ಹೆಬ್ರಿ : ತ್ಯಾಗ, ಬಲಿದಾನ ನೀಡಿ ನಮ್ಮ ಹಿರಿಯರು ಪಡೆದಿರುವ ಸ್ವಾತಂತ್ರ್ಯ ಅಮೂಲ್ಯವಾದದು. ಸ್ವಾತಂತ್ರ್ಯ ಹೋರಾಟದಲ್ಲಿ, ಅಖಂಡ ಭಾರತದಲ್ಲಿ ಈ ನಮ್ಮ ಪುಟ್ಟ ಊರಾದ ಮುದ್ರಾಡಿಯ ಕೊಡುಗೆ ಅಪಾರವಾದದು. ಐವರು ಸ್ವಾತಂತ್ರ್ಯ ಹೋರಾಟಗಾರರನ್ನು ದೇಶಕ್ಕೆ ನೀಡಿದ ಹಿರಿಮೆ ನಮ್ಮ ಊರಿದ್ದು. ಅವರ ತ್ಯಾಗ , ಅವರ ಹೋರಾಟದ ಕಿಚ್ಚು , ಛಲ ಹಿರಿಯರಿಂದ ಕೇಳುವಾಗ ಮೈ ರೋಮಾಂಚನಗೊಳ್ಳುತ್ತದೆ. ಇಂದಿನ ಭವ್ಯ ಭಾರತದ ಭವಿತ್ಯವ ವಾಗಿರುವ ನೀವು ಹಿರಿಯರ ಹೋರಾಟದ ಫಲವನ್ನು ನೆನಪಿಸಿಕೊಂಡರಷ್ಟೇ ಸಾಲದು, ದೇಶಪ್ರೇಮವನ್ನು ಹೊಂದಬೇಕು. ದೇಶಕ್ಕಾಗಿ ಏನಾದರೂ ಉತ್ತಮ ಕೆಲಸ ಮಾಡುವ ಮನಸ್ಸಿರಬೇಕು. ದೇಶದ ಪರವಾಗಿ ನೈತಿಕ ಹಾಗೂ ದೈಹಿಕ ಬೆಂಬಲದ ಬಲ ನೀಡುವ ಛಲ ಸರ್ವರೊಳಗೆ ಬರಲಿ ಎಂದು ಶಾಲಾ ಆಡಳಿತ ಮಂಡಳಿಯ ಕಾರ್ಯದರ್ಶಿ ಮುದ್ರಾಡಿ ಉಪ್ಪರಿಗೆ ಮನೆ ಅಶೋಕ ಕುಮಾರ್ ಶೆಟ್ಟಿ ಹೇಳಿದರು.
ಅವರು ಮುದ್ರಾಡಿಯ ಎಂ.ಎನ್.ಡಿ.ಎಸ್.ಎಂ. ಅನುದಾನಿತ ಪ್ರೌಢಶಾಲೆಯಲ್ಲಿ 80 ನೆಯ ಸ್ವಾತಂತ್ರ್ಯೋತ್ಸವ ಸಂದರ್ಭದಲ್ಲಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಶುಭ ಸಂದೇಶ ನೀಡಿದರು.
ಇದೇ ಸಂದರ್ಭದಲ್ಲಿ ಚಿಗುರು ಗೆಳೆಯರ ಬಳಗ, ಮುದ್ರಾಡಿ ಇವರು ಶಾಲೆಯ ಎಲ್ಲಾ ವಿದ್ಯಾರ್ಥಿಗಳಿಗೆ ನೀಡಿದ ಐಡಿ ಕಾರ್ಡ್ ಅನ್ನು ವಿತರಿಸಲಾಯಿತು . ಜೊತೆಗೆ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ನಡೆಸಿದ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಮತ್ತು ಹೆಬ್ರಿ ತಾಲೂಕು ಆಡಳಿತದ ವತಿಯಿಂದ ನಾಡಪ್ರಭು ಕೆಂಪೇಗೌಡ ಜಯಂತಿ ಪ್ರಯುಕ್ತ ನಡೆದ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
ವೇದಿಕೆಯಲ್ಲಿ, ಬೆಂಗಳೂರಿನ ಉದ್ಯಮಿಗಳಾದ ಕೆರಾಡಿ ನಾರಾಯಣ ಕೊಠಾರಿ, ಶಾಲಾ ಹಳೆ ವಿದ್ಯಾರ್ಥಿ ಸಂಘದ ಸದಸ್ಯರಾದ ಭಕ್ರೆ ಕೆಲಕಿಲ ಪ್ರೀತಮ್ ಶೆಟ್ಟಿ, ಶಾಲಾ ವಿದ್ಯಾರ್ಥಿ ನಾಯಕ ಪ್ರತೀಕ್ ಹೆಬ್ಬಾರ್ ಉಪಸ್ಥಿತರಿದ್ದರು .
ಮುಖ್ಯ ಶಿಕ್ಷಕ ಬಲ್ಲಾಡಿ ಚಂದ್ರಶೇಖರ ಭಟ್ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ವಿದ್ಯಾರ್ಥಿನಿ ಅಂಜಲಿ ಕಾರ್ಯಕ್ರಮ ನಿರೂಪಿಸಿ, ತನಿಯ ವಂದಿಸಿದರು. ಶಿಕ್ಷಕರಾದ ಮಹೇಶ ನಾಯ್ಕ ಕೆ., ಪಿ. ವಿ.ಆನಂದ, ಶ್ಯಾಮಲಾ , ರಘುಪತಿ ಹೆಬ್ಬಾರ್, ಅನುಷಾ, ಮಹೇಶ್ ಎಂ. ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಅನಂತರ ವಿದ್ಯಾರ್ಥಿಗಳಿಂದ ಆಕರ್ಷಕ, ಭವ್ಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು..

