ಮೊದಲ ಬಾರಿಗೆ ಭಾರತೀಯ ಸೇನೆಗೆ ಅಧಿಕಾರಿಗಳಾಗಿ 9 ಮಹಿಳಾ ಕೆಡೆಟ್​ಗಳ ಸೇರ್ಪಡೆ

0
7

ಡೆಹ್ರಾಡೂನ್: ಭಾರತೀಯ ರಕ್ಷಣಾ ವಲಯದ ಇತಿಹಾಸದಲ್ಲೇ ಶನಿವಾರ ಅತ್ಯಂತ ಸುವರ್ಣಾಕ್ಷರಗಳಲ್ಲಿ ಬರೆದಿಡುವಂತಹ ಮಹತ್ವದ ಮೈಲಿಗಲ್ಲೊಂದನ್ನು ಸ್ಥಾಪಿಸಲಾಗಿದೆ. ಉತ್ತರಾಖಂಡದ ಡೆಹ್ರಾಡೂನ್‌ನಲ್ಲಿರುವ ಪ್ರತಿಷ್ಠಿತ ಭಾರತೀಯ ಮಿಲಿಟರಿ ಅಕಾಡೆಮಿ ತನ್ನ ಇತಿಹಾಸದಲ್ಲೇ ಮೊದಲ ಬಾರಿಗೆ ಮಹಿಳಾ ಕೆಡೆಟ್‌ಗಳ ಬ್ಯಾಚ್‌ಗೆ ತರಬೇತಿ ನೀಡಿ, ಒಂಬತ್ತು ಮಹಿಳೆಯರನ್ನು ಭಾರತೀಯ ಸೇನೆಗೆ ಅಧಿಕಾರಿಗಳನ್ನಾಗಿ ಉಡುಗೊರೆ ನೀಡಿದೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಈ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಿ, ಕೆಡೆಟ್‌ಗಳ ಆಕರ್ಷಕ ಮೆರವಣಿಗೆಯ ಗೌರವ ವಂದನೆಯನ್ನು ಸ್ವೀಕರಿಸಿದರು.

1932ರಲ್ಲಿ ಐಎಂಎ ಅಸ್ತಿತ್ವಕ್ಕೆ ಬಂದಿತ್ತು. ಅಂದಿನಿಂದಲೂ ಪುರುಷ ಅಧಿಕಾರಿಗಳು ತರಬೇತಿ ಪಡೆಯುತ್ತಿದ್ದರು. ಇದೇ ಮೊದಲ ಬಾರಿ ಮಹಿಳಾ ಸೇನಾಧಿಕಾರಿಗಳು ತರಬೇತಿ ಪಡೆದಿದ್ದಾರೆ.

ಈ ಸಂದರ್ಭದಲ್ಲಿ ಮಾತನಾಡಿದ  ರಾಷ್ಟ್ರಪತಿ ಮುರ್ಮು,  ಐಎಂಎಯಿಂದ ಮಹಿಳಾ ಕೆಡೆಟ್‌ಗಳು ಉತ್ತೀರ್ಣರಾಗುತ್ತಿರುವುದು ಕೇವಲ ರಕ್ಷಣಾ ಪಡೆಗಳ ಸಾಧನೆಯಷ್ಟೇ ಅಲ್ಲ, ಇದು ಭಾರತದಲ್ಲಿ ಮಹಿಳಾ ನೇತೃತ್ವದ ಅಭಿವೃದ್ಧಿಯ ಬದಲಾಗುತ್ತಿರುವ ಹೆಮ್ಮೆಯ ಚಿತ್ರಣವಾಗಿದೆ ಎಂದು ಶ್ಲಾಘಿಸಿದರು. ಅಲ್ಲದೆ, ಹೊಸ ಅಧಿಕಾರಿಗಳು 1.4 ಶತಕೋಟಿ ಭಾರತೀಯರ ನಂಬಿಕೆಯ ರಕ್ಷಕರಾಗಿದ್ದಾರೆ ಎಂದು ನೆನಪಿಸಿದರು.

