ಮಂಗಳೂರಿನ ಮುಕ್ಕದಲ್ಲಿರುವ ಶ್ರೀನಿವಾಸ್ ಯೂನಿವರ್ಸಿಟಿ ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಆಂಡ್ ಟೆಕ್ನಾಲಜಿಯಲ್ಲಿ “ಅಂತಿಮ ವರ್ಷದ ಬಿಟೆಕ್ ಇಂಜಿನಿಯರಿಂಗ್ ವಿದ್ಯಾರ್ಥಿಗಳು ಸಿದ್ಧಪಡಿಸಿದ ಪ್ರೊಜೆಕ್ಟ್ ಮಾದರಿಗಳ ಪ್ರಾತ್ಯಕ್ಷಿಕೆ” ಕಾರ್ಯಕ್ರಮವು ಇಂದು ಕಾಲೇಜಿನ ಸಭಾಂಗಣದಲ್ಲಿ ಉದ್ಘಾಟನೆಗೊಂಡಿತು.
ಇಂಡಿವಿಲೇಜ್ ಐಟಿ ಸೊಲ್ಯೂಷನ್ಸ್ ಪ್ರೈ ಲಿ ಸಂಸ್ಥೆಯ ಮಾನವ ಸಂಪನ್ಮೂಲ ಸೇವೆಗಳ ವಿಭಾಗದ ನಿರ್ದೇಶಕರಾದ ಶ್ರೀನಿವಾಸ್ ಭಟ್ ರವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ, ದೀಪವನ್ನು ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ನೋವಿಗೋ ಸೊಲ್ಯೂಷನ್ಸ್ ಪ್ರೈ ಲಿ ಸಂಸ್ಥೆಯ ಗ್ರೂಪ್ ಪ್ರಾಜೆಕ್ಟ್ ಮ್ಯಾನೇಜರ್ ಭರತೇಶ್ ಬಂಗೇರ ರವರು ಗೌರವ ಅತಿಥಿಗಳಾಗಿ ಭಾಗವಹಿಸಿದರು.

ಶ್ರೀನಿವಾಸ್ ವಿಶ್ವವಿದ್ಯಾಲಯದ ಉಪಕುಲಪತಿಗಳಾದ ಡಾ. ಕೆ. ಸತ್ಯನಾರಾಯಣ ರೆಡ್ಡಿ ಯವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದರು. ಶ್ರೀನಿವಾಸ್ ಯೂನಿವರ್ಸಿಟಿ ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಆಂಡ್ ಟೆಕ್ನಾಲಜಿಯ ಮುಖ್ಯಸ್ಥರಾದ ಡಾ. ರಾಮಕೃಷ್ಣ ಎನ್. ಹೆಗಡೆ, ಮತ್ತು ಕಾರ್ಯಕ್ರಮದ ಸಂಚಾಲಕರಾದ ಪ್ರೊ. ಆನಂದ್ ಎಸ್. ಉಪ್ಪಾರ್ ರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಂಪ್ಯೂಟರ್ ಸೈನ್ಸ್ ಇಂಜಿನಿಯರಿಂಗ್, ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಆಂಡ್ ಮಷೀನ್ ಲರ್ನಿಂಗ್, ಸೈಬರ್ ಸೆಕ್ಯೂರಿಟಿ ಆಂಡ್ ಸೈಬರ್ ಫಾರೆನ್ಸಿಕ್ಸ್, ಇಲೆಕ್ಟ್ರಾನಿಕ್ಸ್ ಆಂಡ್ ಕಮ್ಯುನಿಕೇಶನ್ ಇಂಜಿನಿಯರಿಂಗ್, ಮೆಕ್ಯಾನಿಕಲ್ ಆಂಡ್ ರೊಬೋಟಿಕ್ಸ್ ಇಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿಗಳು ಸಿದ್ಧಪಡಿಸಿದ 115 ನವೀನ ರೀತಿಯ ಪ್ರೊಜೆಕ್ಟ್ ಮಾದರಿಗಳನ್ನು ವಿದ್ಯಾರ್ಥಿಗಳು ಪ್ರದರ್ಶಿಸಿದರು. ಈ ಪೈಕಿ 14 ಪ್ರಾಜೆಕ್ಟ್ಗಳಿಗೆ ಗುಣಮಟ್ಟ, ನವೀನತೆ ಹಾಗೂ ಸಮಾಜಮುಖಿ ಮಹತ್ವವನ್ನು ಆಧರಿಸಿ, ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿ (KSCST) ಯಿಂದ ಪ್ರಾಯೋಜಕತ್ವ ಲಭಿಸಿದೆ.
