ಉಡುಪಿ : ರೈಲ್ವೆ ಸಿಬ್ಬಂದಿ ಹಾಗೂ ರೈಲ್ವೆ ರಕ್ಷಣಾ ಪಡೆ ಜಂಟಿ ಕಾರ್ಯಾಚರಣೆಯಲ್ಲಿ ಮನೆಯಿಂದ ಓಡಿಬಂದಿದ್ದ ಐದು ಜನ ಅಪ್ರಾಪ್ತ ಬಾಲಕರನ್ನು ಇಂದ್ರಾಳಿ ರೈಲ್ವೇ ನಿಲ್ದಾಣದಲ್ಲಿ ಬುಧವಾರ ವಶಕ್ಕೆ ಪಡೆಯಲಾಗಿದೆ.
ಮತ್ಸ್ಯಗಂಧ ಎಕ್ಸ್ಪ್ರೆಸ್ ರೈಲಿನಲ್ಲಿ ಬಾರ್ಕೂರು ಮತ್ತು ಉಡುಪಿ ನಿಲ್ದಾಣಗಳ ಮಧ್ಯೆ ಟಿಕೆಟ್ ತಪಾಸಣೆ ನಡೆಸುತ್ತಿದ್ದ ಮುಖ್ಯ ಟಿಕೆಟ್ ಪರೀಕ್ಷಕಿ ಸವಿತಾ ಶೆಟ್ಟಿ ಅವರಿಗೆ ಸಾಮಾನ್ಯ ಬೋಗಿಯಲ್ಲಿದ್ದ ಐದು ಜನ ಬಾಲಕರು ಟಿಕೆಟ್ ಇಲ್ಲದೆ ಪ್ರಯಾಣಿಸುತ್ತಿರುವುದು ಕಂಡುಬಂದಿದೆ. ಅವರ ಚಲನವಲನಗಳು ಮತ್ತು ನಡವಳಿಕೆ ಅನುಮಾನಾಸ್ಪದವಾಗಿ ಕಂಡ ತಕ್ಷಣ ಸವಿತಾ ಆರ್ಪಿಎಫ್ ನಿಯಂತ್ರಣ ಕೊಠಡಿಗೆ ಮಾಹಿತಿ ನೀಡಿದ್ದಾರೆ.
ರೈಲು ಉಡುಪಿ ನಿಲ್ದಾಣಕ್ಕೆ ಬಂದು ತಲುಪುತ್ತಿದ್ದಂತೆ ಸನ್ನದ್ಧರಾಗಿದ್ದ ಆರ್ಪಿಎಫ್ ಕಾನ್ಸ್ಟೇಬಲ್ ಮುರಳಿಧರನ್ ತಕ್ಷಣವೇ ಸಾಮಾನ್ಯ ಬೋಗಿಗೆ ಧಾವಿಸಿ, ಐದೂ ಜನ ಬಾಲಕರನ್ನು ಸುರಕ್ಷಿತವಾಗಿ ಕೆಳಗೆ ಇಳಿಸಿ ಆರ್ಪಿಎಫ್ ಚೌಕಿಗೆ ಕರೆತಂದಿದ್ದಾರೆ.
ಮಕ್ಕಳಿಗೆ ಕೌನ್ಸೆಲಿಂಗ್
ಆರ್ಪಿಎಫ್ ಅಧಿಕಾರಿಗಳು ಮಕ್ಕಳಿಗೆ ಉಪಾಹಾರ ನೀಡಿ, ಕೌನ್ಸೆಲಿಂಗ್ ನಡೆಸಿದಾಗ ಬಾಲಕರು ಕೌಟುಂಬಿಕ ಕಾರಣ ಹಾಗೂ ಸಣ್ಣಪುಟ್ಟ ಮುನಿಸಿನಿಂದಾಗಿ ಯಾರಿಗೂ ತಿಳಿಸದೆ ಮನೆಯಿಂದ ಓಡಿಬಂದಿರುವುದು ಬೆಳಕಿಗೆ ಬಂದಿದೆ. ಮಕ್ಕಳು ಅಪ್ರಾಪ್ತರಾಗಿದ್ದರಿಂದ ಮುಂದಿನ ಕಾನೂನು ಪ್ರಕ್ರಿಯೆ ಮಕ್ಕಳ ರಕ್ಷಣಾ ಟಕ ಅಧಿಕಾರಿಗಳಿಗೆ ಹಸ್ತಾಂತರಿಸಲಾಗಿತ್ತು.
ಪೋಷಕರ ಆಗಮನ
ಬೆಂಗಳೂರು ಆರ್ಟಿ ನಗರ ನಿವಾಸಿಗಳಾದ ಬಾಲಕರಿಗೆ ದೊಡ್ಡಣಗುಡ್ಡೆ ಬಾಲಕರ ಬಾಲ ಮಂದಿರದಲ್ಲಿ ಪುನರ್ವಸತಿ ಕಲ್ಪಿಸಲಾಗಿದ್ದು, ಪೋಷಕರಿಗೆ ಮಾಹಿತಿ ನೀಡಲಾಗಿತ್ತು. ಗುರುವಾರ ಮಕ್ಕಳ ಕಲ್ಯಾಣ ಸಮಿತಿ ಮುಂದೆ ಹಾಜರಾದ ಪೋಷಕರು ದಾಖಲೆಗಳನ್ನು ಸಲ್ಲಿಸಿ ಮಕ್ಕಳನ್ನು ಕರೆದುಕೊಂಡು ಹೋಗಿದ್ದಾರೆ.

