ಸುಜ್ಞಾನ ಎಜುಕೇಶನಲ್‌ ಟ್ರಸ್ಟ್‌ನ ‘ಮಂಥನ’ ಬೇಸಿಗೆ ಶಿಬಿರ: ಸೃಜನಶೀಲತೆಯ ಅನಾವರಣಕ್ಕೆ ವೇದಿಕೆ

0
19

ಕುಂದಾಪುರ : “ಶಿಕ್ಷಣ ಎನ್ನುವುದು ಕೇವಲ ಅಂಕಗಳಿಕೆಯಲ್ಲ; ಸಮಾಜದಲ್ಲಿ ಹೇಗೆ ಇರಬೇಕು ಮತ್ತು ವರ್ತಿಸಬೇಕು ಎಂಬುದನ್ನು ಕಲಿಸಿಕೊಡುವುದೇ ನಿಜವಾದ ಶಿಕ್ಷಣ. ಸುಜ್ಞಾನ ಎಜುಕೇಶನಲ್‌ ಟ್ರಸ್ಟ್ ಆಯೋಜಿಸಿರುವ ಈ ‘ಮಂಥನ’ ಬೇಸಿಗೆ ಶಿಬಿರವು ಮಕ್ಕಳ ಕ್ರೀಯಾಶೀಲ ಚಿಂತನೆಗೆ ಪೂರಕವಾಗಿದೆ,” ಎಂದು ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ಮಾಜಿ ಮ್ಯಾನೇಜಿಂಗ್ ಟ್ರಸ್ಟಿ ಮಂಜಯ್ಯ ಶೆಟ್ಟಿ ಸಬ್ಲಾಡಿ ಅಭಿಪ್ರಾಯಪಟ್ಟರು.

ಸುಜ್ಞಾನ ಎಜುಕೇಶನಲ್‌ ಟ್ರಸ್ಟ್ ವತಿಯಿಂದ ಆಯೋಜಿಸಲಾಗುತ್ತಿರುವ 5ನೇ ದಿನದ ‘ಮಂಥನ’ ಬೇಸಿಗೆ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು. “ಇಂದಿನ ಮಕ್ಕಳು ಸ್ಮಾರ್ಟ್‌ಫೋನ್‌ಗಳ ಮೊರೆ ಹೋಗದೆ ಓದಿನ ರುಚಿ ಹತ್ತಿಸಿಕೊಳ್ಳಬೇಕು. ತಮಗೆ ದೊರೆತ ಇಂತಹ ಸುಸಂದರ್ಭಗಳನ್ನು ಸದುಪಯೋಗಪಡಿಸಿಕೊಂಡು ವ್ಯಕ್ತಿತ್ವ ರೂಪಿಸಿಕೊಳ್ಳಬೇಕು,” ಎಂದು ಅವರು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ sportsmail.net ನ ಸಂಪಾದಕ ಸೋಮಶೇಖರ ಪಡುಕೆರೆ ಮಾತನಾಡಿ, “ಯಶಸ್ಸು ಪಡೆಯಲು ನಿರಂತರ ಪರಿಶ್ರಮ ಅತ್ಯಗತ್ಯ. ವಿದ್ಯಾರ್ಥಿಗಳು ಓದಿನ ಜೊತೆಗೆ ಕ್ರೀಡೆಯಲ್ಲೂ ಆಸಕ್ತಿ ಬೆಳೆಸಿಕೊಳ್ಳಬೇಕು. ಕ್ರೀಡೆಯು ನಿಮ್ಮನ್ನು ಸದಾ ಸಕ್ರಿಯರಾಗಿರುವಂತೆ ನೋಡಿಕೊಳ್ಳುತ್ತದೆ. ಈ ಶಿಬಿರವು ಮಕ್ಕಳ ಪ್ರತಿಭೆ ಅನಾವರಣಗೊಳಿಸಲು ಉತ್ತಮ ವೇದಿಕೆಯಾಗಿದೆ,” ಎಂದು ಕಿವಿಮಾತು ಹೇಳಿದರು.

