ಉಡುಪಿ: ಸೆಲ್ಫಿ ತೆಗೆದುಕೊಳ್ಳುವ ನೆಪದಲ್ಲಿ ವಿಡಿಯೋ ಮಾಡಿಕೊಂಡು, ಅದನ್ನೇ ಬ್ಲ್ಯಾಕ್ ಮೇಲ್ ಅಸ್ತ್ರವಾಗಿಸಿ ಉದ್ಯಮಿಯೊಬ್ಬರಿಗೆ ಬರೋಬ್ಬರಿ 51 ಲಕ್ಷ ರೂ. ಅಧಿಕ ಹಣ ಹಾಗೂ ಚಿನ್ನಾಭರಣ ವಂಚಿಸಿರುವ ಬಗ್ಗೆ ಝೀನತ್ ಮತ್ತು ಸ್ನೇಹಿತೆ ಗೀತಾ ರಾವ್ ವಿರುದ್ಧ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬನ್ನಂಜೆ ನಿವಾಸಿ ತೇಜೇಶ್ವರ್ ರಾವ್ ವಂಚನೆಗೊಳಗಾದವರು. ತೇಜೇಶ್ವರ್ ರಾವ್ ಅವರು 2018 ರಿಂದ 2022 ರವರೆಗೆ ಅಂಗಡಿ ಹೊಂದಿದ್ದು, ವ್ಯವಹಾರದ ಸಮಯದಲ್ಲಿ ಆರೋಪಿಗಳಾದ ಝೀನತ್ ಮತ್ತು ಗೀತಾರಾವ್ ಎಂಬುವವರ ಪರಿಚಯವಾಗಿತ್ತು. ಝೀನತ್ ಸೆಲ್ಫಿ ತೆಗೆದುಕೊಳ್ಳುವ ನೆಪದಲ್ಲಿ ರಹಸ್ಯವಾಗಿ ವಿಡಿಯೋವೊಂದನ್ನು ಮಾಡಿಕೊಂಡಿದ್ದಳು. ಬಳಿಕ ಈ ವಿಡಿಯೋ ಇಟ್ಟುಕೊಂಡು ತೇಜೇಶ್ವರ್ ಅವರಿಗೆ ಬ್ಲ್ಯಾಕ್ ಮೇಲ್ ಮಾಡಲು ಆರಂಭಿಸಿದ್ದಾಳೆ. ಮಾನಹಾನಿಗೆ ಹೆದರಿದ ಅವರಿಂದ ಹಂತ ಹಂತವಾಗಿ ಬರೋಬ್ಬರಿ 36,84,000 ರೂ. ಮೋಸದಿಂದ ಪೀಕಿದ್ದಾಳೆ. ಇದಕ್ಕೆ ಸಾಥ್ ನೀಡಿದ 2ನೇ ಆರೋಪಿತೆ ಗೀತಾರಾವ್ ಕೂಡ ಇದೇ ರೀತಿ ಬ್ಲ್ಯಾಕ್ ಮೇಲ್ ತಂತ್ರ ಉಪಯೋಗಿಸಿ ಹಂತ ಹಂತವಾಗಿ 15 ಲಕ್ಷ ರೂ. ನಗದ ಪಡೆದಿದ್ದಾಳೆ ಎಂದು ದೂರು ದಾಖಲಿಸಲಾಗಿದೆ. ನಗರ ಪೊಲೀಸರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.