ಈ ವರ್ಷದ ಬಿ.ಟೆಕ್ ಅಂತಿಮ ವರ್ಷದ ಪ್ರಾಜೆಕ್ಟ್ಗಳು ಸಮಕಾಲೀನ ತಾಂತ್ರಿಕ ಕ್ಷೇತ್ರಗಳು ಮತ್ತು ವಾಸ್ತವಿಕ ಸವಾಲುಗಳಿಗೆ ಹೊಂದಿಕೊಂಡಂತೆ ರೂಪುಗೊಂಡಿದ್ದವು. ಆಟೊಮೇಷನ್, ಸೈಬರ್ ಸೆಕ್ಯೂರಿಟಿ, ಸ್ಥಿರತೆಯ ಅಭಿವೃದ್ಧಿ (ಸಸ್ಟೇನಬಿಲಿಟಿ), ಕ್ಲೌಡ್ ಕಂಪ್ಯೂಟಿಂಗ್, ಮೊಬೈಲ್ ತಂತ್ರಜ್ಞಾನ, ನ್ಯೂರಲ್ ನೆಟ್ವರ್ಕ್ಗಳು ಹಾಗೂ ಬುದ್ಧಿವಂತ ವ್ಯವಸ್ಥೆಗಳ ಮೇಲೆ ಕೇಂದ್ರೀಕೃತವಾಗಿದ್ದವು. ವಿಶೇಷವಾಗಿ, ಆರೋಗ್ಯ ಸೇವೆ ಮತ್ತು ರಿಯಲ್-ಟೈಮ್ ಆಟೊಮೇಷನ್ ಕ್ಷೇತ್ರಗಳಲ್ಲಿ ಉಪಯೋಗವಾಗುವ ತಂತ್ರಜ್ಞಾನಗಳಿಗೆ ಆದ್ಯತೆ ನೀಡಲಾಗಿತ್ತು.

ವಿದ್ಯಾರ್ಥಿಗಳು ಆರೋಗ್ಯ, ಕೈಗಾರಿಕಾ ಕ್ಷೇತ್ರ ಮತ್ತು ಸ್ಮಾರ್ಟ್ ಕೃಷಿ ವ್ಯವಸ್ಥೆಗಳಿಗೆ ಅನುಗುಣವಾದ ಸ್ವಯಂಚಾಲಿತ ವ್ಯವಸ್ಥೆಗಳನ್ನು, ಮತ್ತು ಮಣ್ಣಿನ ಆರೋಗ್ಯ ಮೇಲ್ವಿಚಾರಣೆ ಪರಿಹಾರಗಳನ್ನೂ ಅಭಿವೃದ್ಧಿಪಡಿಸಿದ್ದರು. ಸುರಕ್ಷಿತ ಪ್ರಮಾಣೀಕರಣ, ಕೃತಕ ಬುದ್ಧಿಮತ್ತೆ ಆಧಾರಿತ ಬೆದರಿಕೆ ಗುರುತುಪಡಿಸುವಿಕೆ ಹಾಗೂ ಡಿಜಿಟಲ್ ಫಾರೆನ್ಸಿಕ್ ತನಿಖೆಗಳಿಗೆ ಸಂಬಂಧಿಸಿದ ಮಹತ್ವದ ಸವಾಲುಗಳಿಗೆ ಪರಿಹಾರ ಒದಗಿಸುವ ಯೋಜನೆಗಳೂ ಗಮನಾರ್ಹವಾಗಿದ್ದವು. ಜೊತೆಗೆ ವೈರ್ಲೆಸ್ ಸಂವಹನ, ಇಂಟರ್ನೆಟ್ ಆಫ್ ಥಿಂಗ್ಸ್ (IoT), ಸ್ಮಾರ್ಟ್ ಸಿಟಿ ಸಮಸ್ಯೆಗಳಿಗೆ ಪರಿಹಾರಗಳು ಹಾಗೂ ಇಂಧನ ವ್ಯವಸ್ಥೆಗಳ ಅಭಿವೃದ್ಧಿಗೆ ಪೂರಕವಾದ ಪ್ರಾಜೆಕ್ಟ್ ಗಳನ್ನು ವಿದ್ಯಾರ್ಥಿಗಳು ಪ್ರದರ್ಶಿಸಿದರು.
