ಮೂಡುಬಿದಿರೆ: ಮೊಬೈಲ್ ಗೀಳಿನ ಈ ಕಾಲದಲ್ಲಿ ರಜಾ ದಿನಗಳನ್ನು ಸದುಪಯೋಗಪಡಿಸಿಕೊಳ್ಳುತ್ತಿರುವ ಪಾಲಡ್ಕದ ಕನ್ನಡ ಶಾಲಾ ಮಕ್ಕಳು ತಮ್ಮ ಮುಂದಿನ ವಿದ್ಯಾಭ್ಯಾಸದ ವೆಚ್ಚಕ್ಕಾಗಿ ರಸ್ತೆಬದಿಯಲ್ಲಿ ಹಣ್ಣು ಮಾರಾಟ ಮಾಡುವ ಮೂಲಕ ಸಮಾಜಕ್ಕೆ ಮಾದರಿಯಾಗಿದ್ದಾರೆ.
ಕಳೆದ ಒಂದು ವಾರದಿಂದ ಈ ಪುಟಾಣಿಗಳು ಬಿಡುವಿನ ವೇಳೆಯಲ್ಲಿ ಪಪ್ಪಾಯಿ ಹಾಗೂ ಮಾವಿನ ಹಣ್ಣುಗಳನ್ನು ಮಾರಾಟ ಮಾಡುತ್ತಿದ್ದಾರೆ. ಮಾವಿನ ಹಣ್ಣು ಸೀಸನ್ ಇದ್ದಾಗ ದಿನಕ್ಕೆ 200 ರೂಪಾಯಿವರೆಗೆ ವ್ಯಾಪಾರ ಮಾಡುತ್ತಿದ್ದ ಮಕ್ಕಳು, ಪ್ರಸ್ತುತ ಪಪ್ಪಾಯಿ ಹಣ್ಣುಗಳ ವ್ಯಾಪಾರದಲ್ಲಿ ನಿರತರಾಗಿದ್ದಾರೆ. ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಾದ ಗುಂಡಮ್ಮ ಪ್ರೀತಂ, ಗೌತಂ ವ್ಯಾಪಾರದಲ್ಲಿ ನಿರತರಾಗಿರುವ ಮಕ್ಕಳು. ತಾವು ಗಳಿಸಿದ ಹಣದಿಂದ ಶಾಲೆಗೆ ಬೇಕಾದ ಪುಸ್ತಕ, ಪೆನ್, ಪೆನ್ಸಿಲ್ ಸೇರಿದಂತೆ ಶೈಕ್ಷಣಿಕ ಪರಿಕರಗಳನ್ನು ಖರೀದಿಸುವುದು ಈ ಮಕ್ಕಳ ಉದ್ದೇಶವಾಗಿದೆ.
ತುಳುನಾಡು ವಾರ್ತೆ ವರದಿಗಾರ ಜಗದೀಶ ಪೂಜಾರಿ ಕಡಂದಲೆ ಅವರು ಈ ಮಕ್ಕಳ ಕಾರ್ಯವನ್ನು ಚಿತ್ರೀಕರಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಮಕ್ಕಳ ಈ ಸ್ವಾವಲಂಬಿ ಬದುಕಿನ ಹಾದಿಯನ್ನು ಮೆಚ್ಚಿ ಪಾಲಡ್ಕದ ಭಾಸ್ಕರ್ ಪಿಸಿ ಮೊದಲ ದಾನಿಯಾಗಿ ಆರ್ಥಿಕ ಸಹಾಯ ನೀಡಲು ಮುಂದೆ ಬಂದಿದ್ದಾರೆ. ಇವರೊಂದಿಗೆ ಇನ್ನೂ ಕೆಲವು ದಾನಿಗಳು ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವಾಗಲು ಆಸಕ್ತಿ ತೋರಿದ್ದಾರೆ. ಈ ಹಾದಿಯಲ್ಲಿ ಸಂಚರಿಸುತ್ತಿದ್ದ ಮಾಜಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಸುಕೇಶ್ ಶೆಟ್ಟಿ ಮಕ್ಕಳಿಂದ ಹಣ್ಣುಗಳನ್ನು ಖರೀದಿಸಿ ಪ್ರೋತ್ಸಾಹಿಸಿದರು. ಕನ್ನಡ ಮಾಧ್ಯಮದಲ್ಲಿ ಓದುತ್ತಿರುವ ಈ ಮಕ್ಕಳು ತಮ್ಮ ಶಿಕ್ಷಣಕ್ಕಾಗಿ ಮಾಡುತ್ತಿರುವ ಈ ಪ್ರಯತ್ನವು ಬದುಕಿನ ಬುನಾದಿಯನ್ನು ಗಟ್ಟಿಗೊಳಿಸುತ್ತದೆ ಎಂದು ಸಾರ್ವಜನಿಕರು ಶ್ಲಾಘಿಸಿದರು.

