ಶ್ರೀ ಕ್ಷೇತ್ರ ಧರ್ಮಸ್ಥಳದ ಗ್ರಾಮಾಭಿವೃದ್ಧಿ ಯೋಜನೆಯ ಸಹಕಾರದೊಂದಿಗೆ ಭಜನಾ ಪರಿಷತ್ತಿನ ವಲಯ ಸಭೆಗಳು ಕೆಲವು ತಿಂಗಳುಗಳಿಂದ ನಿರಂತರವಾಗಿ ಬೆಳ್ತಂಗಡಿ ತಾಲೂಕಿನಲ್ಲಿ ನಡೆಯುತ್ತಿದ್ದು ಅದರ ಮುಂದುವರಿದ ಭಾಗವೆನ್ನುವಂತೆ ನೆರಿಯ ವಲಯದ ಭಜನಾ ಪರಿಷತ್ತಿನ ಸಭೆಯು ವಲಯ ಅಧ್ಯಕ್ಷರಾದ ಶ್ರೀ P K ರಾಜನ್ ಇವರ ಅಧ್ಯಕ್ಷತೆಯಲ್ಲಿ ವಲಯ ಯೋಜನೆ ಕಚೇರಿ ತೋಟತ್ತಾಡಿಯಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ಭಜನಾ ಪರಿಷತ್ತಿನ ರಾಜ್ಯ ಅಧ್ಯಕ್ಷರಾದ ಪಿ ಚಂದ್ರಶೇಖರ ಸಾಲ್ಯಾನ್ ಕೊಯ್ಯೂರು, ಭಜನಾ ಪರಿಷತ್ತಿನ ತಾಲೂಕು ಅಧ್ಯಕ್ಷರಾದ ರವಿರಾಜ್ ಚಾರ್ಮಾಡಿ. ಗ್ರಾಮಾಭಿವೃದ್ಧಿ ಯೋಜನೆಯ ವಲಯ ಮೇಲ್ವಿಚಾರಕ ಗಣೇಶ್ ಕುಮಾರ್. ತಾಲೂಕು ಭಜನಾ ಪರಿಷತ್ತಿನ ಸಲಹೆಗಾರರಾದ ನಾಗೇಶ್ ನೆರಿಯ ಮತ್ತು ಇನ್ನಿತರ ಪದಾಧಿಕಾರಿಗಳು ಹಾಗೂ ಸೇವಾ ಪ್ರತಿನಿಧಿಗಳು ವಿವಿಧ ಭಜನಾ ಮಂಡಳಿಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಈ ಸಭೆಯಲ್ಲಿ ಭಜನಾ ಪರಿಷತ್ತಿನ ರಾಜ್ಯಾಧ್ಯಕ್ಷರು ವಲಯ ಭಜನಾ ಪರಿಷತ್ತನ್ನು ಬಲಯುತಗೊಳಿಸುವ ಬಗ್ಗೆ ಉಪಸ್ಥಿತರಿದ್ದ ಭಜನಾ ಮಂಡಳಿಯ ಪದಾಧಿಕಾರಿಗಳೊಂದಿಗೆ ಚರ್ಚಿಸಿ ಭಜನಾ ಪರಿಷತ್ತಿನ ಮುಂದಿನ ಕಾರ್ಯ ಚಟುವಟಿಕೆಗಳ ಬಗ್ಗೆ ಸಮಗ್ರವಾದ ಮಾಹಿತಿಯನ್ನು ನೀಡುತ್ತಾ ಮುಂದಿನ ದಿನಗಳಲ್ಲಿ ವಲಯ ಪರಿಷತ್ತಿನ ಪದಾಧಿಕಾರಿಗಳು ಎಲ್ಲಾ ಭಜನಾ ಮಂಡಳಿಗಳಲ್ಲಿ ಭಜನೆ ನಡೆಯುವಂತಹ ಸಂದರ್ಭ ಭೇಟಿ ನೀಡುವ ಅಗತ್ಯತೆಯನ್ನು ವಿವರಿಸಿ ಮುಂದಿನ ತಿಂಗಳು ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ನಡೆಯಲಿರುವ ಭಜನಾ ಕಮ್ಮಟದ ಬಗ್ಗೆ ವಿವರಿಸುತ್ತಾ ಶಿಬಿರಾರ್ಥಿಗಳನ್ನು ಆಯ್ಕೆ ಮಾಡುವ ಬಗ್ಗೆ ಚರ್ಚಿಸಿದರು. ಈ ಸಂದರ್ಭದಲ್ಲಿ ಸಲಹೆಗಾರರಾದ ನಾಗೇಶ್ ರವರ ಸಲಹೆಯಂತೆ ಉಪಸ್ಥಿತರಿದ್ದ ಭಜನಾ ಮಂಡಳಿಗಳ ಪದಾಧಿಕಾರಿಗಳ ಒಪ್ಪಿಗೆ ಮೇರೆಗೆ ಈ ತಿಂಗಳಲ್ಲಿ ಮತ್ತೊಮ್ಮೆ ಪೂರ್ಣ ಪ್ರಮಾಣದಲ್ಲಿ ವಲಯದ ಭಜನಾ ಮಂಡಳಿಗಳ ಮತ್ತು ಭಜನಾ ತಂಡಗಳ ಪದಾಧಿಕಾರಿಗಳನ್ನು ಸೇರಿಸಿ ಸಭೆ ನಡೆಸುವ ನಿರ್ಣಯ ಕೈಗೊಳ್ಳಲಾಯಿತು.
ಗ್ರಾಮಾಭಿವೃದ್ಧಿ ಯೋಜನೆಯ ವಲಯ ಮೇಲ್ವಿಚಾರಕರಾದ ಗಣೇಶ್ ಕುಮಾರ್ ರವರು ಪ್ರಸ್ತಾವಿಕವಾಗಿ ಮಾತನಾಡಿದರು. ಪ್ರಾರಂಭದಲ್ಲಿ ಅನಿತಾ ರವಿರಾಜ್ ಚಾರ್ಮಾಡಿ ಯವರು ಸ್ವಾಗತಿಸಿ ಕೊನೆಯಲ್ಲಿ ವಂದಿಸಿದರು.

