ಮಂಗಳೂರು : ಕರಾವಳಿ ಪ್ರದೇಶದ ತುಳುನಾಡಿನ ವಂಶಜರು ವೃತ್ತಿಯಲ್ಲಿ ರೈತರು, ಕೃಷಿಕರಾಗಿದ್ದು, ಪ್ರಕೃತಿ ಆರಾಧಕರಾಗಿದ್ದರು. ಅತಿ ಪ್ರಾಚೀನ ಕಾಲದಿಂದ ವಂಶ ಪಾರಂಪರ್ಯವಾಗಿ, ಸಾಂಪ್ರದಾಯಿಕ, ಸಾಮಾಜಿಕ, ಸಾಂಸ್ಕೃತಿಕವಾಗಿ ನಂಬಿಕೆ, ವಿಶ್ವಾಸದಿಂದ ಪ್ರಕೃತಿ, ಪರಿಸರ, ಹವಾಮಾನ ಬದಲಾವಣೆಗೆ ಅನುಗುಣವಾಗಿ ಆರೋಗ್ಯ ರಕ್ಷಣೆಯ ದೃಷ್ಟಿಕೋನದಿಂದ ಆಟಿಯನ್ನು ಆಚರಿಸಲಾಗುತ್ತಿತ್ತು. ಈ ಆಚರಣೆಗೆ ವೈದ್ಯಕೀಯ ಮಹತ್ವವಿದೆ ಎಂದು ನಿಟ್ಟೆ ವಿಶ್ವವಿದ್ಯಾನಿಲಯದ ವಿಶ್ರಾಂತ ಉಪಕುಲಪತಿ ಡಾ. ಸತೀಶ್ ಕುಮಾರ್ ಭಂಡಾರಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಅವರು ತಾರೀಕು 10.8.26ರಂದು ಭಾರತೀಯ ವೈದ್ಯಕೀಯ ಸಂಘದ ಮಂಗಳೂರು ಶಾಖೆಯ ಆಶ್ರಯದಲ್ಲಿ ಡಾ.ಎವಿ ರಾವ್ ಸಭಾಂಗಣದಲ್ಲಿ ಆಯೋಜಿಸಿದ “ಆಟಿಡೊಂಜಿ ದಿನ” ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಈ ಧಾರ್ಮಿಕ, ಆಧ್ಯಾತ್ಮಿಕ ಆಚರಣೆಯ ಸಂಪ್ರದಾಯವನ್ನು ಉಳಿಸಿ, ಬೆಳೆಸಿ ಮುಂದುವರಿಸುವ ಗುರುತರ ಜವಾಬ್ದಾರಿ ಯುವ ಜನಾಂಗದ ಮೇಲಿದೆ. ಆದರೆ ಯುವ ಜನಾಂಗ ಈ ಆಚರಣೆಯನ್ನು ನಿರ್ಲಕ್ಷಿಸುತ್ತಿರುವುದು ಖೇದಕರ ಎಂದು ವಿಷಾದ ವ್ಯಕ್ತಪಡಿಸಿದರು.

ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ತುಳು ಭಾಷಾ ವಿದ್ವಾಂಸ ಕೆ.ಕೆ. ಪೇಜಾವರ ಆಟಿ ಆಚರಣೆಯ ಪ್ರಾಮುಖ್ಯತೆ, ನೈಜ ಉದ್ದೇಶ, ಮಹತ್ವ, ಆಚಾರ- ವಿಚಾರ, ಎದುರಾಗುತ್ತಿರುವ ಕಠಿಣ ಸವಾಲುಗಳು, ಔಷದ ಗುಣ ಅಂಶಗಳುಳ್ಳ ರೋಗ ನಿರೋಧಕ ಶಕ್ತಿಯುಳ್ಳ ವಿಶಿಷ್ಟ ನೈಸರ್ಗಿಕ ಖಾದ್ಯ, ತಿಂಡಿ ತಿನಿಸುಗಳು, ಪಾನಕ ಪಾನೀಯಗಳು, ಪಾಯಸ, ಕಷಾಯಗಳ ಬಗ್ಗೆ ಉಪನ್ಯಾಸ ನೀಡಿದರು.
ಕನ್ನಡ ಭಾಷಾ ವಿದ್ವಾನ್ ದಾಮೋದರ್ ಶರ್ಮ ಮಾತನಾಡಿ, ಆಟಿ ಮಾಸದಲ್ಲಿ ಪ್ರಕೃತಿ ಆರಾಧನೆ, ಭೂತಾರಾಧನೆ, ದೈವಾರಾಧನೆ, ನಾಗದೇವತಾರಾಧನೆಯನ್ನು ಅತ್ಯಂತ ಶ್ರದ್ಧೆ ಭಕ್ತಿಯಿಂದ ಆಚರಿಸಲಾಗುತ್ತಿತ್ತು ಎಂದು ಮಾಹಿತಿ ನೀಡಿದರು. ಈ ಆಚರಣೆಯಿಂದ ಕುಟುಂಬದ ಒಗ್ಗಟ್ಟು, ಬಾಂಧವ್ಯ ವೃದ್ಧಿಯಾಗುತ್ತಿತ್ತು. ಜಾತಿ- ಮತ ಭೇದವಿಲ್ಲದೆ ಸಾಮಾಜಿಕ ಸೌಹಾರ್ದತೆ ಸಾಧ್ಯವಾಗಿತ್ತು ಮತ್ತು ಅರ್ಥಪೂರ್ಣವಾಗಿ ಆಚರಿಸಲಾಗುತ್ತಿತ್ತು ಎಂದು ನುಡಿದರು.
ಭಾರತೀಯ ವೈದ್ಯಕೀಯ ಸಂಘದ ಮಂಗಳೂರು ಶಾಖೆಯ ಅಧ್ಯಕ್ಷ ಡಾ. ಸದಾನಂದ ಪೂಜಾರಿ ಸ್ವಾಗತಿಸಿದರು. ಕಾರ್ಯದರ್ಶಿ ಡಾ. ಪ್ರಕಾಶ್ ಹರಿಶ್ಚಂದ್ರ ವಂದಿಸಿದರು. ವೇದಿಕೆಯಲ್ಲಿ ಚುನಾಯಿತ ಅಧ್ಯಕ್ಷ ಡಾ.ಉಲ್ಲಾಸ್ ಶೆಟ್ಟಿ, ಕೋಶಾಧಿಕಾರಿ ಡಾ. ಜ್ಯುಲಿಯನ್ ಸಲ್ದಾನಾ ಉಪಸ್ಥಿತರಿದ್ದರು. ಅಕ್ಷತಾ ಮತ್ತು ಯತೀಶ್ ಬೈಕಂಪಾಡಿ ಕಾರ್ಯಕ್ರಮ ನಿರೂಪಿಸಿದರು.
ಮನರಂಜನಾ ಕಾರ್ಯಕ್ರಮದ ಅಂಗವಾಗಿ “ಸು ಫ್ರಮ್ ಸೋ” ಕನ್ನಡ ಚಲನಚಿತ್ರ ತಂಡದ ಕಲಾವಿದರಾದ ಜೆಪಿ ತುಮಿನಾಡ್, ಪುಷ್ಪರಾಜ್ ಬಲ್ಲಾಳ್, ಶನಿಲ್ ಗೌತಮ್ ಸಭಿಕರೊಂದಿಗೆ ಸಂವಾದ ನಡೆಸಿದರು.

