ಶ್ರೀ ಶಾರದಾ ನಾಟ್ಯಾಲಯದಿಂದ ಆಟಿಡೊಂಜಿ ದಿನ ಸಂಭ್ರಮ

0
20

ಮೂಡುಬಿದಿರೆ : ಶ್ರೀ ಶಾರದಾ ನಾಟ್ಯಾಲಯ, ಮೂಡುಬಿದಿರೆ ಕಲಾತಂಡದ ವತಿಯಿಂದ ಆಟಿಡೊಂಜಿ ದಿನವನ್ನು ಆಗಸ್ಟ್ 2ರಂದು ಮೂಡುಬಿದಿರೆಯ ಸ್ವರ್ಣಮಂದಿರದಲ್ಲಿ ಸಾಂಪ್ರದಾಯಿಕ ಸಂಭ್ರಮ ಹಾಗೂ ಸರಳತೆಯೊಂದಿಗೆ ಆಚರಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಾಟ್ಯಾಲಯದ ಅಧ್ಯಕ್ಷರಾದ ಶಂಕರ್ ಕುಲಾಲ್ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಸರಕಾರಿ ಪದವಿ ಪೂರ್ವ ಕಾಲೇಜಿನ ಶಿಕ್ಷಕಿ ಪ್ರೇಮಾ ಮುಲ್ಕಿ ಭಾಗವಹಿಸಿದ್ದರು. ಅತಿಥಿಗಳಾಗಿ ಚಿತ್ರಕಲಾ ಶಿಕ್ಷಕಿ ಸ್ವಾತಿ ಕುಲಾಲ್, ಜೈನ್ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕಿ ಸಂಧ್ಯಾ, ನಾಟ್ಯಾಲಯದ ಉಪಾಧ್ಯಕ್ಷರಾದ ಧರ್ಮರಾಜ್ ಶೆಟ್ಟಿ ಹಾಗೂ ಕೋಶಾಧಿಕಾರಿ ಸತೀಶ್ ಉಪಸ್ಥಿತರಿದ್ದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಸತೀಶ್ ಅವರು ಎಲ್ಲರನ್ನು ಸ್ವಾಗತಿಸಿದರು. ಕಾರ್ಯಕ್ರಮದ ಅಂಗವಾಗಿ ವಿದ್ಯಾರ್ಥಿಗಳಿಗಾಗಿ ಎಲೆ ಗುರುತಿಸುವ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಪೋಷಕರು ಹಾಗೂ ವಿದ್ಯಾರ್ಥಿಗಳು ಆಷಾಢ ಮಾಸದ ವಿಶೇಷತೆಯನ್ನು ಬಿಂಬಿಸುವ 35 ಬಗೆಯ ಸಾಂಪ್ರದಾಯಿಕ ತಿಂಡಿ-ತಿನಿಸುಗಳನ್ನು ಮನೆಯಿಂದಲೇ ತಯಾರಿಸಿ ತಂದರು. ಈ ಮೂಲಕ ಆಟಿಡೊಂಜಿ ದಿನದ ಸಂಪ್ರದಾಯ, ಸಂಸ್ಕೃತಿ ಹಾಗೂ ಆಹಾರ ವೈವಿಧ್ಯತೆಯನ್ನು ಪರಿಚಯಿಸುವ ವಿಶಿಷ್ಟ ಕಾರ್ಯಕ್ರಮ ನಡೆಯಿತು.

ಇದೇ ಸಂದರ್ಭದಲ್ಲಿ ಬೆಳಕು ಸೇವಾ ಫೌಂಡೇಶನ್ (ರಿ), ಮೈಸೂರು ವತಿಯಿಂದ ಪ್ರದಾನವಾಗುವ ‘ಬೆಳಕು ಕರ್ನಾಟಕ ಶ್ರೇಷ್ಠತಾ ಪ್ರಶಸ್ತಿ–2026’ ಪುರಸ್ಕೃತರಾದ ಶಾರದಾ ನಾಟ್ಯಾಲಯದ ನಿರ್ದೇಶಕರಾದ ಮೋಹನ್ ಹೊಸ್ಮಾರ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಶಾರದಾ ನಾಟ್ಯಾಲಯದ ನಿರ್ದೇಶಕ ಮೋಹನ್ ಹೊಸ್ಮಾರ್ ಧನ್ಯವಾದ ಸಲ್ಲಿಸಿದರು. ಕುಮಾರಿ ಧನ್ವಿ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.