ಕಾರ್ಕಳ: ಮಾಳ ಕೋಟೆ ಬಸದಿಯಲ್ಲಿ 5 ಅಪರೂಪದ ಜಿನ ಶಾಸನಗಳ ಪತ್ತೆ : ಸಂಶೋಧಕ ಶ್ರುತೇಶ್ ಆಚಾರ್ಯರಿಂದ ಅಧ್ಯಯನ

0
18

​ಕಾರ್ಕಳ : ಉಡುಪಿ ಜಿಲ್ಲೆ ಕಾರ್ಕಳ ತಾಲ್ಲೂಕಿನ ಸ್ವಸ್ತಿ ಶ್ರೀ ಲಲಿತಕೀರ್ತಿ ಭಟ್ಟಾರಕ ರಾಜಗುರು ಪೀಠದ ಪರಂಪರೆಗೆ ಒಳಪಟ್ಟ, ಮಾಳ ಗ್ರಾಮ ಪಂಚಾಯತಿ ವ್ಯಾಪ್ತಿಗೆ ಸೇರಿದ ಐತಿಹಾಸಿಕ ‘ಕೋಟೆ ಬಸದಿ’ಯಲ್ಲಿ ಆದಿನಾಥ ತೀರ್ಥಂಕರ ಸ್ವಾಮಿ, ನೇಮಿನಾಥ ಸ್ವಾಮಿ ಹಾಗೂ ಎಡಬಲದಲ್ಲಿ ಪಾರ್ಶ್ವನಾಥ ಸ್ವಾಮಿ, ಚಂದ್ರನಾಥ ಸ್ವಾಮಿ ಮತ್ತು ಪದ್ಮಾವತಿ ದೇವಿ ಸನ್ನಿಧಾನವಿದೆ.

ಈ ಸನ್ನಿಧಾನಗಳನ್ನು ಕ್ರಮವಾಗಿ ಪೆರ್ಮುಡೆ ಗುತ್ತು, ಸೌಟಬೆಟ್ಟು ಗುತ್ತು ಹಾಗೂ ಕೊಡಂಗೆ ಗುತ್ತು ಮನೆತನದವರಿಂದಲೂ ಮತ್ತು ಜೈನ ಸಮಾಜದವರಿಂದಲೂ ಅನಾದಿ ಕಾಲದಿಂದ ಆರಾಧಿಸಿಕೊಂಡು ಬರಲಾಗುತ್ತಿದೆ. ಪ್ರಸ್ತುತ ಈ ಸನ್ನಿಧಾನದಲ್ಲಿ ಜೀರ್ಣೋದ್ಧಾರದ ನಿಮಿತ್ತವಾಗಿ ಬಸದಿಯ ಮುಖ್ಯ ದೇವರ ಹಾಗೂ ಪರಿವಾರ ದೇವರುಗಳ ಮೂರ್ತಿಗಳನ್ನು ಬಾಲಾಲಯದಲ್ಲಿ ಇರಿಸಲಾಗಿದೆ.

​ಇಲ್ಲಿನ ಬಾಲಾಲಯದಲ್ಲಿ ಒಟ್ಟು 5 ಪ್ರಾಚೀನ ಶಾಸನಗಳು ಲಭ್ಯವಾಗಿವೆ. ಖ್ಯಾತ ಆಯುರ್ವೇದ ವೈದ್ಯರಾದ ಡಾ. ಪಿ. ಸತ್ಯನಾರಾಯಣ ಭಟ್ ಅವರ ಮಾಹಿತಿಯ ಮೇರೆಗೆ, ಉಡುಪಿಯ ಪ್ರಾಚ್ಯಸಂಚಯ ಸಂಶೋಧನ ಕೇಂದ್ರದ ಅಧ್ಯಯನ ನಿರ್ದೇಶಕರಾದ ಪ್ರೊ. ಎಸ್.ಎ. ಕೃಷ್ಣಯ್ಯ ಅವರ ನೇತೃತ್ವದ ತಂಡವು ಈ ಬಸದಿಗೆ ಭೇಟಿ ನೀಡಿತ್ತು. ಈ ಸಂದರ್ಭದಲ್ಲಿ ಅಲ್ಲಿನ ಜಿನ ಪ್ರತಿಮೆಗಳು ಹಾಗೂ ಶ್ರುತಸ್ಕಂದದ ಪೀಠಭಾಗದಲ್ಲಿ ಪ್ರಾಚೀನ ಶಾಸನಗಳು ಕಂಡುಬಂದಿದ್ದವು. ಈ ಶಾಸನಗಳ ಕುರಿತು ಅಧಿಕೃತ ಮಾಹಿತಿ ಲಭ್ಯವಿಲ್ಲದ ಕಾರಣ, ಪ್ರೊ. ಎಸ್.ಎ. ಕೃಷ್ಣಯ್ಯ ಅವರ ಕೋರಿಕೆಯ ಮೇರೆಗೆ ಇತಿಹಾಸ ಮತ್ತು ಪುರಾತತ್ತ್ವ ಸಂಶೋಧಕ ಶ್ರುತೇಶ್ ಆಚಾರ್ಯ ಮೂಡುಬೆಳ್ಳೆ ಅವರು ಇವುಗಳ ಸಮಗ್ರ ಅಧ್ಯಯನವನ್ನು ನಡೆಸಿರುತ್ತಾರೆ.