ಬಿದ್ಕಲ್‌ಕಟ್ಟೆ ಕೆ.ಪಿ.ಎಸ್. ಶಾಲೆಯ ಉಪ ಪ್ರಾಂಶುಪಾಲ ಕರುಣಾಕರ ಶೆಟ್ಟಿ ಮಾತನಾಡಿ, “ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಸುಜ್ಞಾನ ಎಜುಕೇಶನಲ್‌ ಟ್ರಸ್ಟ್ ಹಮ್ಮಿಕೊಂಡಿರುವ ಈ ಕಾರ್ಯಕ್ರಮ ಶ್ಲಾಘನೀಯ. ಮನೆಯಲ್ಲಿ ಕುಳಿತು ಮೊಬೈಲ್ ನೋಡಿ ಸಮಯ ವ್ಯರ್ಥ ಮಾಡುವ ಬದಲು, ಇಂತಹ ಶಿಬಿರಗಳಲ್ಲಿ ಭಾಗವಹಿಸಿ ಜ್ಞಾನ ವೃದ್ಧಿಸಿಕೊಳ್ಳಿ,” ಎಂದರು.

ಕಲೆ ಮತ್ತು ರಂಗಭೂಮಿಯ ಕಲಿಕೆ :

ಶಿಬಿರದಲ್ಲಿ ಚಿತ್ರಕಲಾವಿದ ರಾಜಶೇಖರ ತಾಳಿಕೋಟೆ ಅವರು ಮಕ್ಕಳಿಗೆ ಚಿತ್ರಕಲೆಯ ವಿವಿಧ ಹಂತಗಳನ್ನು ಕಲಿಸಿಕೊಟ್ಟರೆ, ಖ್ಯಾತ ರಂಗಭೂಮಿ ಕಲಾವಿದ ಪ್ರಖ್ಯಾತ ಜೇಷ್ಠ ಅವರು ರಂಗಕಲೆಗಳ ಬಗ್ಗೆ ಮಾಹಿತಿ ನೀಡಿದರು. ಮಕ್ಕಳ ಕಲಿಕೆಯನ್ನು ರಂಗಭೂಮಿಯ ಮೂಲಕ ಮತ್ತಷ್ಟು ಮನರಂಜನೀಯವಾಗಿಸಿದರು.

ಆಕರ್ಷಕ ಅಗ್ನಿಶಾಮಕ ಪ್ರಾತ್ಯಕ್ಷಿಕೆ :

ಶಿಬಿರದ ಪ್ರಮುಖ ಆಕರ್ಷಣೆಯಾಗಿ ಕರ್ನಾಟಕ ರಾಜ್ಯ ಅಗ್ನಿಶಾಮಕ ದಳದವರಿಂದ ಪ್ರಾತ್ಯಕ್ಷಿಕೆ ನಡೆಯಿತು. ಬೆಂಕಿ ಅವಘಡಗಳ ಸಮಯದಲ್ಲಿ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ಮಕ್ಕಳು ಕುತೂಹಲದಿಂದ ಮಾಹಿತಿ ಪಡೆದರು.

ವೇದಿಕೆಯಲ್ಲಿ ಹೆಬ್ರಿ ಅಮೃತ ಭಾರತಿ ಸಿ.ಬಿ.ಎಸ್.ಸಿ ಶಾಲೆಯ ಪ್ರಾಂಶುಪಾಲರಾದ ಅನಿತಾ ಕುಮಾರಿ, ಸುಜ್ಞಾನ ಎಜುಕೇಶನಲ್‌ ಟ್ರಸ್ಟ್‌ನ ಅಧ್ಯಕ್ಷ ಡಾ. ರಮೇಶ ಶೆಟ್ಟಿ, ಖಜಾಂಚಿ ಭರತ್ ಶೆಟ್ಟಿ ಹಾಗೂ ಮುಖ್ಯೋಪಾಧ್ಯಾಯ ಪ್ರದೀಪ ಕೆ. ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here