ದಾವಣಗೆರೆ : ಉಡುಪಿ ಜಿಲ್ಲೆಯ ಮಣಿಪಾಲದ ಖ್ಯಾತ ಪ್ರತಿಷ್ಠಿತ ಯಕ್ಷರಂಗ ಕಲಾ ಸಂಸ್ಥೆಯಾದ ಶ್ರೀ ಮಿತ್ರ ಯಕ್ಷಗಾನ ಮಂಡಳಿಯವತಿಯಿಂದ ಸಂಸ್ಥೆಯ 44ನೇ ವಾರ್ಷಿಕೋತ್ಸವದ ಪ್ರಯುಕ್ತ ಉಡುಪಿಯ ಶ್ರೀ ಕೃಷ್ಣಮಠದ ಸಭಾಂಗಣದಲ್ಲಿ ಮಠದ ಪರ್ಯಾಯ ಶಿರೂರು ಶ್ರೀಪಾದಗಳ ಸಾನಿಧ್ಯದಲ್ಲಿ ದಾವಣಗೆರೆಯ ಯಕ್ಷರಂಗ ಯಕ್ಷಗಾನ ಸಂಸ್ಥೆಯ ಸಂಸ್ಥಾಪಕರಾದ ಸಾಲಿಗ್ರಾಮ ಗಣೇಶ್ ಶೆಣೈ ಯವರಿಗೆ “ಯಕ್ಷಮಿತ್ರ ಶ್ರೀ” ರಾಜ್ಯ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಸಂಸ್ಥೆಯ ಅಧ್ಯಕ್ಷರಾದ ಹೆಚ್.ಪ್ರಕಾಶ್ ಶಾನುಭಾಗ್ ತಿಳಿಸಿದ್ದಾರೆ.
ವಾಣಿಜ್ಯ ನಗರಿ ದಾವಣಗೆರೆಯಲ್ಲಿ ಕಳೆದ 4 ದಶಕಗಳಿಂದ ಕರಾವಳಿ ಜಿಲ್ಲೆಗಳ ಜಾನಪದ ದೈವೀಕಲೆ ಆರಾಧನೆ ಕಲೆಯನ್ನು ಪರಿಚಯಿಸಿದ ಜೊತೆಗೆ ಗಂಡುಕಲೆ ಯಕ್ಷಗಾನವನ್ನು ಮಹಿಳೆಯರಿಗೆ ತರಬೇತಿ ನೀಡಿ ಮಹಿಳೆಯಿಂದ ಯಕ್ಷಗಾನ ಪ್ರದರ್ಶನ ತಾಳಮದ್ದಳೆಗಳ ಸಾಧನೆಗಳನ್ನು ಗುರುತಿಸಿ ದತ್ತಿ ನಿಧಿಯೊಂದಿಗೆ ಗೌರವಿಸಲಾಗುವುದು ಎಂದು ಮಣಿಪಾಲದ ಸರಳೇಬೆಟ್ಟು ಶ್ರೀ ಮಿತ್ರ ಯಕ್ಷಗಾನ ಮಂಡಳಿಯವರು ಪ್ರಕಟಿಸಿದ್ದಾರೆ.
ದಾವಣಗೆರೆಯ ಯಕ್ಷರಂಗ ಯಕ್ಷಗಾನ ಸಂಸ್ಥೆಯ ಅಧ್ಯಕ್ಷರಾದ ಮಲ್ಯಾಡಿ ಪ್ರಭಾಕರ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಬೇಳೂರು ಸಂತೋಷ ಕುಮಾರ್ ಶೆಟ್ಟಿ, ಖಜಾಂಚಿ ನೀಲಾವರ್ ಭಾಸ್ಕರ್ ನಾಯಕ್ ಸಮಿತಿ ಸದಸ್ಯರು, ಕರಾವಳಿ ಮಿತ್ರ ಮಂಡಳಿಯ ಸರ್ವ ಸದಸ್ಯರು, ಪದಾಧಿಕಾರಿಗಳು ಅಭಿಮಾನದಿಂದ ಅಭಿನಂದಿಸಿ ಶುಭ ಹಾರೈಸಿದ್ದಾರೆ.

