“ಇದು ಮಾತನಾಡುವ ವೇದಿಕೆಯಲ್ಲ, ಆಟವಾಡುವ ಮೈದಾನ. ಗೆಲುವು ಮತ್ತು ಕಲಿಕೆ ಎರಡೂ ಕ್ರೀಡಾಂಗಣದಲ್ಲೇ ಸಿಗುತ್ತವೆ. ಪರಿಶ್ರಮವು ಫಲಿತಾಂಶ ದೊರೆಯುವವರೆಗೆ ನಿರಂತರವಾಗಿರಬೇಕು” ಎಂದು ವಿದ್ಯಾರ್ಥಿಗಳಿಗೆ ಪ್ರೇರಣಾದಾಯಕ ಸಂದೇಶವನ್ನು ಶ್ರೀ. ಪ್ರಸನ್ನ ಶೆಣೈ ರೆಂಜಾಳ ನುಡಿದರು.ಕ್ರೀಡಾ ಭಾರತಿ ಕರ್ನಾಟಕ ದಕ್ಷಿಣದ ಪ್ರಾಂತ ಸಹ ಕಾರ್ಯದರ್ಶಿಗಳಾದ ಶ್ರೀ. ಪ್ರಸನ್ನ ಶೆಣೈ ಇವರು ಜಿಲ್ಲಾ ಮಟ್ಟದ
ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದರು.
ವಿದ್ಯಾಭಾರತಿ ಕರ್ನಾಟಕ ಉಡುಪಿ ಜಿಲ್ಲೆ, ರಾಷ್ಟ್ರೋತ್ಥಾನ ವಿದ್ಯಾ ಕೇಂದ್ರ ಹಾಗೂ ರಾಷ್ಟ್ರೋತ್ಥಾನ ಪಿಯು ಕಾಲೇಜಿನ ಸಂಯುಕ್ತ ಆಶ್ರಯದಲ್ಲಿ 19ನೇ ವರ್ಷದ ಜಿಲ್ಲಾಮಟ್ಟದ ಕ್ರೀಡಾಕೂಟವು ಶನಿವಾರ (18-07-2026) ರಾಷ್ಟ್ರೋತ್ಥಾನ ವಿದ್ಯಾಕೇಂದ್ರದ ಕ್ರೀಡಾಂಗಣದಲ್ಲಿ ಅದ್ದೂರಿಯಾಗಿ ಜರುಗಿದೆ. ವಿದ್ಯಾಭಾರತಿ ಕರ್ನಾಟಕ ಉಡುಪಿ ಜಿಲ್ಲೆ ಕಾರ್ಯದರ್ಶಿ ಶ್ರೀ ಮಹೇಶ್ ಹೈಕಾಡಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ” ಕ್ರೀಡೆಯಲ್ಲಿ ಗೆಲುವು-ಸೋಲುಗಳನ್ನು ಸಮಾನ ಮನೋಭಾವದಿಂದ ಸ್ವೀಕರಿಸುವ ಗುಣವನ್ನು ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕು ” ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ವಿದ್ಯಾಭಾರತಿ ಕರ್ನಾಟಕ ಉಡುಪಿ ಜಿಲ್ಲೆ ಅಧ್ಯಕ್ಷರಾದ ಶ್ರೀ ಪಾಂಡುರಂಗ ಪೈ ಸಿದ್ದಾಪುರ , ವಿದ್ಯಾಭಾರತಿ ಕರ್ನಾಟಕದ ಶಾರೀರಿಕ ಪ್ರಮುಖರಾದ ಶ್ರೀ ವಿಜಯಕುಮಾರ್ ಶೆಟ್ಟಿ ಸಿದ್ದಾಪುರ ,ಚೇರ್ಕಾಡಿ ರಾಷ್ಟ್ರೋತ್ಥಾನ ವಿದ್ಯಾಕೇಂದ್ರದ ಪ್ರಧಾನಾಚಾರ್ಯೆ ಶ್ರೀಮತಿ ಪೂರ್ಣಿಮಾ ಎಸ್.ಡಿ. , ರಾಷ್ಟ್ರೋತ್ಥಾನ ಪಿ.ಯು ಕಾಲೇಜಿನ ಪ್ರಧಾನಾಚಾರ್ಯೆ ಶ್ರೀಮತಿ ಭಾಗ್ಯಶ್ರೀ ಹಾಗೂ ಆಡಳಿತಾಧಿಕಾರಿ ಶ್ರೀ ಸುರೇಶ್ ಹೆಜಮಾಡಿ , ಸಮಾರೋಪ ಸಮಾರಂಭದಲ್ಲಿ ವಿದ್ಯಾಭಾರತಿ ಕರ್ನಾಟಕ ಉಡುಪಿ ಜಿಲ್ಲಾ ಉಪಾಧ್ಯಕ್ಷ ಶ್ರೀ. ಪ್ರಕಾಶ್ ಆಚಾರ್ಯ ವಡ್ಡರ್ಸೆ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಕುಸುಮ ಅವರು ನಿರೂಪಿಸಿದರು. ಕಾವ್ಯ ಸ್ವಾಗತಿಸಿ, ಮೇಘನಾ ಜಿ ವಂದನಾರ್ಪಣೆ ಸಲ್ಲಿಸಿದರು.
ಜಿಲ್ಲೆಯ ವಿದ್ಯಾಭಾರತಿ ಕರ್ನಾಟಕ ಶೈಕ್ಷಣಿಕ ಸಂಯೋಜಿತ 14 ಶಾಲೆಗಳಿಂದ 243 ಬಾಲಕರು ,149 ಬಾಲಕಿಯರು ಅಪಾರ ಉತ್ಸಾಹದಿಂದ ಕ್ರೀಡಾಕೂಟದಲ್ಲಿ ಸ್ಪರ್ಧಿಸಿದರು. ಕ್ರೀಡಾ ಸ್ಪೂರ್ತಿ, ಶಿಸ್ತು ಹಾಗೂ ಆರೋಗ್ಯಕರ ಸ್ಪರ್ಧಾ ಮನೋಭಾವಕ್ಕೆ ಈ ಕ್ರೀಡಾಕೂಟ ಸಾಕ್ಷಿಯಾಯಿತು.ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗಳು ವಿದ್ಯಾಭಾರತಿ ಕರ್ನಾಟಕ ನಡೆಸುವ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಲು ಅರ್ಹರಾಗಿರುತ್ತಾರೆ.ವಿದ್ಯಾಭಾರತಿ ಪ್ರಾಂತ ಮಟ್ಟದ ಅಥ್ಲೆಟಿಕ್ ಕ್ರೀಡಾಕೂಟವು ಇದೇ ತಿಂಗಳು ಜುಲೈ 29, 30,ಮತ್ತು 31,ರಂದು ಕಲಬುರ್ಗಿಯ ಶ್ರೀ ಚಂದ್ರಶೇಖರ್ ಪಾಟೀಲ್ ಕ್ರೀಡಾಂಗಣದಲ್ಲಿ ನಡೆಯವುದು.