​ಸಂಶೋಧನ ವರದಿಯ ಪ್ರಕಾರ, ಬಸದಿಯಲ್ಲಿ ಒಟ್ಟು 5 ಶಾಸನಗಳು ಲಭ್ಯವಾಗಿದ್ದು, ಇದರಲ್ಲಿ 3 ಶಾಸನಗಳು ಶಿಲಾ ಜಿನಪ್ರತಿಮೆಗಳ ಮೇಲೆ ಹಾಗೂ 2 ಶಾಸನಗಳು ಲೋಹದ ಮೇಲೆ ಕೆತ್ತಲ್ಪಟ್ಟಿವೆ.

​ಶಾಸನಗಳ ವಿವರಗಳು.

​ಗಣಧರ ಪಾದ ಪ್ರತಿಷ್ಠಾ ಶಾಸನ: ಜೈನ ಧರ್ಮದಲ್ಲಿ, ‘ಗಣಧರ’ ಎಂಬ ಪದವನ್ನು ತೀರ್ಥಂಕರರ ಮುಖ್ಯ ಶಿಷ್ಯನನ್ನು ಉಲ್ಲೇಖಿಸಲು ಬಳಸಲಾಗುತ್ತದೆ. ಗಣಧರರು ತೀರ್ಥಂಕರರ ಬೋಧನೆಗಳನ್ನು ಸಾಮಾನ್ಯ ಜನರಿಗೆ ತಿಳಿಸುತ್ತಾರೆ. ಜೈನ ಧರ್ಮದ ಸನ್ಯಾಸಿ ಸಂಘವನ್ನು ಗಣಗಳು ಎಂದು ಕರೆಯಲ್ಪಡುವ ಹಲವಾರು ಪಂಗಡಗಳು ಅಥವಾ ಗುಂಪುಗಳಾಗಿ ವಿಂಗಡಿಸಲಾಗಿದೆ. ಅದೇ ರೀತಿ ಗಣಧರರು ಮತ್ತು ತಪಸ್ವಿಗಳಿಗೆ ಗೌರವ ಸೂಚಕವಾಗಿ ಗಣಧರ ಪಾದಗಳನ್ನು ಅನೇಕ ಜೈನ ದೇವಾಲಯಗಳಲ್ಲಿ ಸ್ಥಾಪಿಸಲಾಗುತ್ತದೆ. ಅದೇ ಪರಂಪರೆಯಲ್ಲಿ ಇಲ್ಲಿಯೂ ಕಂಚಿನ ಗಣಧರ ಪಾದವನ್ನು ಸ್ಥಾಪಿಸಲಾಗಿದ್ದು, ಅದರ ಪೀಠದ ಮೇಲೆ ಶಾಸನವನ್ನು ಕೆತ್ತಲಾಗಿದೆ. ಮೂರು ಸಾಲಿನ ಈ ಶಾಸನವು ಮಾಳದ ಕೋಟೆ ಬಸದಿಗೆ ಹೆಗಡೆಯ ಮಗ ‘ವಿಞ’ ಎಂಬುವವರು ಗಣಧರ ಪಾದವನ್ನು ಮಾಡಿಸಿಕೊಟ್ಟರು ಎಂಬುದನ್ನು ದಾಖಲಿಸುತ್ತದೆ. ಶಾಸನದ ಲಿಪಿಯ ಆಧಾರದ ಮೇಲೆ ಇದು 18-19ನೇ ಶತಮಾನಕ್ಕೆ ಸೇರಿದೆ ಎಂದು ತೀರ್ಮಾನಿಸಲಾಗಿದೆ.

