ಮಹಾತ್ಮಾ ಗಾಂಧಿ ನಗರ ವಿಕಾಸ 2ನೇ ಯೋಜನೆಯಡಿ ಮಂಜೂರಾದ 75.00 ಲಕ್ಷ ರೂಪಾಯಿ ವೆಚ್ಚದ ಗಾಣದಬೆಟ್ಟು ಮುಖ್ಯರಸ್ತೆಯಿಂದ ಸಂಪರ್ಕ ಕಾಲುವೆ ರಸ್ತೆಯ ಅಭಿವೃದ್ಧಿ ಕಾಮಗಾರಿಗೆ ಮಂಗಳೂರು ನಗರ 52ನೇ ವಾರ್ಡ್ ಕಣ್ಣೂರಿನಲ್ಲಿ ಪ್ರಾರಂಭೋತ್ಸವ ನೆರವೇರಿತು.
ಕಾಮಗಾರಿಯ ಪ್ರಾರಂಭಕ್ಕೂ ಮುನ್ನ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ವಿಧಾನ ಪರಿಷತ್ ಶಾಸಕ ಐವನ್ ಡಿಸೋಜಾ ಅವರು, ಕಾಮಗಾರಿಗೆ ಚಾಲನೆ ನೀಡಿದರು. ಅನೇಕ ವರ್ಷಗಳಿಂದ ಬಾಕಿಯಿದ್ದ ಈ ರಸ್ತೆ ಅಭಿವೃದ್ಧಿ ಕಾರ್ಯಕ್ಕೆ ಸ್ಥಳೀಯ ಮುಖಂಡ ಅಬೀಬುಲ್ಲಾ ಕಣ್ಣೂರು ಅವರ ವಿನಂತಿಯ ಮೇರೆಗೆ ಯೋಜನೆಯಡಿ ಅನುದಾನ ಮೀಸಲಿಟ್ಟು ಕಾಮಗಾರಿ ಆರಂಭಿಸಲಾಗಿದೆ ಎಂದು ತಿಳಿಸಿದರು.
ಈ ಹಿಂದೆ ನಗರಾಭಿವೃದ್ಧಿ ಸಚಿವರ ಗುದ್ದಲಿಪೂಜೆಯೊಂದಿಗೆ ಕಾಮಗಾರಿಗೆ ಅಧಿಕೃತ ಚಾಲನೆ ದೊರೆತಿದ್ದು, ಇದೀಗ ಕಾಮಗಾರಿ ಪ್ರಾರಂಭಗೊಂಡಿದೆ. ಕಾಮಗಾರಿಯನ್ನು ಶೀಘ್ರ ಹಾಗೂ ಗುಣಮಟ್ಟದ ರೀತಿಯಲ್ಲಿ ಪೂರ್ಣಗೊಳಿಸಬೇಕೆಂದು ಗುತ್ತಿಗೆದಾರರಿಗೆ ಐವನ್ ಡಿಸೋಜಾ ಸೂಚನೆ ನೀಡಿದರು.
ಸ್ಥಳೀಯ ನಿವಾಸಿಗಳು ವಿವಿಧ ಅಭಿವೃದ್ಧಿ ಬೇಡಿಕೆಗಳನ್ನು ಮುಂದಿಟ್ಟಿದ್ದು, ಅವುಗಳನ್ನು ಹಂತ ಹಂತವಾಗಿ ಪರಿಹರಿಸಲಾಗುವುದು ಎಂದು ಅವರು ಭರವಸೆ ನೀಡಿದರು. ಕಣ್ಣೂರು ಪ್ರದೇಶದಲ್ಲಿ ಈಗಾಗಲೇ ಹೂಳೆತ್ತುವ ಕಾಮಗಾರಿ ಕೈಗೊಳ್ಳಲಾಗಿದ್ದು, ನೆರೆಹಾವಳಿ ಮುಂಜಾಗ್ರತಾ ಕ್ರಮಗಳಿಗೂ ಆದ್ಯತೆ ನೀಡಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಗುತ್ತಿಗೆದಾರ ಷರೀಫ್, ಮಹಾನಗರ ಪಾಲಿಕೆಯ ಜೂನಿಯರ್ ಇಂಜಿನಿಯರ್ ಪದ್ಮ, ಕಣ್ಣೂರು ವಾರ್ಡ್ ಕಾಂಗ್ರೆಸ್ ಅಧ್ಯಕ್ಷ ರಫೀಕ್ ಕಣ್ಣೂರು, ಉಮರಬ್ಬ ಕಣ್ಣೂರು, ಶರೀಫ್ ಕಣ್ಣೂರು, ಅಯ್ಮೋನು, ಕಾದರ್, ಅಸ್ರಫ್ ಬೀಡು, ಲುಕ್ಮಾನ್, ಹಮೀದ್, ಹಬೀಬುಲ್ಲಾ ಕಣ್ಣೂರು ಹಾಗೂ ಸ್ಥಳೀಯ ನಾಗರಿಕರು ಉಪಸ್ಥಿತರಿದ್ದರು.

