ಬಂಟ್ವಾಳ:ಕಳೆದ ೩ ವರ್ಷಗಳ ಹಿಂದೆಯಷ್ಟೇ ರಾಜ್ಯ ಹೆದ್ದಾರಿಯಾಗಿ ಮೇಲ್ದರ್ಜೆಗೇರಿದ ಬಂಟ್ವಾಳ-ಮೂಡುಬಿದ್ರೆ ರಸ್ತೆ ಬದಿ ಮಳೆಗಾಲಕ್ಕೆ ಮುಂಚಿತವಾಗಿ ಚರಂಡಿ ಹೂಳೆತ್ತಬೇಕು ಮತ್ತು ರಸ್ತೆಗೆ ಬಾಗಿಕೊಂಡಿರುವ ಮರ ಗಿಡಗಳ ಕೊಂಬೆಗಳನ್ನು ತೆರವುಗೊಳಿಸಬೇಕು ಎಂದು ಆಗ್ರಹಿಸಿ ಲೊರೆಟ್ಟೋ ಹಿಲ್ಸ್ ರೋಟರಿ ಕ್ಲಬ್ ನಿಯೋಗ ಬಂಟ್ವಾಳ ಲೋಕೋಪಯೋಗಿ ಇಲಾಖೆ ಕಚೇರಿಗೆ ತೆರಳಿ ಗುರುವಾರ ಮನವಿ ಸಲ್ಲಿಸುವ ಮೂಲಕ ಗಮನ ಸೆಳೆದಿದೆ.
ಈಗಾಗಲೇ ರೂ ೫.೫೦ ಕೋಟಿ ವೆಚ್ಚದಲ್ಲಿ ಅಣ್ಣಳಿಕೆ-ರಾಯಿ ಮತ್ತು ಕುದ್ಕೋಳಿ-ಮಾಡಮೆ ನಡುವಿನ ೧೬ ಕಿ.ಮೀ. ರಸ್ತೆ ವಿಸ್ತರಣೆ ಮತ್ತು ಡಾಂಬರೀಕರಣಗೊAಡಿದ್ದು, ಕೆಲವೆಡೆ ಚರಂಡಿ ಸಂಪೂರ್ಣ ಮುಚ್ಚಲಾಗಿದೆ. ಪ್ರತೀ ವರ್ಷ ಮಳೆಗಾಲದಲ್ಲಿ ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದೆ ಮಳೆ ಮತ್ತು ಕೆಸರು ನೀರು ರಸ್ತೆಯಲ್ಲೇ ಹರಿದು ರಸ್ತೆ ಹದಗೆಡುವ ಮೂಲಕ ಜನರು ಕಟ್ಟಿದ ತೆರಿಗೆ ಹಣ ಪೋಲಾಗುತ್ತಿದೆ ಎಂದು ಸದಸ್ಯರು ಆರೋಪಿಸಿದರು.
ಇಲಾಖೆ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಅವಿನಾಶ್ ಬಿ. ಮನವಿ ಸ್ವೀಕರಿಸಿ ಮಾತನಾಡಿ, ‘ಈಗಾಗಲೇ ಕೆಲವೊಂದು ರಸ್ತೆ ಬದಿ ಚರಂಡಿ ಹೂಳೆತ್ತುವ ಕಾಮಗಾರಿ ಆರಂಭಗೊAಡಿದೆ. ಬಂಟ್ವಾಳ -ಮೂಡುಬಿದ್ರೆ ರಸ್ತೆ ನಡುವಿನ ಅಣ್ಣಳಿಕೆ ಎಂಬಲ್ಲಿ ರಸ್ತೆ ಬದಿ ಚರಂಡಿ ಪುನರ್ ರಚನೆ ಮಾಡಲಾಗುವುದು. ಈ ರಸ್ತೆಯುದ್ದಕ್ಕೂ ಹೂಳೆತ್ತುವುದರ ಜೊತೆಗೆ ರಸ್ತೆ ಬದಿ ಮರ ಗಿಡಗಳ ಬಳ್ಳಿ ಮತ್ತು ಕೊಂಬೆಗಳನ್ನು ತೆರವುಗೊಳಿಸುವುದಾಗಿ ಭರವಸೆ ನೀಡಿದರು’.
ಕ್ಲಬ್ಬಿನ ಅಧ್ಯಕ್ಷ ವಿಜಯ ಫೆರ್ನಾಂಡಿಸ್, ಕಾರ್ಯದರ್ಶಿ ಮೋಹನ್ ಕೆ.ಶ್ರೀಯಾನ್ ರಾಯಿ, ಮಾಜಿ ಅಧ್ಯಕ್ಷರಾದ ಸುರೇಶ ಶೆಟ್ಟಿ ಸಿದ್ಧಕಟ್ಟೆ, ಆಂಟೋನಿ ಸಿಕ್ವೇರಾ, ರಾಮಚಂದ್ರ ಶೆಟ್ಟಿಗಾರ್ ಅಣ್ಣಳಿಕೆ, ಸದಸ್ಯರಾದ ಐವನ್ ಮಿನೇಜಸ್, ಪ್ರೀತಂ ರಾಡ್ರಿಗಸ್, ರುಡಾಲ್ಫ್ ದೇವಾನಂದ ಮತ್ತಿತರರು ನಿಯೋಗದಲ್ಲಿ ಪಾಲ್ಗೊಂಡಿದ್ದರು. ಸಹಾಯಕ ಎಂಜಿನಿಯರ್ ಅರುಣ್ ಪ್ರಕಾಶ್ ಉಪಸ್ಥಿತರಿದ್ದರು.

