ಕ್ಲಾರಿಟಿ, ಕಂಟೆಂಟ್ ಹಾಗೂ ಕಂಟಿನ್ಯೂಯಿಟಿ ಇದ್ದರೆ ಡಿಜಿಟಲ್ ಜಗತ್ತಿನಲ್ಲಿ ಉಳಿಯಲು ಸಾಧ್ಯ: ಮಂಜುನಾಥ ಕಾಮತ್
“ಶಿಕ್ಷಣ ಪಡೆಯಲು ಇಂದು ವಿಪುಲ ಅವಕಾಶಗಳಿವೆ. ನೀವು ಯಾವುದೇ ಪದವಿ ಅಥವಾ ಕೋರ್ಸ್ ಆಯ್ಕೆ ಮಾಡಿದರೂ, ಅದನ್ನು ಪ್ರೀತಿಸಿ. ಯಾರದೋ ಒತ್ತಾಯಕ್ಕೆ ಮಣಿದು ಏನನ್ನೂ ಮಾಡಲು ಹೋಗಬೇಡಿ. ಆಸಕ್ತಿಯ ಕ್ಷೇತ್ರವನ್ನು ಆರಿಸಿ. ಆರಿಸಿದ ಕ್ಷೇತ್ರವನ್ನು ಪ್ರೀತಿಸಿ” ಎಂದು ಉಡುಪಿಯ ಕಂಡೀರಾ ಸಾಮಾಜಿಕ ಜಾಲತಾಣ ಪುಟದ ರೂವಾರಿ ಮಂಜುನಾಥ ಕಾಮತ್ ಹೇಳಿದರು.
ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸ್ವಾಯತ್ತ ಕಾಲೇಜಿನ ಬಿ. ವೋಕ್ ಡಿಜಿಟಲ್ ಮೀಡಿಯಾ ಮತ್ತು ಫಿಲ್ಮ್ ಮೇಕಿಂಗ್ ವಿಭಾಗದ ಲೂಮೋಸ್ ವಿದ್ಯಾರ್ಥಿ ಸಂಘದ ಶೈಕ್ಷಣಿಕ ವರ್ಷದ ಚಟುವಟಿಕೆಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, “ಡಿಜಿಟಲ್ ಜಗತ್ತಿನಲ್ಲಿ ಎಲ್ಲರಿಗೂ ವೃತ್ತಿಪರರಾಗಲು ಸಾಧ್ಯವಿದೆ. ಆದರೆ ಅಲ್ಲಿ ಇರಲು ನಿಮ್ಮಲ್ಲಿ ಕೌಶಲ್ಯಗಳು ಇರಬೇಕು. ಆ ಕೌಶಲ್ಯಗಳನ್ನು ವಿದ್ಯಾರ್ಥಿಯಾಗಿಯೇ ರೂಢಿಸಿಕೊಂಡರೆ ವೃತ್ತಿ ಜೀವನಕ್ಕೆ ಕಾಲಿಡುವಾಗ ಸುಲಭವಾಗುತ್ತದೆ. ನಾನು ಪತ್ರಿಕೋದ್ಯಮ ಓದುವ ದಿನಗಳಿಂದಲೇ ಮಾಧ್ಯಮದ ವಿವಿಧ ಚಟುವಟಿಕೆಗಳಲ್ಲಿ ಉತ್ಸಾಹದಲ್ಲಿ ತೊಡಗಿಸಿಕೊಂಡಿದ್ದರಿಂದ ಇಂದು ಡಿಜಿಟಲ್ ಮಾಧ್ಯಮದಲ್ಲೂ ಯಶಸ್ವಿಯಾಗಲು ಸಾಧ್ಯವಾಯಿತು” ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ವಿಭಾಗದ ಮುಖ್ಯಸ್ಥ ಮಾಧವ ಹೊಳ್ಳ, “ಪಠ್ಯೇತರ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ತೊಡಗಿಕೊಂಡಷ್ಟು ಅವರ ವ್ಯಕ್ತಿತ್ವ ವಿಕಸನ ಸಾಧ್ಯ. ಇದಕ್ಕಾಗಿ ಬೇಕಾದಂತೆ ವಿದ್ಯಾರ್ಥಿ ಸಂಘಗಳು ರೂಪುಗೊಳ್ಳಬೇಕು. ತಂತಮ್ಮ ಕೌಶಲ್ಯಗಳನ್ನು ಪ್ರಸ್ತುತಪಡಿಸಲು ವಿದ್ಯಾರ್ಥಿಗಳು ಇಂತಹ ವೇದಿಕೆಗಳನ್ನು ಬಳಸಬೇಕು” ಎಂದರು.
ಸಹಾಯಕ ಪ್ರಾಧ್ಯಾಪಕ ಇಂದುಧರ ಕಿಣಿ ಲೂಮೋಸ್ ವಿದ್ಯಾರ್ಥಿ ಸಂಘದ 2025-26ನೇ ಸಾಲಿನ ವಾರ್ಷಿಕ ವರದಿ ವಾಚಿಸಿ, ನೂತನ ಪದಾಧಿಕಾರಿಗಳಿಗೆ ಪ್ರಮಾಣವಚನ ಬೋಧಿಸಿದರು. ಲುಮೋಸ್ ವಿದ್ಯಾರ್ಥಿ ಸಂಘದ 2026-27ನೇ ಸಾಲಿನ ಅಧ್ಯಕ್ಷರಾಗಿ ಸಿಂಚನ, ಕಾರ್ಯದರ್ಶಿಯಾಗಿ ಆದಿತ್ಯ ಮಾಡಳ್ಳಿ, ದ್ವಿತೀಯ ಹಾಗೂ ಪ್ರಥಮ ವರ್ಷದ ವಿದ್ಯಾರ್ಥಿ ಪ್ರತಿನಿಧಿಯಾಗಿ ಹೇಮಲತಾ ಮತ್ತು ಸಿಂಧು ಪ್ರಮಾಣವಚನ ಸ್ವೀಕರಿಸಿದರು.
ದ್ವಿತೀಯ ವರ್ಷದ ವಿದ್ಯಾರ್ಥಿನಿ ಅಂಕಿತ ಕಾರ್ಯಕ್ರಮವನ್ನು ನಿರೂಪಿಸಿದರು. ವಿದ್ಯಾರ್ಥಿನಿ ಸ್ಪರ್ಧಾ ಅತಿಥಿಗಳ ಪರಿಚಯ ಮಾಡಿಕೊಟ್ಟರು. ವಿದ್ಯಾರ್ಥಿನಿ ಅದ್ವಿತಿ ವಂದಿಸಿದರು.

