ಎಸ್‍ಎಂಎಸ್ ವಂಚನೆಗಳ ಬಗ್ಗೆ ಎನ್‍ಪಿಸಿಐ ಜಾಗೃತಿ

0
8

ಮಂಗಳೂರು : ಎಸ್‍ಎಂಎಸ್ ಸಂದೇಶಗಳಿಂದ ಆರಂಭವಾಗುವ ಡಿಜಿಟಲ್ ವಂಚನೆ ಬಗ್ಗೆ ನ್ಯಾಷನಲ್ ಪೇಮೆಂಟ್ ಕಾರ್ಪೊರೇಷನ್ ಆಫ್ ಇಂಡಿಯಾ (ಎನ್‍ಪಿಸಿಐ) ಜಾಗೃತಿ ಅಭಿಯಾನ ಹಮ್ಮಿಕೊಂಡಿದೆ.

ಎಸ್‍ಎಂಎಸ್ ವಂಚನೆ ಎಂದರೆ, ನಿಮ್ಮ ಹಣ, ವೈಯಕ್ತಿಕ ಮಾಹಿತಿ ಅಥವಾ ಡಿಜಿಟಲ್ ಖಾತೆಗಳಿಗೆ ಅಪಾಯವನ್ನುಂಟುಮಾಡುವಂಥ ಕ್ರಮವನ್ನು ಕೈಗೊಳ್ಳುವಂತೆ ನಿಮ್ಮನ್ನು ಮೋಸಗೊಳಿಸಲು ಕಳುಹಿಸುವ ನಕಲಿ ಎಸ್‍ಎಂಎಸ್ ಆಗಿದೆ. ನಕಲಿ ವೆಬ್‍ಸೈಟ್‍ಗೆ ಕರೆದೊಯ್ಯುವ ಲಿಂಕ್ ಮೇಲೆ ಕ್ಲಿಕ್ ಮಾಡುವುದು, ನಕಲಿ ಗ್ರಾಹಕ ಸೇವೆ ಅಥವಾ ಸಹಾಯವಾಣಿ ಸಂಖ್ಯೆಗೆ ಕರೆ ಮಾಡುವುದು, ತಿಳಿದಿಲ್ಲದ ಅಪ್ಲಿಕೇಶನ್ ಅಥವಾ ಫೈಲ್ ಅನ್ನು ಡೌನ್‍ಲೋಡ್ ಮಾಡುವುದು, ನಿಮ್ಮ ವೈಯಕ್ತಿಕ ಅಥವಾ ಹಣಕಾಸಿನ ಮಾಹಿತಿಯನ್ನು ಹಂಚಿಕೊಳ್ಳುವುದು, ಅನ್ಯರಿಗೆ ಹಣ ವರ್ಗಾಯಿಸುವುದರಿಂದ ವಂಚನೆಗೆ ಒಳಗಾಗುವ ಅಪಾಯವಿದೆ ಎಂದು ಎಚ್ಚರಿಸಿದೆ.

ಪ್ರತಿಯೊಂದು ಸಂದೇಶವನ್ನು ಎಚ್ಚರಿಕೆಯಿಂದ ಓದುವುದು, ವಿನಂತಿಗಳ ಸತ್ಯಾಸತ್ಯತೆಯನ್ನು ಸಂಬಂಧಿತ ಸಂಸ್ಥೆಯ ಅಧಿಕೃತ ವೆಬ್‍ಸೈಟ್, ಅಪ್ಲಿಕೇಶನ್ ಅಥವಾ ಗ್ರಾಹಕ ಸೇವೆಯ ಮೂಲಕ ಪರಿಶೀಲಿಸುವುದು, ಅಪ್ಲಿಕೇಶನ್‍ಗಳನ್ನು ಅಧಿಕೃತ ಆಪ್ ಸ್ಟೋರ್‍ಗಳಂತಹ ವಿಶ್ವಾಸಾರ್ಹ ಮೂಲಗಳಿಂದ ಮಾತ್ರ ಡೌನ್‍ಲೋಡ್ ಮಾಡಿಕೊಳ್ಳುವುದು, ಓಟಿಪಿ ಅಥವಾ ಪಾಸ್‍ವರ್ಡ್‍ಗಳನ್ನು ಯಾರೊಂದಿಗೂ ಹಂಚಿಕೊಳ್ಳದಿರುವುದು, ಅನಿರೀಕ್ಷಿತ ಸಂದೇಶಗಳಲ್ಲಿ ಬರುವ ಲಿಂಕ್‍ಗಳ ಮೇಲೆ ಕ್ಲಿಕ್ ಮಾಡುವುದನ್ನು ಅಥವಾ ಅಪ್ಲಿಕೇಶನ್‍ಗಳನ್ನು ಡೌನ್‍ಲೋಡ್ ಮಾಡದಿರುವುದು, ನಿಮ್ಮ ಖಾತೆಗೆ ಹಣ ಜಮೆಯಾಗಿರುವ ಬಗ್ಗೆ ಸಂದೇಶ ಬಂದಾಗ, ನಿಮ್ಮ ಬ್ಯಾಂಕ್ ಖಾತೆಯ ಸ್ಟೇಟ್‍ಮೆಂಟ್ ಪರಿಶೀಲಿಸುವ ಮೂಲಕ ಯಾವಾಗಲೂ ದೃಢೀಕರಿಸಿಕೊಳ್ಳುವುದು ಹಾಗೂ ಅಪ್ಲಿಕೇಶನ್ ಅನುಮತಿಗಳನ್ನು ಎಚ್ಚರಿಕೆಯಿಂದ ಪರಿಶೀಲಿಸಿ ಮತ್ತು ನಿಜವಾಗಿಯೂ ಅಗತ್ಯವಿರುವ ಅನುಮತಿಗಳನ್ನು ಮಾತ್ರ ನೀಡುವ ಮೂಲಕ ವಂಚನೆಯಿಂದ ತಪ್ಪಿಸಿಕೊಳ್ಳಬಹುದು ಎಂದು ವಿವರಿಸಿದೆ.

ಸಂದೇಹಾಸ್ಪದ ಸಂಖ್ಯೆಗಳನ್ನು ರಾಷ್ಟ್ರೀಯ ಸೈಬರ್ ಅಪರಾಧ ಸಹಾಯವಾಣಿ 1930 ಗೆ ಕರೆ ಮಾಡುವ ಮೂಲಕ ಅಥವಾ ದೂರಸಂಪರ್ಕ ಇಲಾಖೆಗೆ ವರದಿ ಮಾಡಬಹುದಾಗಿದೆ, (https://sancharsaathi.gov.in/sfc/).