ಕಾರ್ಕಳ : ವಿಧಾನ ಸಭಾ ಕ್ಷೇತ್ರದ ಕಾರ್ಕಳ ಹಾಗೂ ಹೆಬ್ರಿ ತಾಲೂಕು ವ್ಯಾಪ್ತಿಯಲ್ಲಿನ ರಾಜ್ಯ ಹೆದ್ದಾರಿ ಮತ್ತು ಜಿಲ್ಲಾ ಮುಖ್ಯ ರಸ್ತೆಗಳ ಅಭಿವೃದ್ಧಿಗೆ ಕೇಂದ್ರ ಸರ್ಕಾರದ ಕೇಂದ್ರ ರಸ್ತೆ ಮತ್ತು ಮೂಲಸೌಕರ್ಯ ನಿಧಿ (CRIF) ಅಡಿಯಲ್ಲಿ 06.00 ಕೋಟಿ ರೂಪಾಯಿ ಅನುದಾನ ಮಂಜೂರಾಗಿ ಆಡಳಿತಾತ್ಮಕ ಅನುಮೋದನೆ ಆಗಿರುತ್ತದೆ.
ಕಾರ್ಕಳ ಕ್ಷೇತ್ರದ ಸಾರ್ವಜನಿಕರ ಬಹುದಿನಗಳ ಬೇಡಿಕೆಯಾಗಿದ್ದ ಹೆಬ್ರಿ ತಾಲೂಕಿನ ಬಚ್ಚಪ್ಪುವಿನಿಂದ – ಹೆಬ್ರಿ ಕಡೆಗೆ ಹೋಗುವ ರಸ್ತೆ ಅಭಿವೃದ್ಧಿ, ಮುಂಡ್ಕೂರು ಪೇಟೆಯ ರಸ್ತೆ ಅಭಿವೃದ್ಧಿ, ನಿಟ್ಟೆ ಕೆಮ್ಮಣ್ಣು ಬಪ್ಪಗೋಳಿ ದ್ವಾರದಿಂದ ಕೆಮ್ಮಣ್ಣು ದುರ್ಗಾಪರಮೇಶ್ವರಿ ದೇವಸ್ಥಾನ ರಸ್ತೆ ಅಭಿವೃದ್ಧಿ, ಅಜೆಕಾರು-ಹೆರ್ಮುಂಡೆ ಚರ್ಚ್ ಹತ್ತಿರದ ರಸ್ತೆ ಅಭಿವೃದ್ಧಿ,ಕಾರ್ಕಳ ನಾರಾವಿ ಮುಖ್ಯ ರಸ್ತೆಯ ಈದು ಕ್ರಾಸ್ ರಸ್ತೆ ಅಭಿವೃದ್ಧಿ, ಪಡುಕುಡೂರು ಶಾಲೆಯಿಂದ ಶಿವಪುರ ರಸ್ತೆ ಅಭಿವೃದ್ಧಿ ಸೇರಿದಂತೆ ಒಟ್ಟು 06 ರಸ್ತೆಗಳ ಅಭಿವೃದ್ಧಿಗೆ ತಲಾ 01.00 ಕೋಟಿ ರೂಪಾಯಿಗಳಂತೆ ಒಟ್ಟು 06.00 ಕೋಟಿ ರೂಪಾಯಿ ಅನುದಾನ ಮಂಜೂರಾಗಿರುತ್ತದೆ.
ಸಾರ್ವಜನಿಕರ ಹಾಗೂ ವಾಹನಗಳ ಸುರಕ್ಷಿತ ಹಾಗೂ ಸುಗಮ ಸಂಚಾರಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ ರಸ್ತೆಗಳ ನಿರ್ಮಾಣಕ್ಕೆ ವಿಶೇಷ ಅನುದಾನ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಹಾಗೂ ಮಾನ್ಯ ಸಂಸದರಾದ ಕೋಟ ಶ್ರೀನಿವಾಸ ಪೂಜಾರಿಯವ ಮುಖೇನ ಮನವಿ ಮಾಡಲಾಗಿತ್ತು. ಇದರ ಪರಿಣಾಮವಾಗಿ ಕಾರ್ಕಳ ವಿಧಾನ ಸಭಾ ಕ್ಷೇತ್ರಕ್ಕೆ 06.00 ಕೋಟಿ ರೂ ಅನುದಾನ ಮಂಜೂರಾಗಿ ಸದ್ರಿ ರಸ್ತೆಗಳ ನಿರ್ಮಾಣ ಕಾರ್ಯಕ್ಕೆ ಸರಕಾರದ ಆಡಳಿತಾತ್ಮಕ ಅನುಮೋದನೆ ದೊರೆತಿದ್ದು, ಆದಷ್ಟು ಶೀಘ್ರವಾಗಿ ಇಲಾಖಾ ಪ್ರಕ್ರಿಯೆಗಳನ್ನು ಮುಗಿಸಿ ಕಾಮಗಾರಿಗಳನ್ನು ಆರಂಭಿಸಲಾಗುವುದು ಎಂದು ಶಾಸಕರ ವಿಕಾಸ ಜನಸೇವಾ ಕಛೇರಿ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

