ರಾಮ ಗಣೇಶ್ ಶೆಣೈ ತಿಳಿಸಿದ್ದಾರೆ.
ಸಮಾರಂಭದ ಉದ್ಘಾಟನೆಯನ್ನು ಮಂಜೇಶ್ವರದ ಗೋವಿಂದ ಪೈ ಸ್ಮಾರಕ ಸರ್ಕಾರಿ ಕಾಲೇಜಿನ ಪ್ರಾಧ್ಯಾಪಕರಾದ ಶಿವಶಂಕರ್ ನೆರವೇರಿಸಲಿದ್ದಾರೆ. ಸಮಾರಂಭದ ಅಧ್ಯಕ್ಷತೆಯನ್ನು ಕಲಾಕುಂಚ ಕೇರಳದ ಗಡಿನಾಡಿನ ಶಾಖೆಯ ಅಧ್ಯಕ್ಷರಾದ ಜಯಲಕ್ಷ್ಮಿ ಕಾರಂತ್ ರವರು ವಹಿಸಿಕೊಳ್ಳಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕರ್ನಾಟಕ ಯಕ್ಷಗಾನ ಅಕಾಡೆಮಿಯ ಸದಸ್ಯರಾದ ಸತೀಶ್ ಆಡಪ ಸಂಕಬೈಲು ಆಗಮಿಸಲಿದ್ದಾರೆ.
ಎ.ಕೆ.ಮೆಮೋರಿಯಲ್ ಟ್ರಸ್ಟ್ನ ಅಧ್ಯಕ್ಷರಾದ ಜಯಶೀಲ ಕುಂಬಳೆ, ಕಲಾಕುಂಚ ಕೇರಳದ ಗಡಿನಾಡಿನ ಶಾಖೆಯ ಗೌರವ ಅಧ್ಯಕ್ಷರಾದ ವಿ.ಬಿ.ಕುಳವರ್ಮ ಗೌರವ ಉಪಸ್ಥಿತರಿರುತ್ತಾರೆ. ನಿವೃತ್ತ ಮುಖ್ಯೋಪಾಧ್ಯಾಯರಾದ ರಾಜಾರಾಮರಾವ್ ಟಿ. ಮೀಯಪದವು ಇವರು “ಕುಂಬಳೆ ಪಾರ್ತಿ ಸುಬ್ಬನ ಕೃತಿಯ ಹೊಳಹುಗಳು” ಕುರಿತು ವಿಚಾರ ಗೋಷ್ಠಿ ಉಪನ್ಯಾಸ ನಡೆಸಿಕೊಡಲಿದ್ದಾರೆ. ನಾಡಿನ ಖ್ಯಾತ ಯಕ್ಷಗಾನ ಭಾಗವತರದ ರಾಜಾರಾಮ ಹೊಳ್ಳ ಕೈರಂಗಳ ಇವರು ಯಕ್ಷಗಾನ ಪಾರ್ತಿ ಸುಬ್ಬನ ಕೃತಿಗಳ ಆಯ್ದ ಹಾಡುಗಳ ಭಾಗವತಿಕೆ ನಡೆಸಿಕೊಡಲಿದ್ದಾರೆ.
ಯಕ್ಷಗಾನ ಸೇರಿದಂತೆ ಈ ಅಪರೂಪದ ಸಾಂಸ್ಕೃತಿಕ ಚಟುವಟಿಕೆಗಳ ಸಮಾರಂಭವನ್ನು ಯಶಸ್ವಿಗೊಳಿಸಬೇಕಾಗಿ ಕಲಾಕುಂಚ ಕೇರಳದ ಗಡಿನಾಡಿನ ಶಾಖೆಯ ಸರ್ವ ಸದಸ್ಯರು ಪದಾಧಿಕಾರಿಗಳು ವಿನಂತಿಸಿದ್ದಾರೆ.

