ಮಂಗಳೂರು: ನಸುಕಿನ ಜಾವ 2 ಗಂಟೆಯ ಸುಮಾರಿಗೆ ಮಂತ್ರಾಲಯ ಸಮೀಪ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಪಟ್ಲ ಫೌಂಡೇಶನ್ ಟ್ರಸ್ಟ್ ನ ಕೇಂದ್ರೀಯ ಘಟಕದ ಜೊತೆ ಕಾರ್ಯದರ್ಶಿ ರವಿಚಂದ್ರ ಶೆಟ್ಟಿ ಅಶೋಕನಗರ ದಾರುಣ ಮೃತಪಟ್ಟ ಘಟನೆ ನಡೆದಿದೆ.
ಘಟನೆಯ ವಿವರ:
ಪಟ್ಲ ಫೌಂಡೇಶನ್ ಟ್ರಸ್ಟ್ ಸ್ಥಾಪಕರಾದ ಸತೀಶ್ ಶೆಟ್ಟಿ ಪಟ್ಲ ಹಾಗೂ ಪದಾಧಿಕಾರಿಗಳು ಎರಡು ಕಾರುಗಳಲ್ಲಿ ತಿರುಪತಿ ಹಾಗೂ ಮಂತ್ರಾಲಯಕ್ಕೆ ತೆರಳಿದ್ದು ಮಧ್ಯರಾತ್ರಿ ತಿರುಪತಿಯಿಂದ ಮಂತ್ರಾಲಯಕ್ಕೆ ಪ್ರಯಾಣ ಮಾಡುವಾಗ ದುರ್ಘಟನೆ ಸಂಭವಿಸಿದೆ. ಸತೀಶ್ ಶೆಟ್ಟಿ ಪಟ್ಲ ಅವರಿದ್ದ ಒಂದು ಕಾರ್ ಮಂತ್ರಾಲಯ ತಲುಪಿದ್ದು ರವಿಚಂದ್ರ ಶೆಟ್ಟಿ ಸಹಿತ ನಾಲ್ವರಿದ್ದ ಇನ್ನೊಂದು ಕಾರ್ ಮಂತ್ರಾಲಯಕ್ಕೆ 10 ನಿಮಿಷ ದೂರದಲ್ಲಿದ್ದಾಗ ಡಿವೈಡರ್ ಗೆ ಗುದ್ದಿ ಅಪಘಾತ ಸಂಭವಿಸಿದೆ ಎಂದು ತಿಳಿದುಬಂದಿದೆ. ಕಾರನ್ನು ಪ್ರದೀಪ್ ಆಳ್ವ ಕದ್ರಿ ಚಲಾಯಿಸುತ್ತಿದ್ದರೆ ಹಿಂಬದಿ ಸೀಟಲ್ಲಿ ರವಿಚಂದ್ರ ಅವರು ಕುಳಿತಿದ್ದರು. ಅಪಘಾತದ ತೀವ್ರತೆಗೆ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದು ಪುರುಷೋತ್ತಮ್ ಭಂಡಾರಿ ಅವರ ಎರಡೂ ಕಾಲುಗಳಿಗೆ ಗಂಭೀರ ಏಟು ತಗಲಿದೆ. ಸಿಎ ಸುದೇಶ್ ಕುಮಾರ್ ಹಾಗೂ ಪ್ರದೀಪ್ ಆಳ್ವ ಅಪಾಯದಿಂದ ಪಾರಾಗಿದ್ದಾರೆ.

