ಪದ್ಮುಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಕ್ಕೆ ಸತತ 6ನೇ ಬಾರಿ ‘ಅತ್ಯುತ್ತಮ ಸಹಕಾರಿ ಸಂಘ’ ಪ್ರಶಸ್ತಿ

0
8

ಪದ್ಮುಂಜ : ಕಳೆದ ಆರ್ಥಿಕ ವರ್ಷದಲ್ಲಿ ಅತ್ಯುತ್ತಮ ಆರ್ಥಿಕ ಪ್ರಗತಿ ಸಾಧಿಸಿದ ಪದ್ಮುಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಕ್ಕೆ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ (ಡಿಸಿಸಿ ಬ್ಯಾಂಕ್) ವತಿಯಿಂದ ನೀಡಲಾಗುವ “ವರ್ಷದ ಅತ್ಯುತ್ತಮ ಸಹಕಾರಿ ಸಂಘ” ಪ್ರೋತ್ಸಾಹಕ ಪ್ರಶಸ್ತಿ ಲಭಿಸಿದೆ.

ಇದರೊಂದಿಗೆ ಸಂಘವು ಸತತ ಆರನೇ ಬಾರಿಗೆ ಈ ಪ್ರತಿಷ್ಠಿತ ಪ್ರಶಸ್ತಿಗೆ ಭಾಜನವಾಗಿದೆ. ಆ. 22ರಂದು ನಡೆದ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ವಾರ್ಷಿಕ ಮಹಾಸಭೆಯಲ್ಲಿ ಸಂಘದ ಸಾಧನೆಯನ್ನು ಗುರುತಿಸಿ ಪ್ರೋತ್ಸಾಹಕ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಡಿಸಿಸಿ ಬ್ಯಾಂಕ್ ಅಧ್ಯಕ್ಷರಾದ ಡಾ. ಎಂ.ಎನ್. ರಾಜೇಂದ್ರ ಕುಮಾರ್ ಹಾಗೂ ಬ್ಯಾಂಕಿನ ನಿರ್ದೇಶಕರುಗಳ ಉಪಸ್ಥಿತಿಯಲ್ಲಿ ಪದ್ಮುಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾದ ರಕ್ಷಿತ್. ಪಿ, ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಂಕಿತಾ. ಬಿ ಅವರು ಗಣ್ಯರಿಂದ ಪ್ರಶಸ್ತಿ ಸ್ವೀಕರಿಸಿದರು.

ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷರಾದ ಅಶೋಕ್.ಪಿ ನಿರ್ದೇಶಕರಾದ ಡೀಕಯ್ಯಗೌಡ, ರುಕ್ಮಯ್ಯಗೌಡ,ಪ್ರಸಾದ್.ಎ, ಉದಯ. ಬಿ.ಕೆ, ಚಂದನ್ ಕುಮಾರ್ ಉಪಸ್ಥಿತರಿದ್ದರು.

ಸಂಘದ ಸತತ ಆರ್ಥಿಕ ಪ್ರಗತಿ ಹಾಗೂ ಸದಸ್ಯರಿಗೆ ನೀಡುತ್ತಿರುವ ಉತ್ತಮ ಸೇವೆಯನ್ನು ಗುರುತಿಸಿ ದೊರೆತಿರುವ ಈ ಪ್ರಶಸ್ತಿ ಸಂಘದ ಆಡಳಿತ ಮಂಡಳಿ, ಸಿಬ್ಬಂದಿ ಹಾಗೂ ಸದಸ್ಯರಲ್ಲಿ ಅಪಾರ ಸಂತಸ ಮೂಡಿಸಿದೆ. ಮುಂದಿನ ದಿನಗಳಲ್ಲಿಯೂ ಇನ್ನಷ್ಟು ಉತ್ತಮ ಸೇವೆ ಸಲ್ಲಿಸಿ ಹೊಸ ಸಾಧನೆಗಳನ್ನು ಮಾಡುವ ವಿಶ್ವಾಸವನ್ನು ಸಂಘದ ಪದಾಧಿಕಾರಿಗಳು ವ್ಯಕ್ತಪಡಿಸಿದ್ದಾರೆ.