ಸಭಾ ಕಾರ್ಯಕ್ರಮದ ಬಳಿಕ, ಅತಿಥಿಗಳು ಮತ್ತು ಗಣ್ಯರು ಅಂತಿಮ ವರ್ಷದ ಇಂಜಿನಿಯರಿಂಗ್ ವಿದ್ಯಾರ್ಥಿಗಳು ನವೀನ ಆಲೋಚನೆಗಳೊಂದಿಗೆ ಸಿದ್ಧಪಡಿಸಿದ ಪ್ರಾಜೆಕ್ಟ್ ಮಾದರಿಗಳನ್ನು ಪರಿಶೀಲಿಸಿದರು ಹಾಗೂ ಉಪನ್ಯಾಸಕರನ್ನು ಮತ್ತು ವಿದ್ಯಾರ್ಥಿಗಳನ್ನು ಅಭಿನಂದಿಸಿದರು.
ಪ್ರೊ. ಆನಂದ್ ಎಸ್. ಉಪ್ಪಾರ್ ಸ್ವಾಗತ ಭಾಷಣ ಮಾಡಿದರು, ಹಾಗೂ ಪ್ರಾಜೆಕ್ಟ್ ಎಕ್ಸಿಬಿಷನ್–26 ಬಗ್ಗೆ ಸಮಗ್ರ ಮಾಹಿತಿ ನೀಡಿದರು. ಡಾ. ಪ್ರವೀಣ್ ಬ್ಲೆಸ್ಸಿಂಗ್ಟನ್ ಮುಖ್ಯ ಅತಿಥಿಗಳನ್ನು ಹಾಗೂ ಗೌರವ ಅತಿಥಿಗಳನ್ನು ಸಭೆಗೆ ಪರಿಚಯಿಸಿದರು. ಪ್ರೊ. ವರ್ಷಾ ಜಿ. ಬಂಗೇರ ಧನ್ಯವಾದಗಳನ್ನು ಅರ್ಪಿಸಿದರು. ವಿದ್ಯಾರ್ಥಿ ಶ್ರೀ ಸುಮಂತ್ ಭಟ್ ಪ್ರಾರ್ಥನೆ ಸಲ್ಲಿಸಿದರು. ಪ್ರೊ. ರೋಹನ್ ಫೆರ್ನಾಂಡಿಸ್ ಹಾಗೂ ಪ್ರೊ. ಅಮೃತಾ ಕಿಂಡಾಲ್ಕರ್ ರವರು ಕಾರ್ಯಕ್ರಮವನ್ನು ನಿರೂಪಿಸಿದರು.
ಈ ಸಂದರ್ಭದಲ್ಲಿ, ಶ್ರೀನಿವಾಸ್ ವಿಶ್ವವಿದ್ಯಾಲಯದ ಸಂಶೋಧನಾ ವಿಭಾಗದ ನಿರ್ದೇಶಕರಾದ ಡಾ. ಪ್ರವೀಣ್ ಬಿ. ಎಂ., ಪ್ರಾಜೆಕ್ಟ್ ಎಕ್ಸಿಬಿಷನ್–26 ಸಹ-ಸಂಯೋಜಕರಾದ ಡಾ. ನವೀನ್ ಕುಮಾರ್ ಜೆ. ಆರ್., ಇತರ ಇಂಜಿನಿಯರಿಂಗ್ ಕಾಲೇಜುಗಳಿಂದ ಆಗಮಿಸಿದ ತೀರ್ಪುಗಾರರು, ಕಾಲೇಜಿನ ವಿವಿಧ ವಿಭಾಗಗಳ ಮುಖ್ಯಸ್ಥರು, ಉಪನ್ಯಾಸಕರು, ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

