ಕಾಸರಗೋಡು : ವಿಶ್ವ ತುಳುವೆರ್ (ರಿ.) ಸಂಸ್ಥೆಯ ಕೇರಳ ಘಟಕದ ಉದ್ಘಾಟನೆ ಹಾಗೂ ನೂತನ ಪದಾಧಿಕಾರಿಗಳ ಆಯ್ಕೆ ಕಾರ್ಯಕ್ರಮವು ಆ.2ರಂದು ಕಾಸರಗೋಡಿನ ಮಾರಿಪ್ಪಳ್ಳದಲ್ಲಿ ಡಾ. ವಾಣಿಶ್ರೀ ಅವರ ಸ್ವಂತ ವೇದಿಕೆಯಲ್ಲಿ ವಿಜೃಂಭಣೆಯಿಂದ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಉಪಾಧ್ಯಕ್ಷರಾದ ಎಲ್ಎನ್ ಡಾ. ಗಣೇಶ್ ಕುಮಾರ್ ವಹಿಸಿ, ಕೇರಳ ಘಟಕವನ್ನು ಉದ್ಘಾಟಿಸಿ ಶುಭ ಹಾರೈಸಿದರು.

ಸಂಸ್ಥೆಯ ಸ್ಥಾಪಕ ಅಧ್ಯಕ್ಷ ದಯಾನಂದ ಮಾತನಾಡಿ, ತುಳು ಭಾಷೆಗೆ ಕರ್ನಾಟಕದಲ್ಲಿ ಎರಡನೇ ಅಧಿಕೃತ ಭಾಷೆಯ ಸ್ಥಾನಮಾನ ಹಾಗೂ ಭಾರತೀಯ ಸಂವಿಧಾನದ ಎಂಟನೇ ಅನುಸೂಚಿಗೆ ಸೇರ್ಪಡೆ ದೊರಕಬೇಕು ಎಂಬುದು ತುಳುವರ ಬಹುದಿನಗಳ ಬೇಡಿಕೆಯಾಗಿದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ತುಳು ಭಾಷೆ ಹಾಗೂ ತುಳು ಲಿಪಿಯನ್ನು ಉಳಿಸಿ, ಮುಂದಿನ ಪೀಳಿಗೆಗೆ ಕಲಿಸಿ ಬೆಳೆಸುವ ಮೂಲಕ ನಮ್ಮ ಸಂಸ್ಕೃತಿಯನ್ನು ಸಂರಕ್ಷಿಸುವ ಜವಾಬ್ದಾರಿಯನ್ನು ವಹಿಸಿಕೊಳ್ಳಬೇಕು ಎಂದು ಕರೆ ನೀಡಿದರು. ಇದೇ ವೇಳೆ ನೂತನ ಪದಾಧಿಕಾರಿಗಳಿಗೆ ಶುಭ ಹಾರೈಸಿದರು.

ಇನ್ನೋರ್ವ ಉಪಾಧ್ಯಕ್ಷ ಜಿ.ವಿ.ಎಸ್. ಉಳ್ಳಾಲ್ ಅವರು ತುಳುನಾಡ ಟ್ರಸ್ಟ್ ಪ್ರಕಟಿಸಿರುವ ತುಳು ಲಿಪಿ ಪುಸ್ತಕವನ್ನು ನೂತನ ಪದಾಧಿಕಾರಿಗಳಿಗೆ ನೀಡಿ ಅಭಿನಂದಿಸಿದರು.
ಕಾರ್ಯಕ್ರಮದಲ್ಲಿ ಪುಟಾಣಿ ಮಕ್ಕಳಿಂದ ನೃತ್ಯ, ಯೋಗ ಪ್ರದರ್ಶನ ಹಾಗೂ ವಿವಿಧ ತುಳು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುವ ಮೂಲಕ ವಿಶೇಷ ಮೆರುಗು ಮೂಡಿಸಿತು.
ವೇದಿಕೆಯಲ್ಲಿ ಸ್ಥಾಪಕ ಅಧ್ಯಕ್ಷ ದಯಾನಂದ, ಉಪಾಧ್ಯಕ್ಷರಾದ ಎಲ್ಎನ್ ಡಾ. ಗಣೇಶ್ ಕುಮಾರ್, ಜಿ.ವಿ.ಎಸ್. ಉಳ್ಳಾಲ್, ಹಿರಿಯ ಸದಸ್ಯ ಗಣೇಶ್ ಬಲ್ಲಾಳ್ ಭಾಗ್, ಸದಸ್ಯ ರಾಜೇಶ್ ಉಳ್ಳಾಲ್, ದಕ್ಷಿಣ ಕನ್ನಡ ಜಿಲ್ಲಾ ಅಧ್ಯಕ್ಷ ಪ್ರಕಾಶ್ ಸಿಂಫೋನಿ, ಕೇರಳ ಘಟಕದ ಅಧ್ಯಕ್ಷೆ ಡಾ. ವಾಣಿಶ್ರೀ, ದಕ್ಷಿಣ ಕನ್ನಡ ಜಿಲ್ಲಾ ಮಹಿಳಾ ಉಪಾಧ್ಯಕ್ಷೆ ಡೋಲ್ಸಿ ಡಿಸೋಜಾ, ತೊಕ್ಕೊಟ್ಟು ಕಾರ್ಯಾಧ್ಯಕ್ಷೆ ಹೇಮಲತಾ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ನೂತನ ಪದಾಧಿಕಾರಿಗಳ ಆಯ್ಕೆ
ಕಾರ್ಯಕ್ರಮದಲ್ಲಿ ವಿಶ್ವ ತುಳುವೆರ್ (ರಿ.) ಕೇರಳ ಘಟಕದ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
- ಅಧ್ಯಕ್ಷೆ: ಡಾ. ವಾಣಿಶ್ರೀ
- ಗೌರವ ಅಧ್ಯಕ್ಷ: ಡಾ. ವೆಂಕಟ ಗಿರೀಶ್
- ಉಪಾಧ್ಯಕ್ಷರು: ಸೀತಾರಾಮ್ ಮಲ್ಲ, ಅಚ್ಚುತ ಭಟ್
- ಪ್ರಧಾನ ಕಾರ್ಯದರ್ಶಿ: ಸುರೇಶ್ ಉಡುಪಿ
- ಉಪ ಕಾರ್ಯದರ್ಶಿಯರು: ಜಯಂತಿ, ಸೌಮ್ಯ ಮಲ್ಲಿ
- ಸದಸ್ಯ: ರೋಹಿತ್ ಮಲ್ಲಿ
ನೂತನ ಪದಾಧಿಕಾರಿಗಳು ತುಳು ಭಾಷೆ, ಲಿಪಿ ಹಾಗೂ ಸಂಸ್ಕೃತಿಯ ಉಳಿವು ಮತ್ತು ಬೆಳವಣಿಗೆಗೆ ಶ್ರಮಿಸುವ ಸಂಕಲ್ಪ ವ್ಯಕ್ತಪಡಿಸಿದರು.

