ಮಂಗಳೂರು: ಯಕ್ಷಗಾನ ಅಭ್ಯಾಸ ಕೇಂದ್ರ ಯುಎಇ ವತಿಯಿಂದ ನಗರದ ಮಂಗಳಾದೇವಿ ಸನ್ನಿಧಿಯಲ್ಲಿ ಶನಿವಾರ ಹಿರಿಯ ಕಲಾವಿದ ವಾಸು ಬಾಯಾರ್ ಅವರಿಗೆ ವಿಶೇಷ ಯಕ್ಷಶ್ರೀ ರಕ್ಷಾ ಗೌರವ ಪ್ರಶಸ್ತಿ 2026 ಪ್ರದಾನ ಮಾಡಲಾಯಿತು.
ಯಕ್ಷಗಾನ ಅಭ್ಯಾಸ ಕೇಂದ್ರ ಯುಎಇ -ದುಬೈ ಸದಸ್ಯರಿಂದ ಮಂಗಳಾದೇವಿ ಕ್ಷೇತ್ರದಲ್ಲಿ ನಡೆದ ‘ಸುದರ್ಶನೋಪಾಖ್ಯಾನ’ ಯಕ್ಷಗಾನ ಪ್ರದರ್ಶನ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ನಡೆಯಿತು.

ಅತಿಥಿಯಾಗಿದ್ದ ಮಂಗಳಾದೇವಿ ದೇವಸ್ಥಾನ ಆಡಳಿತ ಮೊಕ್ತೇಸರ ಎಂ.ಅರುಣ್ ಐತಾಳ್ ಮಾತನಾಡಿ, ಮಕ್ಕಳ ಆಸಕ್ತಿ, ಹೆತ್ತವರ ಪ್ರೋತ್ಸಾಹ, ಗುರುಗಳ ಪರಿಶ್ರಮದಿಂದ ದುಬೈನ ಮಕ್ಕಳು ಉತ್ತಮ ಪ್ರದರ್ಶನ ನೀಡಿದ್ದಾರೆ. ಕಲೆ ಉಳಿಸಿ ಬೆಳೆಸುವಲ್ಲಿ ಯಕ್ಷಗಾನ ಅಭ್ಯಾಸ ಕೇಂದ್ರದ ಕೊಡುಗೆ ಅಮೋಘ ಎಂದರು.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ವಾಸು ಬಾಯಾರ್, ಪ್ರಶಸ್ತಿ ಮೂಲಕ ನನಗೆ ದೊಡ್ಡ ಗೌರವ ದೊರೆತಿದೆ. ದುಬೈನ ಯಕ್ಷಗಾನ ಅಭ್ಯಾಸ ಕೇಂದ್ರ ಪರಿಪೂರ್ಣ ಕೇಂದ್ರವಾಗಿ ಮೂಡಿಬಂದಿದೆ. ಶಿಸ್ತು, ಅಚ್ಚುಕಟ್ಟುತನ ಮೂಲಕ ಬೆಳೆದು ಯಕ್ಷಗಾನಕ್ಕೆ ಸಂಸ್ಥೆ ಕೊಡುಗೆ ನೀಡುತ್ತಿದೆ ಎಂದರು.

ಅತಿಥಿಗಳಾಗಿದ್ದ ಮಾಜಿ ಮೇಯರ್ ಪ್ರೇಮಾನಂದ ಶೆಟ್ಟಿ, ಕರ್ನಾಟಕ ಯಕ್ಷಗಾನ ಅಕಾಡೆಮಿ ಸದಸ್ಯ ಸತೀಶ್ ಅಡಪ ಮಂಜೇಶ್ವರ ಶುಭ ಹಾರೈಸಿದರು. ಸುರತ್ಕಲ್ ನಾಟ್ಯಾಂಜಲಿ ಕಲಾ ಅಕಾಡೆಮಿ ನಿರ್ದೇಶಕ ವಿದ್ವಾನ್ ಚಂದ್ರಶೇಖರ ನಾವಡ ಅತಿಥಿಗಳಾಗಿದ್ದರು. ಯಕ್ಷಗಾನ ಅಭ್ಯಾಸ ಕೇಂದ್ರ ಯುಎಇ ಸಂಚಾಲಕ ದಿನೇಶ್ ಶೆಟ್ಟಿ ಕೊಟ್ಟಿಂಜ ಸ್ವಾಗತಿಸಿದರು. ಚೇತನ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
ಉದ್ಘಾಟನೆ : ಯಕ್ಷಗಾನ ಪ್ರದರ್ಶನವನ್ನು ಆಧ್ಯಾತ್ಮಿಕ ಗುರು ಜನನಿದಾಸ್ ಉದ್ಘಾಟಿಸಿದರು. ಬಹರೈನ್ ಕನ್ನಡ ಸಂಘದ ಯಕ್ಷಕೂಟ ನಿಕಟಪೂರ್ವ ಸಂಘಟಕ ರಮೇಶ್ ಮಂಜೇಶ್ವರ, ಪತ್ರಕರ್ತ ಹರೀಶ ಕುಲ್ಕುಂದ, ಮಂಗಳಾದೇವಿ ದೇವಸ್ಥಾನ ಕಚೇರಿ ಅಧೀಕ್ಷಕ ರಂಜಿತ್ಕುಮಾರ್ ಅತಿಥಿಗಳಾಗಿದ್ದರು. ಯಕ್ಷಗಾನ ಗುರು ಶೇಖರ ಡಿ. ಶೆಟ್ಟಿಗಾರ್ ಉಪಸ್ಥಿತರಿದ್ದರು.
{ಯಕ್ಷಗಾನ ಅಭ್ಯಾಸ ಕೇಂದ್ರ ಯುಎಇ ಕಳೆದ ೧೧ ವರ್ಷದಿಂದ ದುಬೈನಲ್ಲಿ ಮಕ್ಕಳಿಗೆ ಸಮಗ್ರ ಯಕ್ಷಗಾನ ಕಲಿಕೆ ನೀಡುತ್ತಿದೆ. ಯಕ್ಷಗಾನ ನಾಟ್ಯ, ಭಾಗವತಿಕೆ, ಚೆಂಡೆ- ಮದ್ದಳೆ, ಪ್ರಸಾದನ ತರಬೇತಿ, ತಾಳಮದ್ದಳೆ, ಕನ್ನಡ ಕಲಿಕೆ ನಡೆಸುತ್ತಿದೆ. ಕರ್ನಾಟಕ ಯಕ್ಷಗಾನ ಅಕಾಡೆಮಿ ಪಠ್ಯಕ್ರಮದಂತೆ ಪ್ರಾಥಮಿಕ, ಪ್ರೌಢವಿಭಾಗಳಲ್ಲಿ ವಾರ್ಷಿಕ ಪರೀಕ್ಷೆ ನಡೆಸಲಾಗುತ್ತಿದೆ.}