ಸೇನೆಗೆ ಸೇರ್ಪಡೆಯಾದ ಒಂಬತ್ತು ಮಹಿಳಾ ಅಧಿಕಾರಿಗಳಲ್ಲಿ ಹರಿಯಾಣದ ಸೋನಿಪತ್ ಜಿಲ್ಲೆಯ ಶೀತಲ್ ಮತ್ತು ಶಾನನ್ ಢಾಕಾ ಅವರ ಯಶೋಗಾಥೆ ಇಡೀ ದೇಶಕ್ಕೆ ಮಾದರಿಯಾಗಿದೆ. ಶೀತಲ್ ಅವರು ತಮ್ಮ ಇಡೀ ಜಿಲ್ಲೆಯಲ್ಲೇ ಮೊದಲ ಮಹಿಳಾ ಮಿಲಿಟರಿ ಅಧಿಕಾರಿಯಾಗುವ ಮೂಲಕ ಇತಿಹಾಸ ಬರೆದಿದ್ದಾರೆ. ಉದ್ಯಮಿ ಅಶೋಕ್ ಕುಮಾರ್ ಹಾಗೂ ಗೃಹಿಣಿ ಮುಖೇಶ್ ದೇವಿ ಅವರ ಪುತ್ರಿಯಾದ ಶೀತಲ್, ತಾವು ಸೇನೆಗೆ ಸೇರುವ ನಿರ್ಧಾರ ಮಾಡಿದಾಗ ಸಮಾಜದಲ್ಲಿ ತಮ್ಮನ್ನು ಕೆಣಕಿದ ಮತ್ತು ಸಂಶಯದಿಂದ ನೋಡಿದ ಎಲ್ಲ ಟೀಕಾಕಾರರಿಗೂ ಅವರು ಉತ್ತರ ನೀಡಿದ್ದಾರೆ.

ಈ ಬಾರಿಯ ಭವ್ಯ ಪರೇಡ್‌ನಲ್ಲಿ ಒಟ್ಟು 515 ಕೆಡೆಟ್‌ಗಳು ಯಶಸ್ವಿಯಾಗಿ ಉತ್ತೀರ್ಣರಾಗಿ ಸೇನೆಗೆ ಸೇರ್ಪಡೆಗೊಂಡಿದ್ದಾರೆ. ಇದರಲ್ಲಿ ನಿಯಮಿತ ಕೋರ್ಸ್, ತಾಂತ್ರಿಕ ಪ್ರವೇಶ ಯೋಜನೆ (TES) ಮತ್ತು ತಾಂತ್ರಿಕ ಪದವಿ ಕೋರ್ಸ್‌ಗಳ ಭಾರತೀಯ ಯುವಕರ ಜೊತೆಗೆ, ಭಾರತದ ಸ್ನೇಹ ರಾಷ್ಟ್ರಗಳಾದ ವಿವಿಧ ವಿದೇಶಗಳ 34 ಕೆಡೆಟ್‌ಗಳು ಸಹ ಪದವಿ ಪಡೆದರು. ಇದು ವಿಶ್ವಸಂಸ್ಥೆ ಮತ್ತು ಜಾಗತಿಕ ಮಟ್ಟದಲ್ಲಿ ಭಾರತ ಹೊಂದಿರುವ ಶಾಂತಿ ಹಾಗೂ ರಕ್ಷಣಾ ಬದ್ಧತೆಗೆ ಸಾಕ್ಷಿಯಾಗಿದೆ.

ಐಎಂಎ ಮೈದಾನದಲ್ಲಿ ನಡೆದ ಈ ಅದ್ಭುತ ಸಮಾರಂಭದಲ್ಲಿ ಉತ್ತರಾಖಂಡದ ರಾಜ್ಯಪಾಲ ಲೆಫ್ಟಿನೆಂಟ್ ಜನರಲ್ (ನಿವೃತ್ತ) ಗುರ್ಮೀತ್ ಸಿಂಗ್ ಮತ್ತು ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಸೇರಿದಂತೆ ಹಲವು ಉನ್ನತ ಸೇನಾ ಅಧಿಕಾರಿಗಳು ಉಪಸ್ಥಿತರಿದ್ದು, ಹೊಸ ಅಧಿಕಾರಿಗಳನ್ನು ಪ್ರೋತ್ಸಾಹಿಸಿದರು.

ಶತಮಾನದ ಇತಿಹಾಸವಿರುವ ಐಎಂಎನ ಈ ಹೆಜ್ಜೆಯು ದೇಶದ ಲಕ್ಷಾಂತರ ಹೆಣ್ಣುಮಕ್ಕಳಿಗೆ ಭಾರತೀಯ ಸೇನೆಯನ್ನು ವೃತ್ತಿಯಾಗಿ ಆಯ್ಕೆ ಮಾಡಿಕೊಳ್ಳಲು ಮತ್ತು ದೇಶದ ಸಾರ್ವಭೌಮತ್ವವನ್ನು ಕಾಪಾಡಲು ಗಡಿಯ ಮುಂಚೂಣಿಯಲ್ಲಿ ನಿಲ್ಲಲು ಒಂದು ಹೊಸ ದಿಕ್ಸೂಚಿಯಾಗಲಿದೆ.

LEAVE A REPLY

Please enter your comment!
Please enter your name here