​ಶ್ರುತಸ್ಕಂದ ಶಾಸನ: ಕಂಚಿನ ಶ್ರುತಸ್ಕಂದದ ಪೀಠಭಾಗದ ಹಿಂಭಾಗದಲ್ಲಿ ನಾಲ್ಕು ಸಾಲಿನ ಶಾಸನವಿದೆ. ಇದು ಜಯ ಸಂವತ್ಸರದಲ್ಲಿ, ಮಾಘ ಮಾಸದ ಕೃಷ್ಣ ಪಕ್ಷದ (ಬಹುಳ) ಪ್ರಥಮ ದಿನವಾದ ಪಾಡ್ಯಮಿ (೧), ಗುರುವಾರದಂದು (ಸಾಮಾನ್ಯ ಶಕೆ 1655, ಫೆಬ್ರವರಿ 15, ಗುರುವಾರ) ತೆಳಾರೆ (ಪ್ರಸ್ತುತ ತೆಲ್ಲಾರ್) ಬಳಿಯ ದೇಮ ನಾಯಕರು ತ್ರಿಕಾಲ ತದಿಗೆಯ ನೋಂಪಿಯ (ವ್ರತ) ಉದ್ಯಾಪನೆ ಮಾಡಿ ಮಾಳದ ಬಸ್ತಿಗೆ ಶ್ರುತವನ್ನು ಸಮರ್ಪಿಸಿರುವುದನ್ನು ಸೂಚಿಸುತ್ತದೆ.

​ಪಾರ್ಶ್ವನಾಥ ತೀರ್ಥಂಕರರ ಪೀಠ ಭಾಗ (ಶಿಲಾ ಪ್ರತಿಮೆ): ಕಾಯೋತ್ಸರ್ಗ್ಗ ಭಂಗಿಯಲ್ಲಿರುವ ಪಾರ್ಶ್ವನಾಥ ತೀರ್ಥಂಕರರ ಶಿಲಾ ಪ್ರತಿಮೆಯ ಪೀಠಭಾಗದಲ್ಲಿ ಸ್ವಸ್ತಿಕ ಚಿಹ್ನೆಯೊಂದಿಗೆ ಪ್ರಾರಂಭವಾಗುವ ಒಂದು ಸಾಲಿನ ಶಾಸನವಿದೆ. ಈ ಶಾಸನವು ಪಾರ್ಶ್ವನಾಥ ತೀರ್ಥಂಕರರ ಮೂರ್ತಿಯನ್ನು ‘ಪಾಯಂಣ’ ಎಂಬ ವ್ಯಕ್ತಿಯು ಮಾಡಿಸಿರುತ್ತಾನೆ ಎಂಬುದನ್ನು ದಾಖಲಿಸುತ್ತದೆ. ಲಿಪಿ ಲಕ್ಷಣದ ಆಧಾರದ ಮೇಲೆ ಈ ಶಾಸನ ಸಹಿತ ತೀರ್ಥಂಕರರ ಮೂರ್ತಿಯು 14ನೇ ಶತಮಾನಕ್ಕೆ ಸೇರಿದೆ ಎಂದು ತೀರ್ಮಾನಿಸಲಾಗಿದೆ.

