ಹಿರಿಯಡ್ಕ ಪೊಲೀಸ್ ಉಪನಿರೀಕ್ಷಕ ಪುನಿತ್ ಕುಮಾರ್ ಮತ್ತು ತಂಡದವರು ಗಸ್ತು ಕರ್ತವ್ಯದಲ್ಲಿದ್ದಾಗ ಪೆರ್ಡೂರು ಗ್ರಾಮದ ಕುಕ್ಕೆಹಳ್ಳಿ ರಸ್ತೆಯ ದಿನೇಶ್ ಎಂಬುವವರ ದಿನಸಿ ಅಂಗಡಿ ಬಳಿ ಸಾರ್ವಜನಿಕ ಸ್ಥಳದಲ್ಲಿ ಮಟ್ಕಾ ಜೂಜಾಟ ನಡೆಯುತ್ತಿರುವ ಬಗ್ಗೆ ಖಚಿತ ಮಾಹಿತಿ ಲಭಿಸಿತ್ತು.
ತಕ್ಷಣ ಸ್ಥಳಕ್ಕೆ ದಾಳಿ ನಡೆಸಿದ ಪೊಲೀಸರು ಜೂಜಾಟ ನಡೆಸುತ್ತಿದ್ದ ದಿನೇಶ್ ಎಂಬಾತನನ್ನು ವಶಕ್ಕೆ ಪಡೆದಿದ್ದಾರೆ. ವಿಚಾರಣೆ ವೇಳೆ ತಾನು ಸಂಗ್ರಹಿಸಿದ ಹಣವನ್ನು ರಾಘವೇಂದ್ರ ಅಲಿಯಾಸ್ ರಾಘಣ್ಣ ಎಂಬುವವರು ತೆಗೆದುಕೊಂಡು ಹೋಗುತ್ತಾರೆ ಎಂದು ಆರೋಪಿ ತಿಳಿಸಿದ್ದಾನೆ.
ಬಂಧಿತರಿಂದ ₹1,010 ನಗದು, ಮಟ್ಕಾ ನಂಬರ್ ಬರೆದ ನೋಟು ಪುಸ್ತಕ ಮತ್ತು ಬಾಲ್ ಪೆನ್. ವಶಕ್ಕೆ ಪಡೆಯಲಾಗಿದೆ. ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.
ಮಲ್ಪೆ ಪೊಲೀಸ್ ಠಾಣೆಯ ಉಪನಿರೀಕ್ಷಕ ಅನಿಲ್ ಕುಮಾರ್ ಡಿ. ಅವರು ರೌಂಡ್ಸ್ ಕರ್ತವ್ಯದಲ್ಲಿದ್ದಾಗ ಲಭಿಸಿದ ಮಾಹಿತಿಯ ಮೇರೆಗೆ ಮಟ್ಕಾ ಜೂಜಾಟದ ಮೇಲೆ ದಾಳಿ ನಡೆಸಿದ್ದಾರೆ. ಮಟ್ಕಾ ಆಟಕ್ಕಾಗಿ ಹಣ ಸಂಗ್ರಹಿಸುತ್ತಿದ್ದ ಸಂತೋಷ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ವಿಚಾರಣೆ ವೇಳೆ ಆರೋಪಿಯು ತಾನು ಸಂಗ್ರಹಿಸಿದ ಹಣವನ್ನು ಉಡುಪಿಯ ಲಿಯೋ ಎಂಬುವವರಿಗೆ ನೀಡುವುದಾಗಿ ಒಪ್ಪಿಕೊಂಡಿದ್ದಾನೆ. ಲಾಭ ಗಳಿಸುವ ಉದ್ದೇಶದಿಂದ ಇಬ್ಬರೂ ಸೇರಿ ಸಂಘಟಿತವಾಗಿ ಈ ಅಕ್ರಮ ನಡೆಸುತ್ತಿದ್ದರು ಎಂದು ತಿಳಿದುಬಂದಿದೆ.
ಬಂಧಿತರಿಂದ ₹530 ನಗದು ಹಾಗೂ ಮಟ್ಕಾ ಚೀಟಿ ಮತ್ತು ಬಾಲ್ ಪೆನ್ ವಶಕ್ಕೆ ಪಡೆಯಲಾಗಿದೆ. ಈ ಕುರಿತು ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ವಿಚಾರಣೆಯನ್ನು ಮುಂದುವರಿಸಿದ್ದಾರೆ.

