ಉಡುಪಿ : ರಾಜ್ಯದಲ್ಲಿ ಕಳೆದ 23 ವರ್ಷಗಳಿಂದ ನಿರಂತರವಾಗಿ ಸೇವೆ ಸಲ್ಲಿಸುತ್ತಿರುವ ಸರ್ಕಾರಿ ಪರವಾನಗಿ ಭೂಮಾಪಕರನ್ನು ಸರ್ಕಾರಿ ಹುದ್ದೆಗಳಲ್ಲಿ ವಿಲೀನಗೊಳಿಸಿ ಕಾಯಂಗೊಳಿಸಬೇಕು. ಸಮಾನ ಕೆಲಸಕ್ಕೆ ಸಮಾನ ವೇತನ ನಿಗದಿಪಡಿಸಬೇಕು ಎಂದು ಅಖಿಲ ಕರ್ನಾಟಕ ಸರ್ಕಾರಿ ಪರವಾನಗಿ ಭೂಮಾಪಕರ ಸಂಘದ ಜಿಲ್ಲಾಧ್ಯಕ್ಷ ಹಸನ್ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2000ನೇ ಇಸವಿಯಲ್ಲಿ ಕೆ.ಎಲ್.ಆರ್ ಆಕ್ಟ್ 46ರ ತಿದ್ದುಪಡಿಯಂತೆ ಪರವಾನಗಿ ಭೂಮಾಪಕರನ್ನು ಇಲಾಖೆಗೆ ಪರಿಚಯಿಸಲಾಯಿತು. ತದನಂತರ 2002 ರಲ್ಲಿ ಸುಮಾರು 800 ರಿಂದ 1000 ಪರವಾನಗಿ ಭೂಮಾಪಕರಿಗೆ ನಿಯಮಾನುಸಾರ ಇಲಾಖೆಯಲ್ಲೇ ತರಬೇತಿ ನೀಡಿ, ಜಿಲ್ಲಾವಾರು ಕೆಲಸ ನಿರ್ವಹಿಸಲು ಅನುವು ಮಾಡಿಕೊಡಲಾಗಿತ್ತು. ಅಂದಿನಿಂದ ಇಂದಿನವರೆಗೆ ಇಲಾಖೆಯಲ್ಲಿ ಸುದೀರ್ಘ ಸೇವೆ ಸಲ್ಲಿಸುತ್ತಾ ಬಂದಿದ್ದಾರೆ. ಸುಮಾರು 7500 ಪರವಾನಗಿ ಭೂಮಾಪಕರ ಪೈಕಿ, ಸದ್ಯ 5000ಕ್ಕೂ ಹೆಚ್ಚು ಭೂಮಾಪಕರು ಸಕ್ರಿಯವಾಗಿ ಇಲಾಖಾ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಮಾಹಿತಿ ನೀಡಿದರು.
ಪ್ರಸ್ತುತ ಸರ್ಕಾರಿ ಭೂಮಾಪಕರು 60 ಸಾವಿರ ರೂ. ಖಚಿತ ವೇತನ ಪಡೆಯುತ್ತಿದ್ದಾರೆ. ಪರವಾನಗಿ ಭೂ ಮಾಪಕರಿಗೆ ಪ್ರತಿ ಕಡತಕ್ಕೆ 1200 ರೂ. ನಿಗದಿ ಮಾಡಲಾಗಿದೆ. ಕಡತಗಳು ಅನುಮೋದನೆಗೊಳ್ಳದಿದ್ದರೆ ಈ ಹಣವೂ ಬರುವುದಿಲ್ಲ. ಆರೋಗ್ಯ ವಿಮೆ, ಪಿಎ್, ಸರ್ಕಾರಿ ಸೌಲಭ್ಯಗಳು ಯಾವುದೂ ದೊರೆಯುತ್ತಿಲ್ಲ. ಹೀಗಾಗಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ . 27ರಿಂದ ಪ್ರತಿಭಟನೆ ನಡೆಸುತ್ತಿದ್ದೇವೆ. ಜಿಲ್ಲೆಯಲ್ಲಿ 25 ಸರ್ಕಾರಿ ಭೂಮಾಪಕರು ಹಾಗೂ 118 ಪರವಾನಗಿ ಭೂಮಾಪಕರಿದ್ದಾರೆ. 16,600 ಕಡತಗಳು ಬಾಕಿ ಉಳಿದಿವೆ ಎಂದು ತಿಳಿಸಿದರು.
ಸಂಘದ ಉಪಾಧ್ಯಕ್ಷ ಶಶಿಕುಮಾರ್, ಮಾಧ್ಯಮ ಸಲಹೆಗಾರ ಮೋಹನ್, ಪ್ರ.ಕಾ. ಅಶಿತ್ ಕುಮಾರ್ ಶೆಟ್ಟಿ, ಸಂಟನಾ ಕಾರ್ಯದರ್ಶಿ ನಾಗೇಶ್ ಉಪಸ್ಥಿತರಿದ್ದರು.

