ಉಡುಪಿ: ರಾಷ್ಟ್ರೀಯ ವಿದ್ಯಾರ್ಥಿ ದಿನಾಚರಣೆ (ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ ಸ್ಥಾಪನಾ ದಿನ) ಅಂಗವಾಗಿ ಕಾರ್ಕಳ ವಿಧಾನಸಭಾ ಕ್ಷೇತ್ರದ ಶಾಸಕ ಹಾಗೂ ಮಾಜಿ ಸಚಿವ ವಿ. ಸುನೀಲ್ ಕುಮಾರ್ ನೇತೃತ್ವದ ‘ಕಾರ್ಕಳ ವಿಕಾಸ ಸೇವಾ ಸಂಸ್ಥೆ’ ಹಮ್ಮಿಕೊಂಡಿದ್ದ ‘ವಿಕಾಸ ಉದ್ಯೋಗ ಸೇತು’ ಬೃಹತ್ ಉದ್ಯೋಗ ಮೇಳವು ಗುರುವಾರ ಯಶಸ್ವಿಯಾಗಿ ಜರುಗಿದೆ.
ಕಾರ್ಕಳದ ವಿಕಾಸ ಕಚೇರಿಯಲ್ಲಿ ನಡೆದ ಈ ಉದ್ಯೋಗ ಸಂದರ್ಶನ ಮೇಳದಲ್ಲಿ ಬೆಂಗಳೂರು, ಮಂಗಳೂರು ಹಾಗೂ ಉಡುಪಿ ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ಆಯ್ದ 25ಕ್ಕೂ ಹೆಚ್ಚು ಪ್ರತಿಷ್ಠಿತ ಕಂಪನಿಗಳು ಭಾಗವಹಿಸಿ, ನೇರ ಸಂದರ್ಶನ ನಡೆಸಿದವು. ಮೇಳದಲ್ಲಿ ಸುಮಾರು 1500ಕ್ಕೂ ಹೆಚ್ಚು ಆಕಾಂಕ್ಷಿಗಳು ಅತ್ಯುತ್ಸಾಹದಿಂದ ಪಾಲ್ಗೊಂಡಿದ್ದರು. ಮೇಳ ಆರಂಭವಾದ ಮೊದಲ ಎರಡು ಗಂಟೆಗಳ ಅವಧಿಯಲ್ಲಿಯೇ ಅರ್ಹತೆ ಪ್ರದರ್ಶಿಸಿದ 100ಕ್ಕೂ ಅಧಿಕ ಅಭ್ಯರ್ಥಿಗಳಿಗೆ ಸ್ಥಳದಲ್ಲಿಯೇ ‘ಆಫರ್ ಲೆಟರ್’ (ನೇಮಕಾತಿ ಪತ್ರ) ವಿತರಿಸಲಾಯಿತು. ಅಂತಿಮವಾಗಿ ಒಟ್ಟು 600ಕ್ಕೂ ಹೆಚ್ಚು ನಿರುದ್ಯೋಗಿ ಯುವಕ-ಯುವತಿಯರು ಪ್ರತಿಷ್ಠಿತ ಕಂಪನಿಗಳಲ್ಲಿ ಉದ್ಯೋಗ ಗಿಟ್ಟಿಸಿಕೊಂಡರು. ನೂರಾರು ಉದ್ಯೋಗಾರ್ಥಿಗಳನ್ನು ಮುಂದಿನ ಹಂತದ ಪ್ರಕ್ರಿಯೆಗಳಿಗಾಗಿ ವಿವಿಧ ಕಂಪನಿಗಳು ಶಾರ್ಟ್ಲಿಸ್ಟ್ ಮಾಡಿಕೊಂಡಿವೆ.

