ರಕ್ತವನ್ನು ಕೃತಕವಾಗಿ ತಯಾರಿಸಲು ಸಾಧ್ಯವಿಲ್ಲ. ಸಕಾಲದಲ್ಲಿ ರಕ್ತದಾನ ಮಾಡುವುದರಿಂದ ರೋಗಿಯ ಜೀವ ಉಳಿಸಲು ಸಾಧ್ಯವಿದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ನಿರಂತರವಾಗಿ ವರ್ಷಕ್ಕೆ ಕನಿಷ್ಠ ಎರಡು ಬಾರಿಯಾದರೂ ರಕ್ತದಾನ ಮಾಡಬೇಕು. ಹೀಗೆ ಮಾಡುವುದರಿಂದ ಸಮಾಜದಲ್ಲಿ ರಕ್ತದ ಕೊರತೆ ಉಂಟಾಗುವುದಿಲ್ಲ ಮತ್ತು ಎಲ್ಲ ಅಗತ್ಯ ರೋಗಿಗಳಿಗೆ ಸಕಾಲದಲ್ಲಿ ರಕ್ತ ದೊರೆತರೆ ರೋಗಿಯ ಜೀವ ಉಳಿಸುವಲ್ಲಿ ವೈದ್ಯರಿಗೆ ಅನುಕೂಲವಾಗಲಿದೆ. ಈ ಹಿನ್ನಲೆಯಲ್ಲಿ ಹವ್ಯಕ ಸಭಾ ಮಂಗಳೂರು, ಶ್ರೀ ಭಾರತೀ ಸಮೂಹ ಸಂಸ್ಥೆಗಳು ನಂತೂರು , ರೋಟರಿ ಕ್ಲಬ್ ಹಿಲ್ ಸೈಡ್ ಮಂಗಳೂರು ಚೂಂತಾರು ಸರೋಜಿನಿ ಭಟ್ ಪ್ರತಿಷ್ಟಾನ ರಕ್ತದಾನ ಶಿಬಿರ ಆಯೋಜಿಸಿ ಜನರು ರಕ್ತದಾನಕ್ಕೆ ಮುಂದಾಗುವುದು ಧನಾತ್ಮಕ ಬೆಳವಣಿಗೆ ಎಂದು ಶ್ರೀ ನೀರಮೂಲೆ ಅವರು ನುಡಿದರು.
ದಿನಾಂಕ 07-06-2026 ರಂದು ಭಾರತಿ ಸಮೂಹ ಸಂಸ್ಥೆಗಳು , ರೋಟರೀ ಕ್ಲಬ್ ಹಿಲ್ ಸೈಡ್ ಮಂಗಳೂರು ಚೂಂತಾರು ಪ್ರತಿಷ್ಟಾನ ಮತ್ತು ಮಂಗಳೂರು ಹವ್ಯಕ ಸಭಾ ಇದರ ಆಶ್ರಯದಲ್ಲಿ ನಗರದ ನಂತೂರಿನಲ್ಲಿರುವ ಶ್ರೀ ಭಾರತೀ ಕಾಲೇಜು ನಲ್ಲಿ ರಕ್ತದಾನ ಶಿಬಿರವು ನಡೆಯಿತು.ಹವ್ಯಕ ಸಭಾ ಮಂಗಳೂರು ಇದರ ಅಧ್ಯಕ್ಷೆ ಶ್ರೀಮತಿ ಗೀತಾ ದೇವಿ ಚೂಂತಾರು ದೀಪ ಬೆಳಗಿಸಿ ಶುಭ ಹಾರೈಸಿದರು.. ಪೀಟರ್ ಆಂಟೋನಿ ಧನ್ಯವಾದ ಸಮರ್ಪಣೆ ಮಾಡಿದರು.
ಈ ಸಂದರ್ಭದಲ್ಲಿ ತೇಜಸ್ವಿನಿ ಆಸ್ಪತ್ರೆಯ ಸಂದರ್ಶಕ ವೈದ್ಯ ಡಾ ಮುರಲೀ ಮೋಹನ್ ಚೂಂತಾರು ಅವರು ರಕ್ತದಾನದ ಮಹತ್ವದ ಬಗ್ಗೆ ವಿವರ ನೀಡಿದರು. ಪ್ರತಿ ಆರೋಗ್ಯವಂತ ಪುರುಷ 18 ವರ್ಷದ ಬಳಿಕ 65 ವರುಷದ ವರೆಗೆ ವರ್ಷದ ನಾಲ್ಕು ಬಾರಿ ರಕ್ತದಾನ ಮಾಡಬಹುದು. ದೇಹದಲ್ಲಿ ಹಿಮೋಗ್ಲೋಬಿನ್ ಅಂಶ 12 ಕ್ಕಿಂತ ಜಾಸ್ತಿ ಇದ್ದು ದೇಹದ ತೂಕ ೪೫ ಕೆ.ಜಿ ಗಿಂತ ಜಾಸ್ತಿ ಇರಬೇಕು. ಮಹಿಳೆಯರ ವರ್ಷಕ್ಕೆ ಮೂರು ಬಾರಿ ರಕ್ತದಾನ ಮಾಡಬಹುದು ಎಂದು ನುಡಿದರು. ಶ್ರೀ ಸೇಡಿಯಾಪು ಚೈತ್ರ ನಾರಾಯಣ ಭಟ್ ಅವರು ರಕ್ತದಾನ ಮಾಡಿ ಶಿಬಿರಕ್ಕೆ ಚಾಲನೆ ನೀಡಿದರು. ಡಾ ರಾಜಶ್ರೀ ಮೋಹನ್ ಸ್ವಾಗತಿಸಿದರು.
ಈ ಸಂದರ್ಭದಲ್ಲಿ ಶ್ರೀ ಭಾರತಿ ಸಮೂಹ ಸಂಸ್ಥೆಗಳು ಇದರ ಕಾರ್ಯದರ್ಶಿ ಶ್ರೀ ಕೃಷ್ಣ ನೀರಮೂಲೆ, ಹವ್ಯಕ ಸಭಾ ಮಂಗಳೂರು ಇದರ ಅಧ್ಯಕ್ಷ ರಾದ ಗೀತಾ ಗಣೇಶ, ರೋಟರಿ ಕ್ಲಬ್ ಹಿಲ್ ಸೈಡ್ ಇದರ ಅಧ್ಯಕ್ಷರಾದ ಪೀಟರ್ ಆಂಟೋನಿ ಪಿಂಟೋ ,ಕಾರ್ಯದರ್ಶಿ ವಾಸುದೇವ ಶೆಟ್ಟಿಗಾರ್, ದಂತ ವೈದ್ಯೆ ರಾಜಶ್ರೀ ಮೋಹನ್, ಚೂಂತಾರು ಸರೋಜಿನಿ ಪ್ರತಿಷ್ಟಾನದ ಡಾ ಮುರಲಿ ಮೋಹನ್ ಚೂಂತಾರು, ತೇಜಸ್ವಿನಿ ಆಸ್ಪತ್ರೆಯ ವೈದ್ಯರಾದ ಡಾ ಸಬೀಹ ಉಪಸ್ಥಿತರಿದ್ದರು ತೇಜಸ್ವಿನಿ ಆಸ್ಪತ್ರೆಯ ತಂತ್ರಜ್ಞರು ಈ ಶಿಬಿರವನ್ನು ನಡೆಸಿಕೊಟ್ಟರು. ಸುಮಾರು 22ಮಂದಿ ರಕ್ತದಾನ ಮಾಡಿದರು.

