ಉಡುಪಿ : ಆಚಾರ್ಯ ಮಧ್ವರಿಗೆ ಕೃಷ್ಣ ಪ್ರತಿಮೆ ದೊರೆತ ಪರಮ ಪವಿತ್ರ ಸ್ಥಳ ಮಲ್ಪೆ ಕಡಲತೀರ ಶತಮಾನಗಳಿಂದ ಧಾರ್ಮಿಕವಾಗಿ ಮಹತ್ವ ಪಡೆದಿದೆ. ಇತ್ತೀಚೆಗೆ ಪ್ರವಾಸಿತಾಣವಾಗಿ ಮಾರ್ಪಾಡಾಗಿದ್ದು, ಮತ್ತೆ ಆಧಾತ್ಮಿಕ ಸ್ಥಳವಾಗಿ ಬದಲಾಗಬೇಕು ಎಂದು ಕೃಷ್ಣಾಪುರ ಮಠದ ಶ್ರೀವಿದ್ಯಾಸಾಗರತೀರ್ಥ ಶ್ರೀಪಾದರು ಹೇಳಿದರು.
ಮಲ್ಪೆ ಕಡಲ ತೀರದ ಆನಂದ ಶರಧಿಯಲ್ಲಿ ಶ್ರೀಕೃಷ್ಣ ಪರಿಸರ ಪ್ರತಿಷ್ಠಾನ ವತಿಯಿಂದ ಮಾತೃ ವಂದನಾ ಕಾರ್ಯಕ್ರಮ ಉದ್ಘಾಟಿಸಿ ಅನುಗ್ರಹ ಸಂದೇಶ ನೀಡಿದರು. ಸ್ಥಳದ ಪಾವಿತ್ರ್ಯತೆ ಹೆಚ್ಚಿಸಲು ಭಜನೆ , ಮಾತೃವಂದನೆ ಮುಂತಾದ ಕಾಯಕ್ರಮಗಳ ಮೂಲಕ ಜನರ ಸಮಾಗಮ ಏರ್ಪಡಿಸಲಾಗಿದೆ. ಮಧ್ವಾಚಾಯರ ಇಷ್ಟಾರ್ಥ ನೆರವೇರಿಸಿದ ಈ ಸ್ಥಳ ಜನರ ಬಯಕೆಗಳನ್ನು ಈಡೇರಿಸಲಿದೆ ಎಂದರು.
ವಾಗ್ಮಿ ಹಾಗೂ ಆಧ್ಯಾತ್ಮಿಕ ಚಿಂತಕಿ ಡಾ. ಆರತಿ ವಿ. ಬಿ. ದಿಕ್ಸೂಚಿ ಭಾಷಣ ಮಾಡಿ, ಮನೆ ಮಹಿಳೆಗೆ ಕರ್ಮಯೋಗದ ವೇದಿಕೆ. ಸ್ತುತಿ ಮತ್ತು ನಿಂದನೆಗೆ ಅಂಜದೆ ಕುಟುಂಬವನ್ನು ಪೋಷಿಸಿದ ಕರ್ಮಫಲವನ್ನು ದೇವರು ಗೃಹಿಣೆಗೆ ನೀಡುತ್ತಾನೆ. ಸನಾತನ ಧರ್ಮದಲ್ಲಿ ಸ್ತ್ರೀ ಲಕ್ಷ್ಮೀ ಸ್ವರೂಪಿಣಿ ಎಂದು ಹೇಳಿದರು.
ಕರ್ನಾಟಕ ಬ್ಯಾಂಕ್ನ ಡಿ.ಜಿ.ಎಂ. ವಾದಿರಾಜ್, ಪ್ರತಿಷ್ಠಾನದ ಕಾರ್ಯದರ್ಶಿ ರತ್ನಕುಮಾರ್, ಹಿರಿಯ ಸಂಘಟಕಿ ಉಷಾ ಎ. ಸುವರ್ಣ, ಎಸ್.ಎನ್.ಎಸ್.ಎನ್. ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ತಾರಾ ಉಮೇಶ್ ಆಚಾರ್ಯ, ಸಂಗೀತ ವಿದುಷಿ ಉಷಾ ಹೆಬ್ಬಾರ್, ಮಣಿಪಾಲ ಮಹಿಳಾ ಸಮಾಜದ ಅಧ್ಯಕ್ಷೆ ವೈಜಯಂತಿ ಕಾಮತ್, ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಸಂಧ್ಯಾ ರಮೇಶ್, ನಿಕಟಪೂರ್ವ ನಗರಸಭಾ ಸದಸ್ಯೆ ರಶ್ಮಿ ಭಟ್, ಲಕ್ಷಿ ಮಂಜುನಾಥ್, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಜ್ಯೋತಿ ಹೆಬ್ಬಾರ್, ಶೋಭಾ ಉಪಾಧ್ಯಾಯ ಮೊದಲಾದವರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಪಾಲ್ಗೊಂಡ ತಾಯಂದಿರಿಗೆ ಬಳೆ, ಅರಶಿನ ಕುಂಕುಮ ಮತ್ತು ಹೂವು ನೀಡಲಾಯಿತು. ಕೃಷ್ಣಾಪುರ ಮಠದ ಶ್ರೀಗಳು ಪುಂಗನೂರು ತಳಿಯ ಗೋವುಗಳಿಗೆ ಪೂಜೆ ನೆರವೇರಿಸಿದರು.