​ಪಾರ್ಶ್ವನಾಥ ತೀರ್ಥಂಕರರ ಮೂರ್ತಿಯ ಹಿಂಭಾಗ: ಇನ್ನೊಂದು ಪಾರ್ಶ್ವನಾಥ ತೀರ್ಥಂಕರರ ಶಿಲಾ ಪ್ರತಿಮೆಯ ಹಿಂಭಾಗದಲ್ಲಿ 8 ಸಾಲಿನ ಶಾಸನವಿದೆ. ಇದರಲ್ಲಿ ‘ವಿರೋಧಿವಿಕ್ರುತು ಸಂವತ್ಸರ’ ಎಂದು ಉಲ್ಲೇಖಿಸಲಾಗಿದ್ದು, ಇದನ್ನು ‘ವಿರೋಧಿಕೃತು ಸಂವತ್ಸರ’ ಎಂದು ಪರಿಗಣಿಸಬೇಕು. ಈ ಶಾಸನವು ವಿರೋಧಿಕೃತು ಸಂವತ್ಸರದ ವೈಶಾಖ ಶುದ್ಧ ತ್ರಯೋದಶಿಯ ಚಂದ್ರವಾರ (ಸಾಮಾನ್ಯ ಶಕೆ 1611, ಏಪ್ರಿಲ್ 15, ಸೋಮವಾರ)ದಂದು ಐತಪ್ಪ ಬಳಿಯ ಸಿರುಳಾಲ (ಪ್ರಸ್ತುತ ಶಿರ್ಲಾಲು) ಕೋಟಿಲದೇವನು ಪ್ರತಿಷ್ಠಾಪಿಸಿದ ಚವಿಸತೀರ್ಥ ಪಾರ್ಶ್ವನಾಥ ಪ್ರತಿಮೆಯ ಅಮೃತಪಡಿಗೆ (ದೈನಂದಿನ ಪೂಜೆ ಅಥವಾ ನೈವೇದ್ಯಕ್ಕಾಗಿ) ಮೂರುವರೆ ಮುಡಿ ಅಕ್ಕಿಯನ್ನು ಸಮರ್ಪಿಸಿರುವುದನ್ನು ದಾಖಲಿಸುತ್ತದೆ.

​ಪಾರ್ಶ್ವನಾಥ ತೀರ್ಥಂಕರರ ಪೀಠ ಭಾಗ (ಅಮೃತಶಿಲೆ): ಅಮೃತಶಿಲೆಯಲ್ಲಿ ನಿರ್ಮಾಣವಾಗಿರುವ ತೀರ್ಥಂಕರರ ಮೂರ್ತಿಯು ಪದ್ಮಾಸನ ಭಂಗಿಯಲ್ಲಿ ಕುಳಿತಿದ್ದು, ಪೀಠ ಭಾಗದಲ್ಲಿ 2 ಸಾಲಿನ ದೇವನಾಗರಿ ಲಿಪಿಯ ಶಾಸನವಿದೆ. ಸಾಮಾನ್ಯ ಶಕೆ 17ನೇ ಶತಮಾನದಲ್ಲಿ ಈ ಮೂರ್ತಿಯನ್ನು ಪ್ರತಿಷ್ಠಾಪಿಸಿದ ವಿವರವನ್ನು ಈ ಶಾಸನವು ತಿಳಿಸುತ್ತದೆ.

​ಲಭ್ಯವಿರುವ ಶಾಸನಗಳ ತುಲನಾತ್ಮಕ ಅಧ್ಯಯನದಿಂದ, ಕೆರ್ವಾಶೆಯ ವರ್ಧಮಾನ ಬಸದಿಯ ಶಾಸನ ಕಾಲಮಾನಕ್ಕೂ ಕೋಟೆ ಬಸದಿಯ ಶಾಸನಗಳ ಕಾಲಕ್ಕೂ ನಿಖರವಾದ ಹೊಂದಾಣಿಕೆ ಇರುವುದು ದೃಢಪಡುತ್ತದೆ. ಈ ಐತಿಹಾಸಿಕ ಸಾಕ್ಷ್ಯಾಧಾರಗಳ ವಿಶ್ಲೇಷಣೆಯಂತೆ, ಕೋಟೆ ಬಸದಿಯು ಇದೇ ಕಾಲಘಟ್ಟಕ್ಕೆ ಅಂದರೆ 14-15ನೇ ಶತಮಾನಕ್ಕೆ ಸೇರಿದೆ ಎಂದು ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ.

​ಕ್ಷೇತ್ರಕಾರ್ಯ ಶೋಧನೆಯಲ್ಲಿ ಕೋಟೆ ಬಸದಿಯ ಚಂದ್ರನಾಥ ಇಂದ್ರರು, ಇತಿಹಾಸ ಮತ್ತು ಪುರಾತತ್ತ್ವ ಸಂಶೋಧನಾರ್ಥಿ ಶಶಾಂತ್ ಪಳ್ಳಿ ಹಾಗೂ ಇತಿಹಾಸ ಆಸಕ್ತರಾದ ಕೇಶವ ಡೋಂಗ್ರೆ ಮತ್ತು ಯದುಗೋಪನ್ ಕೆ.ಆರ್ ಅವರು ಸಹಕರಿಸಿದ್ದಾರೆ.